Vande Bharat Express: ಬೆಂಗಳೂರಿನಿಂದ ಹುಬ್ಬಳ್ಳಿಗೆ 'ವಂದೇ ಭಾರತ್' ರೈಲಿನಲ್ಲಿ ತೆರಳುವವರಿಗೆ ಸಿಹಿಸುದ್ದಿ
ಬೆಂಗಳೂರು (Bangalore) - ಧಾರವಾಡ (Dharwad) ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express)ನಲ್ಲಿ ಪ್ರಯಾಣಿಸುವವರಿಗೆ ಸಿಹಿಸುದ್ದಿ ದೊರೆತಿದೆ. ಈ ರೈಲಿನ ಸಮಯವನ್ನು ಪರಿಷ್ಕರಣೆ ಮಾಡಲಾಗಿದ್ದು, ಅಕ್ಟೋಬರ್ 7 ರಿಂದಲೇ ನೂತನ ವೇಳಾಪಟ್ಟಿ ಜಾರಿಯಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಹುಬ್ಬಳ್ಳಿ (Hubballi) - ಯಶವಂತಪುರ (Yesvantpur) ನಿಲ್ದಾಣಗಳಲ್ಲಿ ಮಾತ್ರ ವಂದೇ ಭಾರತ್ ಎಕ್ಸ್ಪ್ರೆಸ್ ನಿಲುಗಡೆಯಾಗುವ ಸಮಯವನ್ನು ಪರಿಷ್ಕರಿಸಲಾಗಿದೆ. ಹೊಸ ವೇಳಾಪಟ್ಟಿ ಪ್ರಕಾರ, ಈ ರೈಲು ಅರ್ಧ ಗಂಟೆ ಮೊದಲೇ ಹುಬ್ಬಳ್ಳಿ ನಿಲ್ದಾಣವನ್ನು ತಲುಪುತ್ತದೆ. ಮೊದಲು ಬೆಳಗ್ಗೆ 11.30ರ ಸುಮಾರಿಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ (ಹುಬ್ಬಳ್ಳಿ) ನಿಲ್ದಾಣಕ್ಕೆ ಹೋಗುತ್ತಿದ್ದ ರೈಲು, ಇನ್ಮುಂದೆ ಬೆಳಗ್ಗೆ 11ಕ್ಕೆ ತೆರಳಲಿದೆ.

ಅದೇ ರೀತಿಯಲ್ಲಿ ಧಾರವಾಡದಿಂದ ಹೊರಡುತ್ತಿದ್ದ ಈ ರೈಲು ಸಂಜೆ 7.15ರ ಸುಮಾರಿಗೆ ಯಶವಂತಪುರ ನಿಲ್ದಾಣಕ್ಕೆ ಬರುತ್ತಿತ್ತು. ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿರುವ ಕಾರಣ, ಸಂಜೆ 7ರೊಳಗೆ ಇಲ್ಲಿಗೆ ಬರಲಿದ್ದು, ಆ ಬಳಿಕ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ಉಳಿದಂತೆ ಇತರೆ ನಿಲ್ದಾಣಗಳ ನಿಲುಗಡೆ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿಯೂ ತಿಳಿಸಿದೆ.
ಮಂಗಳವಾರ ಹೊರತುಪಡಿಸಿ, ಪ್ರತಿದಿನ ಸಂಚರಿಸುವ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಬೆಳಗ್ಗೆ 5.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು) ನಿಲ್ದಾಣದಿಂದ ಸಂಚಾರವನ್ನು ಆರಂಭಿಸಿ, ಮಧ್ಯಾಹ್ನ12.10ರ ಸುಮಾರಿಗೆ ಧಾರವಾಡ ತಲುಪುತ್ತದೆ. ಇಲ್ಲಿಂದ ಮಧ್ಯಾಹ್ನ 1.15ಕ್ಕೆ ಪ್ರಯಾಣ ಆರಂಭಿಸುವ ರೈಲು, ಸಂಜೆ 7.45ರ ಸುಮಾರಿಗೆ ಬೆಂಗಳೂರು ನಿಲ್ದಾಣಕ್ಕೆ ಬರುತ್ತದೆ.
ಸದ್ಯ, ದೇಶದಲ್ಲಿ ಪ್ರೀಮಿಯಂ ಹೈಸ್ವೀಡ್ ರೈಲು ಎಂದು 'ವಂದೇ ಭಾರತ್ ಎಕ್ಸ್ಪ್ರೆಸ್' ಖ್ಯಾತಿ ಗಳಿಸಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ರೈಲುಗಳು ಸಂಚರಿಸುತ್ತಿವೆ. ಫೆಬ್ರವರಿ 2019ರಲ್ಲಿ ನವದೆಹಲಿ - ವಾರಣಾಸಿ ನಡುವೆ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಅವರು, ಹಸಿರು ನಿಶಾನೆ ತೋರಿಸಿದ್ದರು. ಇದು, ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಗರಿಷ್ಠ ವೇಗವನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಲಾಗಿದೆ.
ಸಂಪೂರ್ಣ ಎಸಿ ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು ಹಾಗೂ ಅಗ್ನಿ ನಿರೋಧಕ ಸಾಧನ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಈಗಾಗಲೇ, ರಾಜ್ಯದಲ್ಲಿ ಮೈಸೂರು - ಬೆಂಗಳೂರು - ಚೆನ್ನೈ, ಕಾಚಿಗುಡ (ಹೈದರಾಬಾದ್) - ಯಶವಂತಪುರ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಯಿಸುತ್ತಿದೆ.
ಪ್ರಸ್ತುತವಿರುವ ಈ ರೈಲುಗಳಲ್ಲಿ ರಾತ್ರಿ ಪ್ರಯಾಣ ಅಸಾಧ್ಯ. ಇದನ್ನು ಅರಿತಿರುವ ರೈಲ್ವೆ ಇಲಾಖೆ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇವು ಯಾವುದೇ ವಿಮಾನಕ್ಕೂ ಕಮ್ಮಿಯಿಲ್ಲದಂತಹ ಸೌಲಭ್ಯವನ್ನು ಹೊಂದಿದ್ದು, 2024ರ ಫೆಬ್ರವರಿಯಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಈ ರೈಲು 857 ಬರ್ತ್ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.
ಇನ್ನು, ಮುಂಬರುವ ದಿನಗಳಲ್ಲಿ ಬೆಂಗಳೂರು - ಮಂಗಳೂರು ನಡುವೆಯೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಬೆಂಗಳೂರು - ಧಾರವಾಡ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿರುವುದು ಹುಬ್ಬಳ್ಳಿ ಭಾಗದ ಜನರಿಗೆ ಖುಷಿತಂದಿದ್ದು, ಪಯಣದ ಅವಧಿಯೂ ಅರ್ಧ ಗಂಟೆ ಕಡಿಮೆಯಾಗುತ್ತಿದೆ. ಈಗಾಗಲೇ ವೇಳಾಪಟ್ಟಿ ಅಧಿಕೃತವಾಗಿ ಜಾರಿಗೆ ಬಂದಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications