Vande Bharat Express: ರಾಜ್ಯದಲ್ಲಿ ಸಂಚರಿಸುವ ಈ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಮತ್ತಷ್ಟು ವೇಗ.. ಬೇಗ ಹೋಗಬಹುದು!
ಕರ್ನಾಟಕವು ಸೇರಿದಂತೆ ದೇಶಾದ್ಯಂತ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express), ಪ್ರಯಾಣಿಕರನ್ನು ಬೇಗನೇ ಗಮ್ಯ ಸ್ಥಾನವನ್ನು ತಲುಪಿಸುವ ಮೂಲಕ ಜನಪ್ರಿಯವಾಗಿದೆ. ಕಾಚಿಗುಡ (ಹೈದರಾಬಾದ್) - ಯಶವಂತಪುರ (ಬೆಂಗಳೂರು) ನಡುವೆ ಸಂಚರಿಸುವ ಈ ರೈಲು, ಇನ್ಮುಂದೆ ಮತ್ತಷ್ಟು ವೇಗವಾಗಿ ಸಂಚರಿಸಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ದಕ್ಷಿಣ ಮಧ್ಯ ರೈಲ್ವೆ (South Central Railway), ಕಾಚಿಗುಡ - ಬೆಂಗಳೂರು ಮಧ್ಯೆ ಓಡಾಟ ನಡೆಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸಿರುವುದಾಗಿ ಬುಧವಾರ ಘೋಷಿಸಿದೆ. ಇದರಿಂದ ಪ್ರಯಾಣದ ಅವಧಿಯು 15 ನಿಮಿಷ ಕಡಿಮೆಯಾಗಲಿದ್ದು, ಈ ಮೊದಲು 8 ಗಂಟೆ 30 ನಿಮಿಷ ಹಿಡಿಯುತ್ತಿದ್ದ ಪ್ರಯಾಣದ ಅವಧಿಯೂ 8 ಗಂಟೆ 15 ನಿಮಿಷಕ್ಕೆ ಇಳಿಕೆಯಾಗಲಿದೆ.

ಪರಿಷ್ಕೃತ ವೇಳಾಪಟ್ಟಿಯೂ ಇಂದಿನಿಂದ (ಡಿ. 21) ಜಾರಿಗೆ ಬಂದಿದ್ದು, ಕಾಚಿಗುಡದಿಂದ (Kacheguda) ಬೆಳಗ್ಗೆ 5.45ಕ್ಕೆ ಸಂಚಾರವನ್ನು ಆರಂಭಿಸುವ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಮಧ್ಯಾಹ್ನ 2 ಗಂಟೆಗೆ ಯಶವಂತಪುರ (Yesvantpur) ತಲುಪಲಿದೆ. ಇಲ್ಲಿಂದ ಮಧ್ಯಾಹ್ನ 2.45ಕ್ಕೆ ಸಂಚಾರ ಶುರು ಮಾಡಲಿದ್ದು, ರಾತ್ರಿ 11 ಗಂಟೆಗೆ ಕಾಚಿಗುಡ ರೈಲ್ವೆ ನಿಲ್ದಾಣವನ್ನು ತಲುಪುತ್ತದೆ.
ಕಾಚಿಗುಡ (ಹೈದರಾಬಾದ್) - ಯಶವಂತಪುರ (ಬೆಂಗಳೂರು) ಮಧ್ಯೆ ಓಡಾಟ ನಡೆಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇಕಡ 100% ಪ್ರಯಾಣಿಕರಿಂದ ಭರ್ತಿಯಾಗಿ ಈ ರೈಲು ಸಂಚರಿಸುತ್ತಿದ್ದು, ವೇಗ ಹಾಗೂ ಅತ್ಯಾಧುನಿಕ ಸೌಕರ್ಯಗಳೊಂದಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸೆಳೆಯುತ್ತಿದೆ ಎಂದು ವರದಿಯಾಗಿದೆ.

ಕರ್ನಾಟಕವು ಶೀಘ್ರದಲ್ಲೇ 4ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಸಾಕ್ಷಿಯಾಗಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರು - ಕೊಯಮತ್ತೂರು ನಡುವೆ ಈ ರೈಲು ಸಂಚಾರ ನಡೆಸಲಿದೆ. ಬೆಂಗಳೂರು - ಕೊಯಮತ್ತೂರು ಜಂಕ್ಷನ್ ಮಧ್ಯೆ ಸೇಲಂ ಮಾರ್ಗವಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಾಟ ನಡೆಸಲು ರೈಲ್ವೆ ಅಧಿಕಾರಿಗಳು ತಾತ್ಕಾಲಿಕ ಒಪ್ಪಿಗೆ ನೀಡಿದ್ದು, ರೈಲ್ವೆ ಮಂಡಳಿಯ ಅಂತಿಮ ಅನುಮೋದನೆಗೆ ಕಾಯಲಾಗುತ್ತಿದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು 8 ಕೋಚ್ಗಳನ್ನು ಒಳಗೊಂಡಿರಲಿದ್ದು, ಬೆಂಗಳೂರು - ಕೊಯಮತ್ತೂರು ನಡುವಿನ ಅಂತರವನ್ನು ಕ್ರಮಿಸಲು ಕೇವಲ 5 ಗಂಟೆ ತೆಗೆದುಕೊಳ್ಳಲಿದೆ. ಪ್ರಸ್ತುತ, ಈ ಮಾರ್ಗದಲ್ಲಿ ಸಂಚರಿಸುವ ವೇಗದ ರೈಲು, ಇದೇ ದೂರವನ್ನು 6 ಗಂಟೆ 45 ನಿಮಿಷದಲ್ಲಿ ಕ್ರಮಿಸಲಿದೆ. ಕೆಆರ್ ಪುರಂ ಮತ್ತು ಬಂಗಾರಪೇಟೆಯಲ್ಲಿಯೂ ಈ ವಂದೇ ಭಾರತ್ ರೈಲನ್ನು ನಿಲುಗಡೆ ಮಾಡಬೇಕೆಂದು ಅಲ್ಲಿನ ಸ್ಥಳೀಯರ ಒತ್ತಾಯವಾಗಿದೆ.
ಸದ್ಯ, ಕರ್ನಾಟಕದಲ್ಲಿ ಬೆಂಗಳೂರು - ಹುಬ್ಬಳ್ಳಿ - ಧಾರವಾಡ, ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದೆ. ಬೆಂಗಳೂರಿಂದ ಧಾರವಾಡ ನಡುವೆ ಓಡಾಟ ನಡೆಸುತ್ತಿರುವ ಈ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿದೆ. ವೇಗವಾಗಿ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್, ಆರಾಮದಾಯಕ ಆಸನ, ವೈಫೈ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಕರ್ಯವನ್ನು ಹೊಂದಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications