ರಾಜ್ಯಕ್ಕೆ ಭಾನುವಾರದಿಂದ 3ನೇ ವಂದೇ ಭಾರತ್ ರೈಲು, ಎಲ್ಲಿಂದ ಎಲ್ಲಿಗೆ?
ಕರ್ನಾಟಕವು ಮೂರನೇ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿಗೆ ಸೆಪ್ಟೆಂಬರ್ 25 ರಿಂದ (ಭಾನುವಾರ) ಸಾಕ್ಷಿಯಾಗಲಿದೆ. ಈ ರೈಲು, ಬೆಂಗಳೂರು (Bengaluru) ಮತ್ತು ಹೈದರಾಬಾದ್ (Hyderabad) ನಡುವೆ ಸಂಪರ್ಕ ಕಲ್ಪಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.
ಪ್ರೀಮಿಯಂ ಸೆಮಿ ಹೈಸ್ಪೀಡ್ ರೈಲು ಆಗಿರುವ ವಂದೇ ಭಾರತ್ ಎಕ್ಸ್ಪ್ರೆಸ್, ಯಶವಂತಪುರ (ಬೆಂಗಳೂರು) ಮತ್ತು ಕಾಚಿಗುಡ (ಹೈದರಾಬಾದ್) ನಡುವಿನ 609 ಕಿಲೋಮೀಟರ್ ದೂರವನ್ನು 8.30 ಗಂಟೆಗಳಲ್ಲಿ ಕ್ರಮಿಸಲಿದೆ. ಗರಿಷ್ಠ 71.74 kmph ವೇಗದಲ್ಲಿ ಸಂಚರಿಸಲಿದೆ. ಪ್ರಸ್ತುತ ವೇಗದ ದುರೊಂಟೊ ಎಕ್ಸ್ಪ್ರೆಸ್ ರೈಲಿಗಿಂತ ಒಂದು ಗಂಟೆ ಮೊದಲು ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಲಿದೆ.

ಈ ರೈಲು, ಕೇವಲ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯಾಗಲಿದ್ದು, ಕರ್ನಾಟಕದ ಯಾವುದೇ ಸ್ಟೇಷನ್ ನಲ್ಲಿ ನಿಲ್ಲುವುದಿಲ್ಲ. ಈ ಹಿಂದೆ, ರಾಯಚೂರು ಮಾರ್ಗವಾಗಿ ಸಂಚರಿಸಿ ಯಲಹಂಕದಲ್ಲಿ ನಿಲುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಈ ರೈಲನ್ನು ದಕ್ಷಿಣ ಮಧ್ಯ ರೈಲ್ವೆ (SCR) ನಿರ್ವಹಣೆ ಮಾಡಲಿದ್ದು, ಸೆಪ್ಟೆಂಬರ್ 24 ರಂದು ಹಸಿರು ನಿಶಾನೆ ತೋರಿಸಲಾಗುತ್ತದೆ. ಮರುದಿನ ಕಾರ್ಯಾಚರಣೆ ಶುರು ಮಾಡಲಿದೆ.
ಬೆಂಗಳೂರು ನೈಋತ್ಯ ರೈಲ್ವೆ (SWR)ಯ ಹಿರಿಯ ಅಧಿಕಾರಿಯಾಗಿರುವ ಕುಸುಮಾ ಹರಿಪ್ರಸಾದ್ ಅವರು ಪ್ರತಿಕ್ರಿಯೆ ನೀಡಿದ್ದು, 'ಪ್ರತಿದಿನ ಎರಡು ನಗರಗಳ ನಡುವೆ ಪ್ರಯಾಣಿಸುವ ಸಾವಿರಾರು ಜನರಿಗೆ ಈ ರೈಲು ವೇಗವಾಗಿ ನಿರ್ದಿಷ್ಟ ಸ್ಥಳವನ್ನು ತಲುಪಿಸುತ್ತದೆ. ಇದು, ಆರಾಮದಾಯಕ ಸಾರಿಗೆ ವಿಧಾನವಾಗಿದೆ' ಎಂದಿದ್ದಾರೆ. ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ನ ನಿಖರವಾದ ಸಮಯ, ಟಿಕೆಟ್ ದರದ ಬಗ್ಗೆ ಸದ್ಯ ವಿವರಗಳಿಲ್ಲ.
ಇಂದಿನಿಂದ (ಗುರುವಾರ) ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಓಡಾಟ ನಡೆಸುವ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಶುರುವಾಗಿದೆ. ಈಗಾಗಲೇ, ಕಾಚಿಗುಡ ರೈಲು ನಿಲ್ದಾಣವನ್ನು ಬಿಟ್ಟಿದ್ದು, ಮಧ್ಯಾಹ್ನ 2 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ. ಇಲ್ಲಿಂದ 2.45ಕ್ಕೆ ಹಿಂದಿರುಗಲಿದೆ. ಈ ರೈಲಿಗೆ 20703 - 20704 ಸಂಖ್ಯೆಯನ್ನು ನೀಡಲಾಗಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ, ಬೆಳಗ್ಗೆ 5.30ಕ್ಕೆ ಕಾಚಿಗುಡ (ಹೈದರಾಬಾದ್) ರೈಲು ನಿಲ್ದಾಣದಿಂದ ಹೊರಡುವ ರೈಲು (ಸಂಖ್ಯೆ - 20703), 7 ಗಂಟೆಗೆ ಮೆಹಬೂಬ್ ನಗರ, 8.40ಕ್ಕೆ ಕರ್ನುಲ್ ಸಿಟಿ, 10.55ಕ್ಕೆ ಅನಂತಪುರ, 11.30ಕ್ಕೆ ಧರ್ಮಾವರಂ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಯಶವಂತಪುರ (ಬೆಂಗಳೂರು) ಸ್ಟೇಷನ್ ತಲುಪಲಿದೆ.
ಮಧ್ಯಾಹ್ನ 2.45ಕ್ಕೆ ಯಶವಂತಪುರದಿಂದ ಹೊರಡುವ ರೈಲು (ಸಂಖ್ಯೆ - 20704), 5.20ಕ್ಕೆ ಧರ್ಮಾವರಂ, 5.41ಕ್ಕೆ ಅನಂತಪುರ, 7.51ಕ್ಕೆ ಕರ್ನುಲ್ ಸಿಟಿ, 9.40ಕ್ಕೆ ಮೆಹಬೂಬ್ ನಗರದಲ್ಲಿ ನಿಲುಗಡೆಯಾಗಿ, ರಾತ್ರಿ 11.15ರ ಸುಮಾರಿಗೆ ಕಾಚಿಗುಡ ರೈಲು ನಿಲ್ದಾಣವನ್ನು ತಲುಪುತ್ತದೆ. ವಾರದ ಆರು ದಿನ ಸಂಚರಿಸಲಿದೆ ಎಂದು ವರದಿಯಾಗಿದೆ.
ಇನ್ನು, ಈಗಾಗಲೇ ರಾಜ್ಯದ ಎರಡು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಓಡಾಟದ ನಡೆಸುತ್ತಿವೆ. ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವೆ ಕೆಲ ತಿಂಗಳಿಂದ ಓಡಾಟ ನಡೆಸುತ್ತಿರುವ ರೈಲು, ಮಂಗಳವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳಲ್ಲಿ ಸಂಚರಿಸುತ್ತಿದೆ. ಪ್ರಯಾಣದ ಅವಧಿ ಕೇವಲ 7 ಗಂಟೆ ಮಾತ್ರ. ಇನ್ನೊಂದು, ರೈಲು ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications