Bengaluru: ಬೆಂಗಳೂರು ಸುತ್ತ 287 ಕಿಮೀ ಓಡಲಿದೆ ರೈಲು, ನಿಮ್ಮೂರಿಗೆ ಬೇಗ ಹೋಗಬಹುದು! ಎಲ್ಲಿಂದ ಎಲ್ಲಿಗೆ?
ನೈಋತ್ಯ ರೈಲ್ವೆ (South Western Railway - SWR) ಯೋಜಿಸಿದಂತೆ ಎಲ್ಲವು ನಡೆದರೆ, ಬೆಂಗಳೂರು (Bengaluru) ಸುತ್ತಲು 287 - ಕಿಮೀ ಉದ್ದದ ವೃತ್ತಾಕಾರ (Circular) ರೈಲು ಮಾರ್ಗ ಕೆಲವೇ ವರ್ಷಗಳಲ್ಲಿ ನಿರ್ಮಾಣವಾಗಲಿದೆ. ಇದರಿಂದ ರಾಜಧಾನಿ ಅಕ್ಕಪಕ್ಕದ ಜನರಿಗೆ ಭಾರೀ ಅನುಕೂಲವಾಗಲಿದ್ದು, ಪ್ರಯಾಣದ ಅವಧಿ ಉಳಿತಾಯವಾಗಲಿದೆ.
ಈ ರೈಲು ಮಾರ್ಗದಿಂದ ನಗರದಲ್ಲಿರುವ ರೈಲು ಜಾಲದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಬೆಂಗಳೂರು ಉಪನಗರ ರೈಲು ಯೋಜನೆ (Bengaluru Suburban Rail Project - BSRP) ಮತ್ತು ನಮ್ಮ ಮೆಟ್ರೋಗೂ (Namma Metro) ಇದು ಪೂರಕವಾಗಲಿದೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ನೈಋತ್ಯ ರೈಲ್ವೆ (SWR) ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು ಮಾಹಿತಿ ನೀಡಿದ್ದಾರೆ.

ಎಸ್ಡಬ್ಲ್ಯೂಆರ್ ಪ್ರಸ್ತಾವನೆಯನ್ನು ಆಧರಿಸಿ, ರೈಲ್ವೆ ಸಚಿವಾಲಯವು ಜೋಡಿ ಮಾರ್ಗದ ಈ ರೈಲು ಜಾಲಕ್ಕೆ ಸಂಬಂಧಿಸಿದಂತೆ ಅಂತಿಮ ಸ್ಥಳ ಸಮೀಕ್ಷೆಯನ್ನು (ಎಫ್ಎಲ್ಎಸ್) ನಡೆಸಲು ಅನುಮತಿ ನೀಡಿದೆ ಎಂದು ಅವರು ಹೇಳಿದ್ದಾರೆ. ಉದ್ದೇಶಿತ ರೈಲು ಮಾರ್ಗವು ಬೆಂಗಳೂರು ನಗರದ ಸುತ್ತಲಿನ ನಿಡವಂದ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೀಲಲಿಗೆ, ಮಾಲೂರು ಹಾಗೂ ಸೋಲೂರನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಭವಿಷ್ಯದ ಅಗತ್ಯತೆಗಳ ಬಗ್ಗೆ ಗಮನಹರಿಸಿ, ರೈಲ್ವೆ ಸಾಮರ್ಥ್ಯವನ್ನು ಹೆಚ್ಚಿಸುವುದು. ಜೊತೆಗೆ ಪ್ರಸ್ತುತವಿರುವ ರೈಲು ಸಂಪರ್ಕ ಜಾಲಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕಿಶೋರ್ ಅವರು ಹೇಳಿದ್ದಾರೆ. ರೂ.7.2 ಕೋಟಿ ವೆಚ್ಚದಲ್ಲಿ ಸ್ಥಳ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಟರ್ಮಿನಲ್ ಸೌಲಭ್ಯ, ಸೇತುವೆಗಳು ಹಾಗೂ ನಿಲ್ದಾಣಗಳ ಜೋಡಣೆ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ಈ ರೈಲು ಮಾರ್ಗ ನಿರ್ಮಾಣಗೊಂಡರೆ, ಬೆಂಗಳೂರಿನ ಸುತ್ತಲಿನ ಜನರಿಗೆ ಕಡಿಮೆ ಖರ್ಚಿನಲ್ಲಿ ಆರಾಮದಾಯಕ ಪ್ರಯಾಣ ಲಭ್ಯವಾಗುತ್ತದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಸಮೀಪದಲ್ಲಿರುವ ದೇವನಹಳ್ಳಿ, ಹಲವು ಕೈಗಾರಿಕೆಗಳಿಗೆ ಹತ್ತಿರವಿರುವ ಹೀಲಲಿಗೆ ಹಾಗೂ ದೊಡ್ಡಬಳ್ಳಾಪುರ, ಹೊಸಕೋಟೆಯಂತಹ ಪ್ರಮುಖ ಪಟ್ಟಣದ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಉದ್ದೇಶಿತ ಮಾರ್ಗದಲ್ಲಿ ಮೆಮೊ ಅಥವಾ ಡೆಮೋ ಟ್ರೈನ್ ಓಡಿಸುವ ಮೂಲಕ, ದೂರದ ಊರುಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸಂಪರ್ಕ ಜಾಲದ ಮೇಲೆ ಒತ್ತಡವನ್ನು ಕಡಿಮೆಗೊಳಿಸಬಹುದು. ಈ ಬಗ್ಗೆ ಸಂಸದ ಪಿ.ಸಿ.ಮೋಹನ್ ಕೂಡ ಟ್ವೀಟ್ ಮಾಡಿದ್ದು, 'ಬೆಂಗಳೂರಿನ ಸುತ್ತಲೂ 287 ಕಿಮೀ ರೈಲು ಯೋಜನೆಯೂ ಸ್ಥಳೀಯ ರೈಲು ಸೇವೆಯಲ್ಲಿ ಕ್ರಾಂತಿಯನ್ನುಂಟುಮಾಡುವ ಗುರಿಯನ್ನು ಹೊಂದಿದೆ' ಎಂದು ಹೇಳಿದ್ದಾರೆ.
ಇನ್ನು, ಈ ರೈಲು ಮಾರ್ಗದಿಂದ ಬೆಂಗಳೂರು ಸುತ್ತಲಿಗೆ ಜನರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದ್ದು, ನಗರಕ್ಕೆ ಸುಲಭವಾಗಿ ಬಂದು ಹೋಗಬಹುದು. ಜೊತೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೂ ಸಾಕಷ್ಟು ನೆರವಾಗಲಿದ್ದು, ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ಅಲ್ಲದೆ, ಸಾರ್ವಜನಿಕ ಸಾರಿಗೆ ಬೆಳದಂತೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಹಾಗೂ ಕೈಗಾರಿಕೆಗಳು ಸ್ಥಾಪನೆಗೊಂಡ ಜನರಿಗೆ ಕೆಲಸವು ಸಿಗುತ್ತದೆ. ಯೋಜನೆಯು ಸಹಕಾರವಾಗಲು ಹಲವು ವರ್ಷಗಳು ಬೇಕಿದ್ದು, ಅಲ್ಲಿಯವರೆಗೂ ಕಾಯಬೇಕು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: TOI


Click it and Unblock the Notifications