ಬೆಳಗಾವಿ - ದೆಹಲಿ ವಿಮಾನದಲ್ಲಿ ಕನ್ನಡದ ಕಂಪು: ವಿಡಿಯೋ ನೋಡಿ
ಬೆಳಗಾವಿ (Belagavi) - ದೆಹಲಿ (Delhi) ನಡುವೆ ನೇರ ವಿಮಾನಯಾನ (Flight) ಸೇವೆ ಮತ್ತೆ ಶುರುವಾಗಿದ್ದು, ಇಲ್ಲಿನ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಗುರುವಾರದಿಂದ ವಿಮಾನ ಸಂಚಾರ ಆರಂಭವಾವಾಗಿದ್ದು, ಪೈಲೆಟ್ ಉತ್ತರ ಕರ್ನಾಟಕ ಶೈಲಿಯ ಕನ್ನಡದಲ್ಲಿ ಅನೌನ್ಸಮೆಂಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಪೈಲೆಟ್ ಅಕ್ಷಯ್ ಪಾಟೀಲ್ ಅವರು, 'ದೆಹಲಿ ದೂರ ಅನುತ್ತಿದ್ದರೂ, ಆದರೆ, ಈಗ ಎರಡು ಗಂಟೆಗಳ ದಾರಿ.. ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿ ಅಭಿವೃದ್ಧಿ ಕಾಣಬೇಕು. ಹೊಸ ಏರ್ಪೋರ್ಟ್ ಆಗಿ ಬಾಗಲಕೋಟೆ ಸೇರ್ಪಡೆಯಾಗುತ್ತಿದೆ. ಎಲ್ಲ ಒಳ್ಳೆಯದಾಗಲಿ' ಎಂದು ಕನ್ನಡದಲ್ಲಿ ಅನೌನ್ಸಮೆಂಟ್ ಮಾಡಿ, ಗಮನಸೆಳೆದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಅಕ್ಷಯ್ ಅವರು ಕನ್ನಡದಲ್ಲಿಯೇ ಅನೌನ್ಸಮೆಂಟ್ ಮಾಡಿದ್ದರು.

ಪೈಲೆಟ್ ಕನ್ನಡದಲ್ಲಿ ಅನೌನ್ಸಮೆಂಟ್ ಮಾಡುತ್ತಿರುವ ವಿಡಿಯೋವನ್ನು ಸ್ವತಃ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರೇ ಹಂಚಿಕೊಂಡಿದ್ದಾರೆ. 'ಬೆಳಗಾವಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್ ಅನೌನ್ಸ್ಮೆಂಟ್ ಸಹ ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್ ಆಗಿದ್ರಿಂದ ಕನ್ನಡ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು' ಎಂದು ಬರೆದುಕೊಂಡಿದ್ದಾರೆ.
ಕೆಲವು ತಿಂಗಳ ಹಿಂದೆ, ಪ್ರಯಾಣಿಕರ ಕೊರತೆಯಿಂದ ಬೆಳಗಾವಿ - ದೆಹಲಿ ನಡುವೆ ನಡುವೆ ನೇರ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಕಾರಣಕ್ಕೆ ಇಲ್ಲಿನ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಸದ್ಯ, ಗುರುವಾರದಿಂದ (ಅ.5) ಇಂಡಿಗೋ ಏರ್ಲೈನ್ಸ್ (IndiGo) ಮತ್ತೆ ವಿಮಾನಸೇವೆಯನ್ನು ಪುನರಾರಂಭ ಮಾಡಿದ್ದು, ಸ್ಥಳೀಯ ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ.

ದೆಹಲಿಯಿಂದ ಬೆಳಗಾವಿಗೆ ಪ್ರತಿದಿನ ಸಂಚರಿಸುವ ಇಂಡಿಗೋ ವಿಮಾನವೂ ದೆಹಲಿಯಿಂದ ಪ್ರತಿದಿನ ಮಧ್ಯಾಹ್ನ 3.45ಕ್ಕೆ ಪ್ರಯಾಣ ಆರಂಭಿಸಲಿದ್ದು, ಸಂಜೆ 6.05ಕ್ಕೆ ಬೆಳಗಾವಿ ತಲುಪುತ್ತದೆ. ಇಲ್ಲಿಂದ ಸಂಜೆ 6.35ಕ್ಕೆ ಹೊರಟು ರಾತ್ರಿ ರಾತ್ರಿ 9ಕ್ಕೆ ದೆಹಲಿಗೆ ಹೋಗುತ್ತದೆ. ಗುರುವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಹಾರಾಟಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ, ಶಾಸಕ ಆಸೀಫ್ ಸೇಠ್ ಸೇರಿದಂತೆ ಪ್ರಮುಖ ಗಣ್ಯರು ಹಾಜರಿದ್ದರು.
ಇದೇ ವೇಳೆ ಪೈಲೆಟ್ ಅಕ್ಷಯ್ ಕುಮಾರ್ ಅವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ಇಡಬೇಕೆಂದು ಮನವಿ ಮಾಡಿದರು. 2020ರಲ್ಲಿಯೂ ಅಂದಿನ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಕೂಡ ಈ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರನ್ನು ಇಡುವಂತೆ ಮನವಿ ಮಾಡಿದ್ದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಸ್ತುತವಿರುವ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಅಂದಿನ ನಾಗರಿಕ ವಿಮಾನಯಾನ ಸಚಿವರಾದ ಅಶೋಕ್ ಗಜಪತಿ ರಾಜು ಅವರು ಸೆಪ್ಟೆಂಬರ್. 14, 2017ರಲ್ಲಿ ಉದ್ಘಾಟಿಸಿದ್ದರು. ಈ ವಿಮಾನನಿಲ್ದಾಣ ಮೂಲಕ, ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ಗೆ ನೇರ ವಿಮಾನ ಸೇವೆಯನ್ನು ಕಲ್ಪಿಸಲಾಗಿದ್ದು, ಇದೀಗ, ದೆಹಲಿಗೆ ಮತ್ತೆ ಸೇವೆ ಆರಂಭವಾಗುತ್ತಿರುವುದು ಇಲ್ಲಿನ ಪ್ರಯಾಣಿಕರಿಗೆ ಖುಷಿತಂದಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications