Bengaluru Mysuru Expressway: ಸ್ಥಾಪನೆಯಾದ 5ನೇ ದಿನವೆ ಕೆಲಸ ನಿಲ್ಲಿಸಿದ ಸ್ಪೀಡ್ ಡಿಟೆಕ್ಟರ್ಗಳು!
ಬೆಂಗಳೂರು-ಮೈಸೂರನ್ನು ಸಂಪರ್ಕಿಸುವ ಕರ್ನಾಟಕದ ಎಕ್ಸ್ಪ್ರೆಸ್ವೇಯಲ್ಲಿ ಹೆಚ್ಚಿದ ಅಪಘಾತಗಳನ್ನು ಕಡಿಮೆ ಮಾಡಲು, ವಾಹನಗಳ ವೇಗವನ್ನು ಪತ್ತೆಹಚ್ಚುವ ಸಲುವಾಗಿ ಅಧಿಕಾರಿಗಳು AI ಕ್ಯಾಮೆರಾಗಳನ್ನು ಅಳವಡಿಸಿದ್ದರು. ಆದರೆ ಇದೀಗ ಅವುಗಳಲ್ಲಿ ಕೆಲವು ಸ್ಥಾಪನೆಯಾದ ಐದು ದಿನಗಳಲ್ಲೇ ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ವರದಿಯಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ (Bengaluru Mysuru Expressway)ಯಲ್ಲಿ ದ್ವಿಚಕ್ರ ವಾಹನ, ಆಟೋ ಹಾಗೂ ಟ್ರಾಕ್ಟರ್ ಸಂಚಾರವನ್ನು ಸದ್ಯ ನಿಷೇಧಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ 10-ಲೇನ್ ಹೆದ್ದಾರಿ ಪ್ರಾರಂಭವಾದ ದಿನದಿಂದ ಅನೇಕ ಅಪಘಾತಗಳು ದಾಖಲಾಗಿದ್ದವು. ಈ ಎಕ್ಸ್ಪ್ರೆಸ್ವೇಯಲ್ಲಿ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. 'ಸಾವಿನ' ಹೆದ್ದಾರಿ ಎಂದು ಕೂಡ ಬಿರುದು ಬಂದಿದೆ.

ಅಪಘಾತಗಳನ್ನು ತಪ್ಪಿಸಲು ನಾನಾ ಸರ್ಕಸ್: ಹೊಸ ಹೆದ್ದಾರಿಗೆ ಆರಂಭದಲ್ಲೇ ಈ ಮಟ್ಟದಲ್ಲಿ ಕೆಟ್ಟ ಹೆಸರು ಬರುತ್ತಿದ್ದ ಕಾರಣ ಪೊಲೀಸರು ಹೆದ್ದಾರಿಯಲ್ಲಿ ವೇಗದ ನಿರ್ಬಂಧಗಳನ್ನು ಹಾಕಿ ವಾಹನಗಳ ವೇಗವನ್ನು ಗಂಟೆಗೆ 80 ಕಿ.ಮೀಗೆ ಸೀಮಿತಗೊಳಿಸಿದ್ದರು. ಟ್ರಾಫಿಕ್ ಉಲ್ಲಂಘನೆಯನ್ನು ಪರಿಶೀಲಿಸಲು ಅಧಿಕಾರಿಗಳು ವೇಗದ ವಾಹನಗಳನ್ನು ಪತ್ತೆಹಚ್ಚಲು AI ಕ್ಯಾಮೆರಾಗಳನ್ನು ಸಹ ಅಳವಡಿಸಿದ್ದರು.
ಆದ್ರೆ ಈಗ ಈ AI ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎಂಬುದು ತಿಳಿದುಬಂದಿದೆ. AI ಕ್ಯಾಮೆರಾಗಳು ವೇಗವಾಗಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಲು ಮತ್ತು RTO ಸರ್ವರ್ ಮೂಲಕ ಅವರ ಮೊಬೈಲ್ಗಳಿಗೆ ನೇರ ಸಂದೇಶಗಳನ್ನು ಕಳುಹಿಸಲು ಬಳಸಲಾಗುತ್ತದೆ. ಆದ್ರೆ ಈಗ ಕೆಲಸ ನಿಲ್ಲಿಸಿರುವುದರಿಂದ ವಾಹನಗಳು ಯಾವುದೇ ನಿರ್ಬಂಧಗಳಿಲ್ಲದೆ ವೇಗವನ್ನು ಮುಂದುವರೆಸುವಂತಾಗಿದೆ.

ಅಳವಡಿಕೆಯಾದ ಐದು ದಿನಗಳಲ್ಲಿ ಕ್ಯಾಮರಾಗಳು ಕೆಲಸ ನಿಲ್ಲಿಸಿದ್ದು, ಹೆದ್ದಾರಿಯಲ್ಲಿ ಉಲ್ಲಂಘನೆ ಮುಂದುವರಿದಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ ಹೆದ್ದಾರಿಯಲ್ಲಿ ಸ್ಪೀಡ್ ಡಿಟೆಕ್ಟರ್ಗಳನ್ನು ಲೋಕಾರ್ಪಣೆ ಮಾಡಿದ್ದರು. 5 ದಿನಗಳಲ್ಲೇ ವಾಹನಗಳ ವೇಗ ಪತ್ತೆ ಹಚ್ಚುವುದನ್ನು ನಿಲ್ಲಿಸಿದ್ದಾರೆ ಎಂದು ಹಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ.
ನಿಧಾನ ವೇಗದ ವಾಹನಗಳಿಂದಲೇ ಹೆಚ್ಚು ಅಪಘಾತಗಳು: ಟ್ರ್ಯಾಕ್ಟರ್ಗಳು ಸೇರಿದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಪ್ರಸ್ತುತ ಹೆದ್ದಾರಿಯಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಅವು ಬಹಳ ನಿಧಾನವಾಗಿ ಚಲಿಸುವ ವಾಹನಗಳಾಗಿದ್ದು, ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ಕಾರುಗಳಿಗೆ ಅಡ್ಡಿಯಾಗುತ್ತಿವೆ. ಪೊಲೀಸರ ಸತತ ಪರಿಶ್ರಮದಿಂದ ಎಕ್ಸ್ಪ್ರೆಸ್ವೇಯಲ್ಲಿ ಸಾವಿನ ಸಂಖ್ಯೆ ಒಂದು ಹಂತಕ್ಕೆ ಕಡಿಮೆಯಾಗಿದೆ.

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸವಾವರರ ಬೇಸರ: ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಪ್ರಯಾಣಿಕರ ಸಂಚಾರಕ್ಕೆ ಬಿಡದಿರುವುದು ಅವರಿಗೆ ಬೇಸರ ತರಿಸಿದೆ ಎಂದು ಹೇಳುತ್ತಿದ್ದಾರೆ. ಆದ್ರೆ ಅಂತರಾಷ್ಟ್ರಿಯ ಮಟ್ಟದ ಈ ಹೆದ್ದಾರಿಯಲ್ಲಿ ವೇಗದ ಕಾರುಗಳಿಗೆ ಈ ವಾಹನಗಳಿಂದಾಗುವ ಅಡಚಣೆಯನ್ನು ಅವರು ತಿಳಿಯುತ್ತಿಲ್ಲ. ಆದ್ರೆ ಕೊನೆಗೂ ಅಧಿಕಾರಿಗಳು ಇವರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಹೌದು ಈಗ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಪ್ರಯಾಣಿಕರ ಸಂಚಾರಕ್ಕೆ ಟೋಲ್ ಫ್ರೀ ಸರ್ವಿಸ್ ಲೇನ್ಗಳನ್ನು ನೀಡಲಾಗಿದೆ. ಪ್ರಸ್ತುತ ರಾಮನಗರ, ಬಿಡದಿ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಮೇಲ್ಸೇತುವೆಗಳಿಂದಾಗಿ ಸರ್ವಿಸ್ ರಸ್ತೆಯಲ್ಲಿ ಮೂರು ಅಂತರಗಳಿವೆ, ಈ ಅಂತರಗಳು ಸಿಕ್ಕಾಗ ವಾಹನಗಳು ಹಳೆಯ ಮೈಸೂರು ರಸ್ತೆಯನ್ನು ಬಳಸಬಹುದು ಎಂದು ಹೇಳಿದೆ.

ಒಟ್ಟಾರೆ ದ್ವಿಚಕ್ರ ಹಾಗೂ ತ್ರಿಚಕ್ರದ ವಾಹನಗಳು ಸರ್ವೀಸ್ ರಸ್ತೆಗಳಲ್ಲಿ ಬರೋಬ್ಬರಿ 79.6 ಕಿ.ಮೀ ಹಾಗೂ ಹಳೆಯ ಮೈಸೂರು ರಸ್ತೆಯ ಮೂಲಕ 35.4 ಕಿ.ಮೀ ಪ್ರಯಾಣಿಸಬಹುದು. 118-ಕಿ.ಮೀ ಉದ್ದದ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ಯಾವುದೇ ಅಂತರವಿಲ್ಲದೇ ನಿರಂತರವಾಗಿ ಸಾಗಲು ಸರ್ವಿಸ್ ರಸ್ತೆಯಲ್ಲಿ ಮೂರು ಆರ್ಒಬಿಗಳ ನಿರ್ಮಾಣವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications