Tunnel road: ಬೆಂಗಳೂರಿಗೆ ಸುರಂಗ ರಸ್ತೆ ಬೇಡ, ರಾಜ್ಯಸರ್ಕಾರಕ್ಕೆ IISc ಶಿಫಾರಸ್ಸು! ಕಾರಣವೇನು?
ಕರ್ನಾಟಕ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವ ಬೆನ್ನಲ್ಲೇ ಮತ್ತೊಂದು ತಡೆ ಬಿದ್ದಂತಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc)ಇನ್ನರ್ ರಿಂಗ್ ಭೂಗತ ಮೆಟ್ರೋ (underground Metro)ವನ್ನು ತ್ವರಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದಾಗಿ ಸುದ್ದಿ ಸಂಸ್ಥೆ ಮನಿ ಕಂಟ್ರೋಲ್ ವರದಿ ಮಾಡಿದೆ.
IISc ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ, ಸುರಂಗ ರಸ್ತೆಗಳನ್ನು (Tunnel Road) ನಿರ್ಮಿಸಿದರೆ ರಸ್ತೆಯಲ್ಲಿನ ವಾಹನಗಳ ಸಂಖ್ಯೆಯಲ್ಲಿ ಶೇಕಡಾ 2.7 ರಷ್ಟು ಹೆಚ್ಚಳವಾಗಲಿದೆ. ಆದರೆ ಮೆಟ್ರೋಗಾಗಿ ನಿರ್ಮಿಸುವುದರಿಂದ ವಾಹನಗಳ ಸಂಖ್ಯೆ ಶೇಕಡಾ 5.3 ರಷ್ಟು ಕಡಿಮೆಯಾಗುತ್ತದೆ ಎಂದು ಬಹಿರಂಗಪಡಿಸಿದೆ. ಟನಲ್ ರೋಡ್ ನಿರ್ಮಿಸಿದ ಮಾತ್ರಕ್ಕೆ ಟ್ರಾಫಿಕ್ ಕಡಿಮೆಯಾಗುವುದಿಲ್ಲ ಎಂದು ಹೇಳಿದೆ.

ಸಾರ್ವಜನಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಟ್ರಾಫಿಕ್ ಕಡೆಮೆ ಮಾಡಬಹುದು ಎಂಬುದು ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science (IISc)ಯ ಅಭಿಪ್ರಾಯವಾಗಿದೆ. ವಿವರವಾಗಿ ಹೇಳುವುದಾದ್ರೆ ಬೆಂಗಳೂರಿನ ಪ್ರಮುಖ ಕೇಂದ್ರಗಳನ್ನು ಒಳಗೊಂಡಿರುವ ಸಂಪೂರ್ಣ ಅಂಡರ್ಗ್ರೌಂಡ್ ಇನ್ನರ್ ರಿಂಗ್ ರೋಡ್ ಮೆಟ್ರೋವನ್ನು ನಿರ್ಮಿಸಲು IISc ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸುರಂಗ ರಸ್ತೆಗಳ ಬದಲಿಗೆ ಮೆಟ್ರೋವನ್ನು ನಿರ್ಮಿಸಿದರೆ, ವರದಿಯ ಪ್ರಕಾರ, 2031 ರ ವೇಳೆಗೆ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಶೇಕಡಾ 14.8 ರಷ್ಟು ಇಳಿಕೆಯಾಗಲಿದೆ. ಹಾಗೆಯೇ, ಇಂಗಾಲದ ಮಾನಾಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ಮಟ್ಟಗಳ ವಾಹನಗಳ ಹೊರಸೂಸುವಿಕೆಗಳು ಶೇ 27.2 ಮತ್ತು 11.3 ರಷ್ಟು ಕಡಿಮೆಯಾಗಲಿದೆ. ಹಾಗೆಯೇ ರಸ್ತೆ ಅಪಘಾತಗಳು ಶೇಕಡಾ 17.7 ರಷ್ಟು ಕಡಿಮೆಯಾಗಲಿವೆ ಎಂದು ವರದಿ ಹೇಳಿದೆ.

ಇನ್ನರ್ ರಿಂಗ್ ಮೆಟ್ರೋ 23 ಮೆಟ್ರೋ ನಿಲ್ದಾಣಗಳನ್ನು ಮತ್ತು ಇತರ ಮಾರ್ಗಗಳೊಂದಿಗೆ ಆರು ಇಂಟರ್ಚೇಂಜ್ಗಳನ್ನು ಹೊಂದಿರುತ್ತದೆ. ಇದು ನಮ್ಮ ಮೆಟ್ರೋದ ಒಟ್ಟಾರೆ 169 ಕಿ.ಮೀ (ಅಸ್ತಿತ್ವದಲ್ಲಿರುವ ಮತ್ತು ನಿರ್ಮಾಣ ಹಂತದಲ್ಲಿರಯವ) ಜೊತೆಗೆ ಹೆಚ್ಚುವರಿ 34 ಕಿ.ಮೀ ಮೆಟ್ರೋ ನೆಟ್ವರ್ಕ್ನೊಂದಿಗೆ ಪ್ರಯಾಣಿಕರ ಸಂಖ್ಯೆಯನ್ನು ಶೇ77 ರಷ್ಟು ಹೆಚ್ಚಿಸುತ್ತದೆ ಎಂದು ವರದಿ ಹೇಳಿದೆ.
ಈ ಇನ್ನರ್ ರಿಂಗ್ ಮೆಟ್ರೋವು ಯಶವಂತಪುರ, ಐಐಎಸ್ಸಿ, ಮೇಕ್ರಿ ಸರ್ಕಲ್, ಹಲಸೂರು, ಇಂದಿರಾನಗರ (ಇಂಟರ್ಚೇಂಜ್), ದೂಪನಹಳ್ಳಿ, ದೊಮ್ಮಲೂರು, ಈಜಿಪುರ, ಡೈರಿ ಸರ್ಕಲ್, ನಿಮ್ಹಾನ್ಸ್, ಸೌತ್ ಎಂಡ್ ಸರ್ಕಲ್, ಲಾಲ್ಬಾಗ್, ಕೆಆರ್ ಮಾರ್ಕೆಟ್, ಅತ್ತಿಗುಪ್ಪೆ, ವಿಜಯನಗರ ಮತ್ತು ಕುಪ್ಪೆ ರಸ್ತೆ ಮುಂತಾದ ಸ್ಥಳಗಳಲ್ಲಿ ನಿಲ್ದಾಣಗಳನ್ನು ಹೊಂದಿರುತ್ತದೆ.

1995 ರಿಂದ 2012 ರವರೆಗೆ ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಇ ಶ್ರೀಧರನ್ ಅವರು, ಪ್ರತಿ 1 ಲಕ್ಷ ಜನರಿಗೆ ಕನಿಷ್ಠ 1 ಕಿ.ಮೀ ಮೆಟ್ರೋ ಮಾರ್ಗದ ಅಗತ್ಯವಿದೆ. ಬೆಂಗಳೂರಿನ ಸುಮಾರು 1.6 ಕೋಟಿ ಜನಸಂಖ್ಯೆಯನ್ನು ಗಮನಿಸಿದರೆ, ಇದೀಗ ಆದರ್ಶಪ್ರಾಯವಾಗಿ 160-ಕಿ.ಮೀ ಮೆಟ್ರೋ ಜಾಲವನ್ನು ಹೊಂದಿರಬೇಕು ಎಂದು ಸುದ್ದಿ ಸಂಸ್ಥೆ ಮನಿ ಕಂಟ್ರೋಲ್ಗೆ ತಿಳಿಸಿದ್ದಾರೆ.
ಡಿಕೆಶಿ ಸುರಂಗ ರಸ್ತೆ! ನಗರದಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಮಗ್ರ ಬೆಂಗಳೂರು ನಗರ ರಸ್ತೆ ಮೂಲಸೌಕರ್ಯ ಯೋಜನೆಯನ್ನು ರಚಿಸಲು ಜಾಗತಿಕ ಕಂಪನಿಗಳಿಂದ ಅಭಿವ್ಯಕ್ತಿ (ಇಒಐ) ಆಹ್ವಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಭಾಗವಹಿಸಿದ್ದ ಒಂಬತ್ತು ಕಂಪನಿಗಳ ಪೈಕಿ ಎಂಟು ಕಂಪನಿಗಳು ಅರ್ಹತೆ ಪಡೆದಿವೆ. ಆಯ್ದ ಸಂಸ್ಥೆಯು ವಿವರವಾದ ಕಾರ್ಯಸಾಧ್ಯತೆಯ ಅಧ್ಯಯನವನ್ನು (DFS) ನಡೆಸಿ ಯೋಜನಾ ವರದಿಯನ್ನು (DPR) ಮಾಡುತ್ತವೆ.

ಆರಂಭಿಕ ಪ್ರಸ್ತಾವನೆಯ ಪ್ರಕಾರ, ಸುಮಾರು 50,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 99 ಕಿ.ಮೀ ಸುರಂಗ ಜಾಲವನ್ನು ಸೂಚಿಸಲಾಗಿದೆ. ನಂತರ, ಸಚಿವ ಡಿಕೆಶಿ ಅವರು 190 ಕಿ.ಮೀ ಉದ್ದದ ಸುರಂಗ ಜಾಲವನ್ನು ಪರಿಗಣಿಸುತ್ತಿದ್ದಾರೆ, ಆದರೆ ವೆಚ್ಚ ಮತ್ತು ಜೋಡಣೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಬೆಂಗಳೂರಿಗೆ ಕನಿಷ್ಠ ನಾಲ್ಕು ಪಥದ ಸುರಂಗ ಮಾರ್ಗದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಯೋಜನೆಯ ವೆಚ್ಚವನ್ನು ಮರುಪಾವತಿಸಲು ಸುಂಕಗಳು? "ಹೈಬ್ರಿಡ್ ವರ್ಷಾಶನ ಮಾದರಿ (HAM) ಅಡಿಯಲ್ಲಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಇಲ್ಲಿ ಶೇ40 ರಷ್ಟು ವೆಚ್ಚವನ್ನು ಸರ್ಕಾರ ಭರಿಸಲಿದೆ ಮತ್ತು ಶೇಕಡಾ 60 ರಷ್ಟು ವೆಚ್ಚವನ್ನು ಯೋಜನೆಗಳನ್ನು ಕಾರ್ಯಗತಗೊಳಿಸುವ ಏಜೆನ್ಸಿಯು ಭರಿಸಲಿದೆ. ಟೋಲ್ಗಳ ಮೂಲಕ ಉತ್ಪತ್ತಿಯಾಗುವ ಆದಾಯವನ್ನು ನಿರ್ಮಾಣದ ಜವಾಬ್ದಾರಿಯುತ ಏಜೆನ್ಸಿಗೆ ಮರುಪಾವತಿಸಲು ಬಳಸಬಹುದು ಎನ್ನಲಾಗಿದೆ.
ಬೆಂಗಳೂರು ಮೆಟ್ರೋ ಸ್ವತಃ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಣಗಾಡುತ್ತಾ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಕೋರಮಂಗಲದಲ್ಲಿ 2017 ರಲ್ಲಿ ಪ್ರಾರಂಭವಾದ 2.4 ಕಿ.ಮೀ ಉದ್ದದ ಮೇಲ್ಸೇತುವೆಯನ್ನೇ ಇನ್ನೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದೀಗ ಆರಂಭಿಸುವ ಸುರಂಗ ರಸ್ತೆಗಳನ್ನು ಹೇಳಿದ ಸಮಯಕ್ಕೆ ಮುಗಿಸುವರೆ?" ಎಂಬುದು ಪ್ರಶ್ನೆಯಾಗಿದೆ.
ಲೇಖನದಲ್ಲಿ ಬಳಸಿರುವ ಎಲ್ಲವು ಸಾಂದರ್ಭಿಕ ಚಿತ್ರಗಳು


Click it and Unblock the Notifications