ವಾಹನ ಸ್ಕ್ರ್ಯಾಪೇಜ್ ನೀತಿಯಿಂದಾಗುವ ಪ್ರಯೋಜನಗಳಿವು
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಮತ್ತೊಮ್ಮೆ ಇತ್ತೀಚೆಗೆ ಜಾರಿಗೊಳಿಸಲಾದ ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯ ಬಗ್ಗೆ ಮಾತನಾಡಿದ್ದಾರೆ. ಈ ಹೊಸ ನೀತಿಯು ಆರ್ಥಿಕತೆಯನ್ನು ಹೆಚ್ಚಿಸಲು ಹಾಗೂ ಉದ್ಯೋಗವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಗುಜರಾತ್ ನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಗೆ ಚಾಲನೆ ನೀಡಿದ್ದರು. ಹಳೆಯದಾದ ಹಾಗೂ ಪರಿಸರಕ್ಕೆ ಮಾರಕವಾಗುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಹೊಸ ವಾಹನಗಳನ್ನು ರಸ್ತೆಗೆ ಇಳಿಸುವ ಉದ್ದೇಶದಿಂದ ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಜಾರಿಗೊಳಿಸಲಾಗಿದೆ.

ಈ ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯು 20 ವರ್ಷ ಹಳೆಯದಾದ ವೈಯಕ್ತಿಕ ವಾಹನಗಳು ಹಾಗೂ 15 ವರ್ಷ ಹಳೆಯದಾದ ಕಮರ್ಷಿಯಲ್ ವಾಹನಗಳನ್ನು ಕಡ್ಡಾಯವಾಗಿ ಫಿಟ್ನೆಸ್ ಪರೀಕ್ಷೆಗೆ ಒಳಪಡಿಸುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ನಿತಿನ್ ಗಡ್ಕರಿ, ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಧಾನ ಮಂತ್ರಿಗಳು ಪರಿಚಯಿಸಿದ್ದು ಒಂದು ಐತಿಹಾಸಿಕ ನಿರ್ಧಾರ.

ಈ ನೀತಿಯು ಭಾರತದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಜೊತೆಗೆ ಉದ್ಯೋಗವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಭಾರೀ ವಾಣಿಜ್ಯ ವಾಹನಗಳಿಗೆಕಡ್ಡಾಯವಾಗಿರುವ ಫಿಟ್ನೆಸ್ ಪರೀಕ್ಷೆಯು 2023 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಇದೇ ವೇಳೆ ಇತರ ವಿಧದ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆಯನ್ನು 2024 ರ ಜೂನ್ 1 ರಿಂದ ಹಂತ ಹಂತವಾಗಿ ನಡೆಸಲಾಗುತ್ತದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ರೂ. 40,000 ಕೋಟಿಗಳ ಜಿಎಸ್ಟಿ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಹೇಳಿದಂತೆ ಪ್ರಧಾನಿ ನರೇಂದ್ರ ಮೋದಿರವರು ಕೆಲವು ದಿನಗಳ ಹಿಂದಷ್ಟೇ ಹಳೆಯ ವಾಹನ ನಿರ್ಮೂಲನೆ ನೀತಿಯನ್ನು ಪರಿಚಯಿಸಿದ್ದರು.

ವಾಯು ಮಾಲಿನ್ಯ ಸಮಸ್ಯೆಯಿಂದ ಭಾರತದ ವಿವಿಧ ನಗರಗಳು ತೀವ್ರವಾಗಿ ಬಾಧಿತವಾಗಿವೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನಿಂದ ಚಲಿಸುವ ಹಳೆಯ ವಾಹನಗಳು ಇದಕ್ಕೆ ಪ್ರಮುಖ ಕಾರಣ. ಈ ಕಾರಣಕ್ಕೆ ಅನರ್ಹ ಹಳೆಯ ವಾಹನಗಳನ್ನು ರಸ್ತೆಗೆ ಇಳಿಯದಂತೆ ಮಾಡುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಪರಿಚಯಿಸಿದೆ.

ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಹೊಸ ವಾಹನಗಳ ಮಾರಾಟವು ಹೆಚ್ಚಾಗುವ ನಿರೀಕ್ಷೆಗಳಿವೆ. ಆಟೋ ಮೊಬೈಲ್ ಉದ್ಯಮದ ಅನೇಕರು ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಸ್ವಾಗತಿಸಿದ್ದಾರೆ. ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಆಟೋ ಮೊಬೈಲ್ ಉದ್ಯಮವು ಹಲವು ದಿನಗಳಿಂದ ನಿರೀಕ್ಷಿಸುತ್ತಿತ್ತು.

ಹಳೆಯ ವಾಹನ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಹೊಸ ವಾಹನಗಳ ಮಾರಾಟ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿವೆ. ಈ ನೀತಿಯಿಂದಾಗಿ ಪರಿಸರದ ಸಂರಕ್ಷಣೆಯಾಗುವ ಜೊತೆಗೆ ವಾಹನ ಉತ್ಪಾದನೆಯ ವೆಚ್ಚ ಕಡಿಮೆಯಾಗುವ ಸಾಧ್ಯತೆಗಳಿವೆ. ವಾಹನ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದು ಸಹ ಕಡಿಮೆಯಾಗುವ ನಿರೀಕ್ಷೆಗಳಿವೆ.

ಇದರಿಂದ ವಾಹನ ಉತ್ಪಾದನೆವೂ ಸಹ ಕಡಿಮೆಯಾಗುತ್ತದೆ. ಭಾರತದಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನವನ್ನು ನೀಡುತ್ತಿದೆ.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಫೇಮ್ ಇಂಡಿಯಾ 2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಸಬ್ಸಿಡಿ ಸೇರಿದಂತೆ ವಿವಿಧ ರೀತಿಯ ಕೊಡುಗೆಗಳನ್ನು ನೀಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯೂ ಸಹ ಪರಿಸರವನ್ನು ರಕ್ಷಿಸುತ್ತದೆ. ಹಾಗೆಯೇ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಪೆಟ್ರೋಲ್ ಬೆಲೆ ಈಗಾಗಲೇ ರೂ. 100 ಗಳ ಗಡಿ ದಾಟಿದೆ. ಇನ್ನು ಡೀಸೆಲ್ ಬೆಲೆ ಸಹ ರೂ. 100 ರ ಆಸು ಪಾಸಿನಲ್ಲಿದೆ.

ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರು ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಖ್ಯಾತ ವಾಹನ ತಯಾರಕ ಕಂಪನಿಗಳು ಮಾತ್ರವಲ್ಲದೇ ಸ್ಟಾರ್ಟ್ ಅಪ್ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.ಖ್ಯಾತ ಕ್ಯಾಬ್ ತಯಾರಕ ಕಂಪನಿಯಾದ OLA ಸಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. OLA ಕಂಪನಿಯು ಆಗಸ್ಟ್ 15 ರಂದು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ S 1 ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

SIMPLE ENERGY ಕಂಪನಿಯು ಸಹ ಆಗಸ್ಟ್ 15 ರಂದೇ ತನ್ನ SIMPLE ONE ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದಿಷ್ಟು ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಇನ್ನೂ ಹಲವಾರು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಎಲೆಕ್ಟ್ರಿಕ್ ವಾಹನಗಳನ್ನು ಚಾಲನೆ ಮಾಡಲು ಪ್ರತಿ ಕಿ.ಮೀಗೆ ಸರಿ ಸುಮಾರು ವೆಚ್ಚವಾಗುತ್ತದೆ ಎಂದು ಅಂಕಿ ಅಂಶಗಳಿಂದ ದೃಢ ಪಟ್ಟಿದೆ. ಹಲವು ರಾಜ್ಯ ಸರ್ಕಾರಗಳು ವಿವಿಧೆಡೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಂತೆ ಜನರಿಗೆ ಉತ್ತೇಜನ ನೀಡುತ್ತಿವೆ. ಇದರಿಂದ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಪ್ರಮಾಣವು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಗಳಿವೆ.


Click it and Unblock the Notifications