Bengaluru-Chennai Expressway: ಸಿಹಿಸುದ್ದಿ.. ಕರ್ನಾಟಕದಲ್ಲಿ ಎಕ್ಸ್ಪ್ರೆಸ್ವೇ ಸಿದ್ದ.. ಈ ಊರಿಗೆ 45 ನಿಮಿಷ ಪ್ರಯಾಣ!
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ (Bengaluru-Chennai Expressway) ಕಾಮಗಾರಿ ಭರದಿಂದ ಸಾಗುತ್ತಿದೆ. 262 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಕರ್ನಾಟಕ, ಆಂಧ್ರ ಪದೇಶ ಹಾಗೂ ತಮಿಳುನಾಡುಗಳಿಗೆ ಸಂಪರ್ಕ ಕೊಂಡಿಯಾಗಿದೆ. 71 ಕಿಲೋಮೀಟರ್ ರಸ್ತೆ ಕರ್ನಾಟಕದಲ್ಲಿ (Karnataka) ಹಾದುಹೋಗಲಿದೆ. ರಾಜ್ಯದಲ್ಲಿ ಇನ್ನೊಂದು ತಿಂಗಳಲ್ಲಿ ಹೆದ್ದಾರಿ ನಿರ್ಮಾಣ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ - NHAI) ತಿಳಿಸಿದೆ. ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
'ನೂತನ ಎಕ್ಸ್ಪ್ರೆಸ್ವೇ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ಕೋಲಾರದ ಬೇತಮಂಗಲವನ್ನು ಸಂಪರ್ಕಿಸುತ್ತದೆ. ಸದ್ಯ 400 ಮೀಟರ್ ಹೊರತುಪಡಿಸಿ, ಉಳಿದೆಲ್ಲ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಹೊಸಕೋಟೆ ಸಮೀಪದ ಜಿನ್ನಗೇರಾ ಕ್ರಾಸ್ನಲ್ಲಿ ದೇಗುಲವೊಂದರ ಸ್ಥಳಾಂತರದ ಕಾರಣ, ಹೆದ್ದಾರಿ ನಿರ್ಮಾಣ ಕೆಲಸಗಳು ಸ್ವಲ್ಪಮಟ್ಟಿಗೆ ನಿಧಾನಗೊಂಡಿತ್ತು. 2 ವಾರಗಳ ಹಿಂದೆ, ದೇವಸ್ಥಾನವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, 1 ತಿಂಗಳೊಳಗೆ ರಾಜ್ಯದ ಜನರ ಸಂಚಾರಕ್ಕೆ ಎಕ್ಸ್ಪ್ರೆಸ್ವೇ ಲಭ್ಯವಾಗಲಿದೆ' ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕದಲ್ಲಿ ಹಾದುಹೋಗುವ 71 ಕಿಲೋಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಕಾಮಗಾರಿ ಮುಕ್ತಾಯಗೊಂಡ ಬಳಿಕ, ಬೆಂಗಳೂರಿನಿಂದ ಮಾಲೂರು ಹಾಗೂ ಬಂಗಾರಪೇಟೆಗಳಿಗೆ ಸುಲಭವಾಗಿ ತೆರಳಬಹುದು. ಈ ಹೆದ್ದಾರಿ ಮೂಲಕ ಹೊಸಕೋಟೆಯಿಂದ ಮಾಲೂರಿಗೆ 45 ನಿಮಿಷಗಳಲ್ಲಿ ತಲುಪಬಹುದು ಎಂದು ತಿಳಿದುಬಂದಿದೆ. ಈಗ ಇವೆರೆಡು ಪಟ್ಟಣಗಳ ನಡುವೆ ಪ್ರಯಾಣದ ಅವಧಿಯೂ 1.5 ಗಂಟೆಯಿದೆ.
ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೂಲಕ ಹೊಸಕೋಟೆಯಿಂದ ಶುರುವಾಗುವ ಎಕ್ಸ್ಪ್ರೆಸ್ವೇಯನ್ನು ಪ್ರವೇಶಿಸಬಹುದು. ಮುಂದಿನ ವರ್ಷ ಆಂಧ್ರ ಪದೇಶ ಹಾಗೂ ತಮಿಳುನಾಡಿನಲ್ಲೂ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆ ಬಳಿಕ ಟೋಲ್ ಶುಲ್ಕ ನಿಗದಿಪಡಿಸಬಹುದು. ಈ ರಸ್ತೆಯಲ್ಲಿ ವಾಹನಗಳು ಗಂಟೆಗೆ 120 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲು ಸಹ ಅನುವು ಮಾಡಿಕೊಡಬಹುದು ಎಂದು ವರದಿಯಾಗಿದೆ.
ಬಹುನೀರಿಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ 2022ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಸರಿ ಸುಮಾರು ರೂ.17,000 ಕೋಟಿ ಅನುದಾನದಲ್ಲಿ ಸಿದ್ಧಗೊಳ್ಳುತ್ತಿರುವ 4 ಪಥಗಳ ಹೆದ್ದಾರಿ ಇದಾಗಿರಲಿದ್ದು, ವಾಹನಗಳ ಸಂಚಾರ ದಟ್ಟಣೆ ದ್ವಿಗುಣಗೊಂಡರೆ 8 ಪಥಗಳಿಗೂ ವಿಸ್ತರಣೆ ಮಾಡಬಹುದಾಗಿದೆ.
ಈ ಎಕ್ಸ್ಪ್ರೆಸ್ವೇ ದಕ್ಷಿಣ ಭಾರತದ ಮೊದಲ ಹಸಿರು ಹೆದ್ದಾರಿ (South India First Greenfield Highway) ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದ್ದು, ರಸ್ತೆ ನಿರ್ಮಾಣಕ್ಕೆ 33 ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಬಳಕೆ ಮಾಡಲಾಗುತ್ತಿದೆ. ಹೊಸ ಹೆದ್ದಾರಿಯೂ 17 ಮೇಲ್ಸೇತುವೆಗಳು ಮತ್ತು 41 ಕೆಳಸೇತುವೆಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ, ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಮತ್ತು ಶ್ರೀಪೆರಂಬದೂರಿನ ಜನರಿಗೆ ಹೆಚ್ಚಿನ ಅನುಕೂಳವಾಗಲಿದ್ದು, ಬೆಂಗಳೂರಿಂದ ಚೆನ್ನೈಗೆ 3 ಗಂಟೆಗಳಲ್ಲಿಯೇ ಪ್ರಯಾಣಿಸಬಹುದು. ಇದರಿಂದ ವ್ಯಾಪಾರೋದ್ಯಮ ಹಾಗೂ ಪ್ರವಾಸೋದ್ಯಮಗಳು ದೊಡ್ಡಮಟ್ಟದಲ್ಲಿ ಪ್ರಗತಿ ಕಾಣಲಿವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications