Expressway: ಚೆನ್ನೈ - ಬೆಂಗಳೂರು ಎಕ್ಸ್ಪ್ರೆಸ್ವೇ ಕುರಿತು ಬಿಗ್ ಅಪ್ಡೇಟ್.. ಜಸ್ಟ್ 2 ಗಂಟೆ ಪ್ರಯಾಣ!
ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ (Bengaluru Chennai Expressway) ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. 'ಈ ವರ್ಷದೊಳಗೆ ಎಕ್ಸ್ಪ್ರೆಸ್ವೇ ಯೋಜನೆಯನ್ನು ಮುಗಿಸಲು ಹೆದ್ದಾರಿ ಸಚಿವಾಲಯವು ಪ್ರಯತ್ನಿಸುತ್ತಿದೆ' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಗುರುವಾರ (ಫೆ.8) ಸಂಸತ್ತಿಗೆ ತಿಳಿಸಿದ್ದಾರೆ.
'ಚೆನ್ನೈ - ಬೆಂಗಳೂರು ಎಕ್ಸ್ಪ್ರೆಸ್ವೇ ಕಾಮಗಾರಿ ಈ ವರ್ಷಾಂತ್ಯದೊಳಗೆ ಮುಕ್ತವಾಗಲಿದ್ದು, ಆ ಬಳಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಶೀಘ್ರದಲ್ಲೇ ಎಕ್ಸ್ಪ್ರೆಸ್ವೇ ನಿರ್ಮಾಣವನ್ನು ಪೂರ್ಣಗೊಳಿಸಲು ತಮಿಳುನಾಡು ಸರ್ಕಾರದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಕೆಲಸ ಮಾಡುತ್ತಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಎಕ್ಸ್ಪ್ರೆಸ್ವೇ ಲೋಕಾರ್ಪಣೆಗೊಳ್ಳುವ ನೀರಿಕ್ಷೆಯಿದೆ' ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ರಾಜಧಾನಿಗಳನ್ನು ಸಂಪರ್ಕಿಸುವ ಈ ಎಕ್ಸ್ಪ್ರೆಸ್ವೇಯಲ್ಲಿ ವಾಹನಗಳು ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಲು ಅನುವು ಮಾಡಿಕೊಡುವಂತೆ ನಿರ್ಮಿಸಲಾಗುತ್ತಿದೆ. ಈ ಹೆದ್ದಾರಿಯು ಬೆಂಗಳೂರು ಮತ್ತು ಚೆನ್ನೈ ನಡುವಿನ 300 ಕಿ.ಮೀ ಅಂತರವನ್ನು 262 ಕಿ.ಮೀ ಗಳಿಗೆ ಕಡಿತಗೊಳಿಸಲಿದೆ. ಸಚಿವ ನಿತಿನ್ ಗಡ್ಕರಿ ಪ್ರಕಾರ, ಕೇವಲ 2 ಗಂಟೆಗಳಲ್ಲಿ ಇವೆರೆಡು ನಗರಗಳ ನಡುವೆ ಓಡಾಡಬಹುದು.
ಈಗ ಚೆನ್ನೈ - ಬೆಂಗಳೂರು ನಡುವೆ ಪ್ರಯಾಣದ ಅವಧಿಯು 5 ರಿಂದ 6 ಗಂಟೆಯಿದೆ. ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಲು ರೂ.16,730 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ವರದಿಯಾಗಿದ್ದು, ಈ ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದು ಹೋಗಲಿದೆ. ಪ್ರಸ್ತುತ, ಇದು 4 ಪಥದ ರಸ್ತೆಯಾಗಿದ್ದು, ವಾಹನಗಳ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು.
ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ, 17 ಫ್ಲೈಓವರ್ (ಮೇಲ್ಸೇತುವೆ), 41 ವಾಹನ ಕೆಳಸೇತುವೆ, 52 ಪಾದಚಾರಿ ಕೆಳಸೇತುವೆ ಮತ್ತು 4 ರೈಲ್ವೆ ಕ್ರಾಸಿಂಗ್ನ್ನು ಒಳಗೊಂಡಿರಲಿದೆ. ಈ ಹೆದ್ದಾರಿಯು ದೇಶದ ಮೊದಲ 'ಹಸಿರು ಹೆದ್ದಾರಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ರಸ್ತೆ ಕಾಮಗಾರಿಗೆ 33 ಕಿಲೋಮೀಟರ್ ಅರಣ್ಯ ಜಾಗವನ್ನು ಬಳಸಲಾಗುತ್ತಿದೆ. ಕಡಿದ ಮರಗಳಿಗೆ ಬದಲಾಗಿ, ಹೆದ್ದಾರಿ ಅಕ್ಕ-ಪಕ್ಕದಲ್ಲಿ ಹೆಚ್ಚಿನ ಮರಗಳನ್ನು ಬೆಳೆಸಲು ನಿರ್ಧಾರ ಮಾಡಲಾಗಿದೆ.
ಈ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ (Bengaluru Chennai Expressway), ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯವಾಗಲಿದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಮತ್ತು ಶ್ರೀಪೆರಂಬದೂರುಗಳನ್ನು ಸಂಪರ್ಕಿಸುತ್ತದೆ. ಸದ್ಯವಿರುವ ಬೆಂಗಳೂರು - ಚೆನ್ನೈ ಹೆದ್ದಾರಿಗಳಿಗೆ ಹೋಲಿಸಿದರೆ, ಬೇಗನೆ ಹೊಸ ಎಕ್ಸ್ಪ್ರೆಸ್ವೇಯಲ್ಲಿ ಪ್ರಯಾಣಿಸಬಹುದು.
ಇನ್ನು, ಕಳೆದ ವರ್ಷದ ಜನವರಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಚೆನ್ನೈ - ಬೆಂಗಳೂರು ಎಕ್ಸ್ಪ್ರೆಸ್ವೇ ಈ ವರ್ಷದ ಮಾರ್ಚ್ನೊಳಗೆ ಸಿದ್ಧಗೊಳ್ಳಲಿದೆ ಎಂದು ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಕಾಮಗಾರಿ ತಡವಾಗಿದ್ದು, ಗಡುವನ್ನು ಮುಂದೂಡಲಾಗಿದೆ. ಈ ಹೆದ್ದಾರಿ ನಿರ್ಮಾಣದಿಂದ ಎರಡು ರಾಜ್ಯಗಳ ನಡುವೆ ವ್ಯಾಪಾರ ಚಟುವಟಿಕೆಗಳು ವೃದ್ಧಿಸುವ ಜೊತೆಯಲ್ಲಿ ಪ್ರವಾಸೋದ್ಯಮವು ಬೆಳವಣಿಗೆಯಾಗುತ್ತದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications