Bengaluru-Chennai Expressway: ಬೆಂಗಳೂರು - ಚೆನ್ನೈ 3 ಗಂಟೆ..! ಆಸಕ್ತಿದಾಯಕ ವಿಚಾರಗಳಿವು
ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ (Bengaluru Chennai Expressway) ಕಾಮಗಾರಿ ಭರದಿಂದ ಸಾಗುತ್ತಿದ್ದು, ಮಾರ್ಚ್ 2024ರೊಳಗೆ ಪೂರ್ಣಗೊಳ್ಳುವ ನೀರಿಕ್ಷೆಯಿದೆ. ಈ ಹೆದ್ದಾರಿ ನಿರ್ಮಾಣದಿಂದ ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿಯು ತುಂಬಾ ಕಡಿಮೆಯಾಗಲಿದ್ದು, ಎಕ್ಸ್ಪ್ರೆಸ್ವೇ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಸಕ್ತಿದಾಯಕ ವಿಷಯಗಳು ಇಲ್ಲಿವೆ.
ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿದೆ. 2022ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 262 ಕಿಮೀ ಉದ್ದದ ರಸ್ತೆ ಇದಾಗಿದ್ದು, ಈ ಹೆದ್ದಾರಿ ನಿರ್ಮಾಣದಿಂದ ಇವೆರೆಡು ನಗರಗಳ ಜನರಿಗೆ ಭಾರೀ ಸಹಾಯವಾಗಲಿದೆ.

ಈಗಿರುವ 5 - 6 ಗಂಟೆ ಪ್ರಯಾಣದ ಅವಧಿಯು 3 ಗಂಟೆಗೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಎಕ್ಸ್ಪ್ರೆಸ್ವೇಯಲ್ಲಿ ವಾಹನಗಳ ವೇಗಮಿತಿಯನ್ನು ಗಂಟೆಗೆ 120 ಕಿಮೀ.ಗೆ ಅನುಮತಿಸಬಹುದು. ಇದು, ಬೆಂಗಳೂರು - ಚೆನ್ನೈ ನಗರಗಳ ನಡುವಿನ ಅಂತರವನ್ನು ಸರಿಸುಮಾರು 80 ಕಿಮೀ ಕಡಿಮೆ ಮಾಡುತ್ತದೆ. ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗಲಿದೆ.
ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬರೋಬ್ಬರಿ ರೂ.17,000 ಕೋಟಿ ವ್ಯಯಿಸುತ್ತಿದೆ ಎಂದು ಲೆಕ್ಕಹಾಕಲಾಗಿದೆ. ಪ್ರಸ್ತುತ, 4 ಪಥದ ಹೆದ್ದಾರಿಯಾಗಿರಲಿದ್ದು, ವಾಹನ ದಟ್ಟಣೆಗೆ ತಕ್ಕಂತೆ 8 ಪಥಗಳಿಗೆ ವಿಸ್ತರಿಸಬಹುದು. ಈ ಎಕ್ಸ್ಪ್ರೆಸ್ವೇ 17 ಫ್ಲೈಓವರ್ಗಳು, 41 ವೆಹಿಕಲ್ ಅಂಡರ್ಪಾಸ್, 52 ಪಾದಚಾರಿ ಅಂಡರ್ಪಾಸ್, 162 ಸೇತುವೆ ಮತ್ತು 4 ರೈಲ್ವೆ ಕ್ರಾಸಿಂಗ್ಗಳನ್ನು ಒಳಗೊಂಡಿರಲಿದೆ.
ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ದೇಶದ ಮೊದಲ 'ಹಸಿರು ಹೆದ್ದಾರಿ' ಎಂಬ ಖ್ಯಾತಿಗಳಿಸಲಿದೆ. ಈ ರಸ್ತೆ ಕಾಮಗಾರಿಗೆ ಸುಮಾರು 33 ಕಿಲೋಮೀಟರ್ ಅರಣ್ಯ ಜಾಗವನ್ನು ಮಾತ್ರ ಬಳಸಲಾಗುತ್ತಿದೆ. ರಸ್ತೆ ನಿರ್ಮಾಣದ ವೇಳೆ ಸಾವಿರಾರು ಮರಗಳನ್ನು ಕಡಿಯಲಾಗಿದ್ದು, ಅದಕ್ಕಾಗಿ ಹೆದ್ದಾರಿ ಅಕ್ಕ - ಪಕ್ಕದಲ್ಲಿ ಹೆಚ್ಚಿನ ಮರಗಳನ್ನು ಬೆಳೆಸಲು ತೀರ್ಮಾನಿಸಿದೆ. ಎಕ್ಸ್ಪ್ರೆಸ್ವೇ, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯವಾಗಲಿದೆ.
ಸದ್ಯ, ಬೆಂಗಳೂರಿಂದ ಚೆನ್ನೈ ತೆರಳಲು ಎರಡು ಹೆದ್ದಾರಿಗಳಿವೆ. ಮೊದಲನೆಯದು 335 ಕಿಮೀ ಉದ್ದದ ಹಳೆಯ ಮದ್ರಾಸ್ ರೋಡ್ (NH - 75). ಮತ್ತೊಂದು, 372 ಕಿಲೋಮೀಟರ್ ಉದ್ದದ ರಸ್ತೆಯಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೊಸೂರು, ಕೃಷ್ಣಗಿರಿ, ಅಂಬೂರು, ವೆಲ್ಲೂರು, ಕಾಂಚಿಪುರಂ, ಶ್ರೀಪೆರಂಬದೂರು ಮಾರ್ಗವಾಗಿ ಚೆನ್ನೈ ತಲುಪುತ್ತದೆ. ಹೊಸ ಎಕ್ಸ್ಪ್ರೆಸ್ವೇಯಿಂದ ಇವೆರೆಡು ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ.
ಎಕ್ಸ್ಪ್ರೆಸ್ವೇ, ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರಿನ ಮೂಲಕ ಹಾದುಹೊಗಲಿದೆ. ಈ ಹೆದ್ದಾರಿ ನಿರ್ಮಾಣವಾದ ಮೇಲೆ, ಕರ್ನಾಟಕದ ಹೊಸಕೋಟೆ ಮತ್ತು ಚೆನ್ನೈ ಸಮೀಪವಿರುವ ಶ್ರೀಪೆರಂಬದೂರಿನಲ್ಲಿ ರಿಯಲ್ ಎಸ್ಟೇಟ್ (ನಿವೇಶನ ಹಾಗೂ ಭೂಮಿ) ಬೆಲೆಗಳು ಗಣನೀಯವಾಗಿ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನು, ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಪ್ರಯಾಣದ ಅವಧಿ ಕಡಿಮೆಯಾಗಲಿದ್ದು, ಕರ್ನಾಟಕ, ತಮಿಳುನಾಡು ರಾಜ್ಯಗಳ ಕೈಗಾರಿಕೆಗಳ ಪ್ರಗತಿಗೆ ಮತ್ತಷ್ಟು ವೇಗ ಸಿಗಲಿದೆ. ಚೆನ್ನೈ ಬಂದರು ನಗರಿಯಾಗಿರುವುದರಿಂದ ಆಮದು, ರಫ್ತು ಚಟುವಟಿಕೆಗಳು ಶೀಘ್ರವಾಗಿ ನಡೆದು, ಎರಡು ರಾಜ್ಯಗಳು ಆರ್ಥಿಕವಾಗಿ ಬೇಗನೇ ಪ್ರಗತಿ ಕಾಣಬಹುದು. ಕೆಲವೇ ತಿಂಗಳಲ್ಲಿ ಈ ಹೆದ್ದಾರಿ ಲೋಕಾರ್ಪಣೆಯಾಗಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications