Expressway: ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಅಪಘಾತ ತಡೆಗೆ ಬಿಗ್ ಪ್ಲಾನ್
ಬೆಂಗಳೂರು - ಮೈಸೂರು ನಡುವಿನ ಎಕ್ಸ್ಪ್ರೆಸ್ ವೇ (Bangalore Mysore Expressway) ಒಂದಿಲ್ಲೊಂದು ಕಾರಣಗಳಿಗೆ ಸದಾ ಸುದ್ದಿಯಲ್ಲಿ ಇರುತ್ತದೆ. ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸಾವಿನ ಸಂಖ್ಯೆಯು ಏರಿಕೆಯಾಗಿದೆ. ಅದನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಗ್ ಪ್ಲಾನ್ ಮಾಡಿದೆ.
ಎಕ್ಸ್ಪ್ರೆಸ್ ವೇ ಮಧ್ಯ ಸಿಗುವ ಪ್ರತಿ ಹಳ್ಳಿಯ ಜನರಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈ ವಾಕ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ತೀರ್ಮಾನ ಮಾಡಿದೆ. ಈ ಹೆದ್ದಾರಿಯಲ್ಲಿ ಸಾರ್ವಜನಿಕರು ರೋಡ್ ದಾಟದಂತೆ ಎರಡು ಕಡೆಗಳಲ್ಲಿ ಕಬ್ಬಿಣದ ಬೇಲಿಯನ್ನು ಹಾಕಲಾಗಿದೆ. ಆದರೆ, ಕೆಲವೆಡೆ ಜನರು ಅದನ್ನು ಕಟ್ ಮಾಡಿ, ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅಪಘಾತಗಳಾಗಿ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ.

ಇದು, 188 ಕಿಲೋಮೀಟರ್ ಉದ್ದದ ದಶಪಥ ಹೆದ್ದಾರಿಯಾಗಿದ್ದು, ಮಂಡ್ಯ ಜಿಲ್ಲೆಯೊಂದರಲ್ಲಿ 55 ಕಿಲೋಮೀಟರ್ ರಸ್ತೆಯಿದೆ. ಇಲ್ಲಿ 18 ಕಡೆ, ಬೆಂಗಳೂರು ಗ್ರಾಮಾಂತರ, ಮೈಸೂರು ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 21 ಕಡೆ ಸ್ಕೈ ವಾಕ್ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧತೆ ನಡೆಸಿದ್ದು, ಅದಕ್ಕಾಗಿ, ಭೂಸ್ವಾದೀನ ಪಡಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿದೆ ಎಂದು ವರದಿಯಾಗಿದೆ.
ಮಂಡ್ಯ ಜಿಲ್ಲೆಯ ವ್ಯಾಪ್ತಿಯೊಂದರಲ್ಲಿಯೇ ಕಳೆದ ಜನರಿಯಿಂದ ಮೇ ವರೆಗೆ (ಕೇವಲ ಐದು ತಿಂಗಳ ಅವಧಿ) ಸುಮಾರು 570 ಅಪಘಾತ ಪ್ರಕರಣಗಳು ದಾಖಲಾಗಿದ್ದು, 50 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 52 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 270 ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಕ್ಸ್ಪ್ರೆಸ್ ವೇಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ನಾನಾ ಕಾರಣಗಳಿವೆ.
ಅವೈಜ್ಞಾನಿಕ ಕಾಮಗಾರಿ ಹಾಗೂ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚಿನ ಸ್ವೀಡ್ ನಲ್ಲಿ ಚಲಿಸುತ್ತಿರುವುದು. ಜೊತೆಗೆ ಬೇಗ ರಸ್ತೆ ದಾಟಲು ಕಬ್ಬಿಣದ ತಡೆ ಬೇಲಿ ಕಟ್ ಮಾಡುತ್ತಿರುವುದು ಮುಖ್ಯ ಕಾರಣವಾಗಿದೆ. ಅಂತೂ ಹೆದ್ದಾರಿ ಪ್ರಾಧಿಕಾರ ಸ್ಕೈ ವಾಕ್ ನಿರ್ಮಾಣ ಮಾಡುವ ಮೂಲಕ ಒಂದಷ್ಟು ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆಯಾಗಿದೆ.
ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಹೆದ್ದಾರಿ ಪ್ರಾಧಿಕಾರ ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿ ರೂ.8172 ಕೋಟಿ ಖರ್ಚು ಮಾಡಿ, ಈ ಎಕ್ಸ್ಪ್ರೆಸ್ ವೇ ನಿರ್ಮಿಸಿದೆ. ಈ ಹೆದ್ದಾರಿಯಿಂದ ಆಗಿರುವ ದೊಡ್ಡ ಅನುಕೂಕವೆಂದರೆ ಪ್ರಯಾಣದ ಅವಧಿ ಕಡಿಮೆಯಾಗುವುದು. ಈ ಮೊದಲು ಬೆಂಗಳೂರಿಂದ ಮೈಸೂರು ತಲುಪಲು 150 ನಿಮಿಷ ಸಮಯ ಹಿಡಿಯುತ್ತಿತ್ತು. ಅದು 90 ನಿಮಿಷಕ್ಕೆ ತಗ್ಗಿದೆ.
ಇನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 22% ಟೋಲ್ ಶುಲ್ಕವನ್ನು ಏರಿಕೆ ಮಾಡಿದ್ದು, ಈ ತಿಂಗಳ ಆರಂಭದಿಂದಲೇ (ಜೂನ್) ಜಾರಿಗೆ ಬಂದಿದೆ. ಸದ್ಯ, ಕಾರು, ವ್ಯಾನ್ ಹಾಗೂ ಜೀಪ್ಗಳು ಏಕಮುಖ ಸಂಚಾರಕ್ಕೆ ರೂ.165, ಲಘು ವಾಹನಗಳು, ಮಿನಿ ಬಸ್ಗಳು ರೂ.270, ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳು ರೂ.565 ಟೋಲ್ ಶುಲ್ಕವನ್ನು ಕಟ್ಟಬೇಕಾಗಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications