Expressway: ಶೀಘ್ರ ಲೋಕಾರ್ಪಣೆ.. ಬೆಂಗಳೂರಿನಲ್ಲಿ ಕಾಫಿ ಕುಡಿದು ಬಸ್ ಹತ್ತಿದ್ರೆ, ಚೆನ್ನೈನಲ್ಲಿ ಪೊಂಗಲ್ ಸವಿಯಬಹುದು!
ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ (Bengaluru-Chennai Expressway) ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಹೆದ್ದಾರಿ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ. ನೂತನ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ 2 ಐಟಿ ನಗರಗಳ ನಡುವೆ ಪ್ರವಾಸೋದ್ಯಮ, ವ್ಯಾಪಾರ - ವಾಣಿಜ್ಯ ಚಟುವಟಿಕೆಗಳು ಕೂಡ ಬೆಳವಣಿಗೆ ಹೊಂದಲಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿದೆ. ಸದ್ಯ, ನೂತನ ಎಕ್ಸ್ಪ್ರೆಸ್ವೇ ನಿರ್ಮಾಣ ಸಂಬಂಧ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ತಮಿಳುನಾಡಿನಲ್ಲಿ 105.7 ಕಿಲೋಮೀಟರ್ ಹಾದು ಹೋಗುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣದ ಕಾಮಗಾರಿ ಶೇಕಡ 65% ಮುಕ್ತಾಯಗೊಂಡಿದೆ. ಈ ಹೆದ್ದಾರಿ ತಿರುವಳ್ಳೂರು, ಕಾಂಚೀಪುರಂ, ವೆಲ್ಲೂರು ಮತ್ತು ರಾಣಿಪೇಟೆ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳ ಪ್ರಕಾರ, 2025ರ ಆಗಸ್ಟ್ನೊಳಗೆ ತಮಿಳುನಾಡಿನಲ್ಲಿ ಎಕ್ಸ್ಪ್ರೆಸ್ವೇ ನಿರ್ಮಾಣದ ಕೆಲಸಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ.

ಕರ್ನಾಟಕದಲ್ಲಿ ಈ ಎಕ್ಸ್ಪ್ರೆಸ್ವೇ 71 ಕಿಲೋಮೀಟರ್ ಹಾದುಹೋಗುತ್ತದೆ. ರಾಜ್ಯದಲ್ಲಿ ಬಹುತೇಕ ಕಾಮಗಾರಿ ಮುಗಿದಿದೆ. ಈ ಹಿಂದೆ ಅಕ್ಟೋಬರ್ನಲ್ಲಿ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಯೊಬ್ಬರು, 'ಹೊಸಕೋಟೆ ಸಮೀಪ 400 ಮೀಟರ್ ರಸ್ತೆ ನಿರ್ಮಾಣದ ಕೆಲಸಗಳು ಮಾತ್ರ ಬಾಕಿ ಉಳಿದಿದೆ. ಅದು ಕೂಡ 1 ತಿಂಗಳೊಳಗೆ ಮುಗಿಯಲಿದೆ' ಎಂದು ತಿಳಿಸಿದ್ದರು.
ಆಂಧ್ರ ಪ್ರದೇಶದಲ್ಲಿಯೂ ಆದಷ್ಟು ಬೇಗನೆ ಎಕ್ಸ್ಪ್ರೆಸ್ವೇ ನಿರ್ಮಾಣದ ಕೆಲಸಗಳು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ರಸ್ತೆ ಒಟ್ಟು 262 ಕಿಲೋಮೀಟರ್ (Km) ಉದ್ದವಿದೆ. ನೂತನ ಹೆದ್ದಾರಿ ನಿರ್ಮಾಣದ ಕಾರ್ಯಗಳು ಪೂರ್ಣಗೊಂಡ ಮೇಲೆ ಗಂಟೆಗೆ 120 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ವಾಹನಗಳು ಸಂಚರಿಸಲು ಅವಕಾಶವನ್ನು ನೀಡಬಹುದು ಎಂದು ತಿಳಿದುಬಂದಿದೆ.
2022ರ ಮೇನಲ್ಲಿ ಈ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಸದ್ಯ 4 ಪಥಗಳ ರಸ್ತೆಯನ್ನು ಅಭಿವೃದ್ಧಿಪಡಿಲಾಗುತ್ತಿದೆ. ವಾಹನ ಸಂಚಾರ ದ್ವಿಗುಣಗೊಂಡರೆ, 8 ಪಥಗಳಿಗೂ ವಿಸ್ತರಿಸಲು ಸಾಧ್ಯವಾಗಲಿದೆ. ಎಕ್ಸ್ಪ್ರೆಸ್ವೇ ಲೋಕಾರ್ಪಣೆಗೊಂಡ ನಂತರ, ಬೆಂಗಳೂರು ಹಾಗೂ ಚೆನ್ನೈ ನಗರಗಳ ನಡುವೆ ಹೀಗಿರುವ 5 ರಿಂದ 6 ಗಂಟೆ ಪ್ರಯಾಣದ ಅವಧಿ ಕೇವಲ 2 ಗಂಟೆಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ.
ಈ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿಯನ್ನು ಬರೋಬ್ಬರಿ ರೂ.17,000 ಕೋಟಿ ವೆಚ್ಚದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿದೆ. ಸುಮಾರು 17 ಮೇಲ್ಸೇತುವೆಗಳು ಹಾಗೂ 41 ಕೆಳ ಸೇತುವೆಗಳನ್ನು ಹೊಂದಿದೆ. ನೂತನ ಹೆದ್ದಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪ ಶುರುವಾಗಿ, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಅಂತ್ಯವಾಗಲಿದೆ.
ಇನ್ನು, ಬೆಂಗಳೂರು ಹಾಗೂ ಚೆನ್ನೈ ನಡುವೆ ಎಕ್ಸ್ಪ್ರೆಸ್ವೇ ಸಂಪೂರ್ಣವಾಗಿ ಸಿದ್ಧಗೊಂಡು ವಾಹನ ಸಂಚಾರ ಆರಂಭವಾದ ಮೇಲೆ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹೆದ್ದಾರಿ ಹಾದುಹೋಗುವ ಭಾಗಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ವೇಗ ದೊರೆಯಲಿದ್ದು, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಕೂಡ ಅಭಿವೃದ್ಧಿಯಾಗಲಿವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications