ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ: KSRTC ಖಡಕ್ ಸೂಚನೆ.. ಕಾರಣವೇನು?
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ (Bengaluru Mysuru Expressway)ಯಲ್ಲಿ ಅಪಘಾತಗಳನ್ನು ಕಡಿಮೆಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇಂದಿನಿಂದ ಜಾರಿಗೆ ಬರುವಂತೆ ದ್ವಿಚಕ್ರ ವಾಹನ, ಆಟೋ ಸಂಚಾರವನ್ನು ನಿಷೇಧ ಮಾಡಿದೆ. ಇದೀಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಬಸ್ ವೇಗಕ್ಕೆ ಬ್ರೇಕ್ ಹಾಕಿದೆ.
ಮೈಸೂರಿನಿಂದ ಬೆಂಗಳೂರಿಗೆ ನಿತ್ಯ ನೂರಾರು ಜನರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಂಚರಿಸುವುದರಿಂದ ಮೈಸೂರು ವಿಭಾಗದ ಅಧಿಕಾರಿಗಳು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳ ಸಂಖ್ಯೆಯನ್ನು ನಿಯಂತ್ರಿಸಲು ಮುಂದಾಗಿದ್ದು, ಅದಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದ್ದಾರೆ. ಎಕ್ಸ್ಪ್ರೆಸ್ವೇಯ ಮೊದಲ ಅಥವಾ ಎರಡನೇ ಪಥದಲ್ಲಿ ಮಾತ್ರ ಬಸ್ ಓಡಿಸುವಂತೆ ಚಾಲಕರಿಗೆ ಸೂಚನೆ ನೀಡಿದ್ದಾರೆ. ಬಲಭಾಗದ ಮೂರನೇ ಪಥ ಬಳಸದಂತೆ ತಿಳಿಸಿದ್ದಾರೆ.

ಮುಂಭಾಗದ ಮತ್ತೊಂದು ವಾಹನವನ್ನು ಬಸ್ ಚಾಲಕರು, ಸರಿಯಾದ ಪಥದಲ್ಲಿದ್ದಾಗ ಹಿಂದಿಕ್ಕಬೇಕು. ಪಥ ಶಿಸ್ತನ್ನು (lane discipline) ಕಡ್ಡಾಯವಾಗಿ ಪಾಲನೆ ಮಾಡಬೇಕು. ಚಾಲಕರು ಸೈಡ್ ಮಿರರ್ ನೋಡುತ್ತಿರಬೇಕು. ಪಥ ಬದಲಾವಣೆಯ ಸಮಯದಲ್ಲಿ ಟರ್ನ್ ಇಂಡಿಕೇಟರ್ ಬಳಸಬೇಕು. ಜೊತೆಗೆ ಬಸ್ ಗರಿಷ್ಠ ವೇಗವನ್ನು 80 kmph ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜುಲೈ 12 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿ, ಸುರಕ್ಷತೆ ದೃಷ್ಟಿಯಿಂದ ಈ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು, ಮೂರು ಚಕ್ರದ ವಾಹನಗಳು (ಆಟೋ), ಟ್ರಾಕ್ಟರ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಹಾಗೂ ಕ್ವಾಡ್ರಿ ವಾಹನಗಳ ಸಂಚಾರವನ್ನು ಇಂದಿನಿಂದ (ಆಗಸ್ಟ್ 1) ಜಾರಿಗೆ ಬರುವಂತೆ ನಿಷೇಧ ಮಾಡಲಾಗುವುದು ಎಂದು ತಿಳಿಸಿತ್ತು.

ಇದರೊಂದಿಗೆ, 118 ಕಿಲೋಮೀಟರ್ ಉದ್ದದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ವೇಗ ಮಿತಿಯನ್ನು 80 kmph ನಿಂದ 100 kmphಗೆ ಸೀಮಿತಗೊಳಿಸಿ, ಆದೇಶ ಹೊರಡಿಸಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿ, ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಹೆದ್ದಾರಿ ಲೋಕಾರ್ಪಣೆಗೂ ಮೊದಲೇ ಅಲ್ಲಿ ಬೈಕ್, ಆಟೋ ಸಂಚಾರವನ್ನು ನಿಷೇಧಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳ ತಡೆಗೆ ಪೊಲೀಸ್ ಇಲಾಖೆಯು ಮುಂದಾಗಿದ್ದು, ಹಲವು ಕ್ರಮಗಳನ್ನು ಕೈಗೊಂಡಿದೆ. ಹೆದ್ದಾರಿಯಲ್ಲಿ AI (ಕೃತಕ ಬುದ್ದಿಮತ್ತೆ) ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಸಿದೆ. ಈ ಬಗ್ಗೆ ಸ್ವತಃ ಸಂಚಾರಿ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದರು. ಪೊಲೀಸರ ಸತತ ಪರಿಶ್ರಮದಿಂದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹತೋಟಿಗೆ ಬಂದಿದೆ.

ಜುಲೈ 1 ರಿಂದ ಜುಲೈ 24 ರವರೆಗೆ ಕೇವಲ 30 ಅಪಘಾತ ಪ್ರಕರಣಗಳು ವರದಿಯಾಗಿದ್ದು, 3 ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಅದಕ್ಕೂ ಮುನ್ನ ತಿಂಗಳುಗಳಲ್ಲಿ ಈ ಹೆದ್ದಾರಿಯಲ್ಲಿ ಜರುಗಿದ ವಿವಿಧ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡರ ಸಂಖ್ಯೆ 100ರ ಗಡಿ ದಾಟಿತ್ತು. ಇನ್ನು, ಇಂದಿನಿಂದ ದ್ವಿಚಕ್ರ ವಾಹನ, ಆಟೋ ಸಂಚಾರವನ್ನು ಎಕ್ಸ್ಪ್ರೆಸ್ವೇಯಲ್ಲಿ ನಿಷೇಧಿಸಿದ್ದು, ಆ ವಾಹನಗಳು ಹೆದ್ದಾರಿಯನ್ನು ಪ್ರವೇಶಿಸಿದರೆ ರೂ.500 ದಂಡ ಕಟ್ಟಬೇಕು.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತವನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಕೆಎಸ್ಆರ್ಟಿಸಿ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈಗಲಾದರೂ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುವ ಮೂಲಕ ಈ ದಶಪಥ ರಸ್ತೆಯ ನಿರ್ಮಾಣದ ಉದ್ದೇಶ ಈಡೇರಲಿ ಎಂಬುದು ಜನ ಸಾಮಾನ್ಯರ ಬಯಕೆಯಾಗಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications