ಪಾರ್ಕಿಂಗ್'ಗೆ ಕೊರತೆ ಎದುರಾದ ಹಿನ್ನೆಲೆ, ವಶಪಡಿಸಿಕೊಂಡ ವಾಹನಗಳನ್ನು ಹಿಂದಿರುಗಿಸಲು ಮುಂದಾದ ಬೆಂಗಳೂರು ಪೊಲೀಸರು
ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಸೋಂಕು ಹರಡುವುದನ್ನು ತಡೆಯಲು ದೇಶದ ವಿವಿಧ ಭಾಗಗಳಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಕಳೆದ ವರ್ಷ ಜಾರಿಗೊಳಿಸಿದ್ದ ಲಾಕ್ಡೌನ್'ಗಿಂತ ಈ ಬಾರಿ ಕಠಿಣ ಲಾಕ್ಡೌನ್ ಜಾರಿಗೊಳಿಸಲಾಗಿದೆ.

ಆ ರಾಜ್ಯಗಳಲ್ಲಿ ಸರ್ಕಾರಗಳು ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿವೆ. ಲಾಕ್ಡೌನ್ ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಸಹ ಸೇರಿದೆ. ಲಾಕ್ಡೌನ್ ಅವಧಿಯಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ.

ವಿನಾಕಾರಣ ವಾಹನಗಳಲ್ಲಿ ಮನೆಯಿಂದ ಬರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಮನೆಯಿಂದ ಹೊರಬರುವವರು ಸೂಕ್ತ ಕಾರಣ ನೀಡಿದರೆ ಪೊಲೀಸರು ಅಂತಹವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಬಿಡುತ್ತಾರೆ.
MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಒಂದು ವೇಳೆ ವಿನಾಕಾರಣ ಹೊರಬಂದಿದ್ದಾರೆ ಎಂದು ತಿಳಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂಜರಿಯುತ್ತಿಲ್ಲ. ಪ್ರತಿ ನಿತ್ಯ ವಿನಾ ಕಾರಣ ಹೊರಬರುವ ಸಹಸ್ರಾರು ಜನರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ಬೆಂಗಳೂರು ನಗರ ಪೊಲೀಸರ ಪ್ರಕಾರ, ಲಾಕ್ಡೌನ್ ಅವಧಿಯಲ್ಲಿ ಇದುವರೆಗೂ 10,000ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ವಾಹನಗಳನ್ನು ಕೇವಲ ಹತ್ತು ದಿನಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದು ಗಮನಾರ್ಹ.
MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಾಕ್ಡೌನ್'ನ ಮೊದಲ ದಿನವೇ ಬೆಂಗಳೂರು ನಗರ ಪೊಲೀಸರು 2,000ಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇತ್ತೀಚೆಗೆ ಬೆಂಗಳೂರು ನಗರ ಪೊಲೀಸರು ದುಬಾರಿ ಬೆಲೆಯ ಬೆಂಝ್ ಕಾರ್ ಅನ್ನು ಸಹ ವಶಕ್ಕೆ ಪಡೆದಿದ್ದರು.

10 ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ವಶಕ್ಕೆ ಪಡೆಯಲಾದ ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸೌಲಭ್ಯವಿಲ್ಲದ ಕಾರಣ ಪೊಲೀಸರು ಹೈರಣಾಗಿದ್ದಾರೆ.
MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಬೆಂಗಳೂರು ನಗರದ ಬಹುತೇಕ ಎಲ್ಲಾ ಪೊಲೀಸ್ ಠಾಣೆಗಳು ವಾಹನಗಳಿಂದ ತುಂಬಿ ಹೋಗಿವೆ. ಇದರಿಂದ ಪೊಲೀಸರು ಪೊಲೀಸ್ ಠಾಣೆಗಳ ಬಳಿ ಖಾಲಿ ಇರುವ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ.

ಖಾಲಿ ಇರುವ ಜಾಗಗಳೂ ಸಹ ತುಂಬಿ ಹೋಗಿರುವುದರಿಂದ ವಶಪಡಿಸಿಕೊಂಡ ಎಲ್ಲಾ ವಾಹನಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲು ಬೆಂಗಳೂರು ನಗರ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವಶಪಡಿಸಿಕೊಂಡ ಬಹುತೇಕ ವಾಹನ ಮಾಲೀಕರ ವಿರುದ್ಧ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗಿದೆ ಎಂಬುದು ಗಮನಾರ್ಹ. ಈಗ ಈ ವಾಹನಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಬೆಂಗಳೂರು ನಗರ ಪೊಲೀಸರು ಕಳೆದ ವರ್ಷ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ 50,000ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದರು. ರಾಜ್ಯ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಆ ವಾಹನಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸಲಾಯಿತು.
MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ದ್ವಿಚಕ್ರ ವಾಹನಗಳಿಗೆ ರೂ.500 ಹಾಗೂ ಕಾರುಗಳಿಗೆ ರೂ.1,000 ದಂಡ ವಿಧಿಸಿ ವಾಹನಗಳನ್ನು ಹಿಂದಿರುಗಿಸಲಾಗಿತ್ತು. ಈಗ ಹಿಂದಿರುಗಿಸಲಾಗುವ ವಾಹನಗಳಿಗೂ ಸಹ ಗರಿಷ್ಠ ದಂಡ ವಿಧಿಸುವ ನಿರೀಕ್ಷೆಗಳಿವೆ.
ಗಮನಿಸಿ: ಮೊದಲ 2 ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications