ಹೊಸ ಬಸ್ ನಿಲ್ದಾಣ ಮಾಯ: ಬಿಎಂಟಿಸಿಗೆ ಶಾಕ್ ಕೊಟ್ಟು ಎಗರಸಿದ್ದು ಇವರೇ!
ಬೆಂಗಳೂರಿನಲ್ಲಿ ಕಳ್ಳತನಗಳು ನಿತ್ಯ ನಡೆಯುತ್ತಲೇ ಇರುತ್ತವೆ, ಈಗ ಕಳ್ಳರಿಗೆ ಮನೆಗಳನ್ನು ದೋಚುವುದು ಬೇಸರಗೊಂಡಂತಿದೆ. ನೇರವಾಗಿ ಸರ್ಕಾರಿ ಆಸ್ತಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ 10 ಲಕ್ಷ ರೂ. ವೆಚ್ಚಿಸಿ ಸ್ಟೀಲ್ ರಚನೆಯೊಂದಿಗೆ ನಿರ್ಮಿಸಿದ್ದ ಬಸ್ ತಂಗುದಾಣವನ್ನು ಕೇವಲ ಒಂದು ವಾರದಲ್ಲೇ ಕಳ್ಳರು ಎಗರಿಸಿದ್ದಾರೆ.
ಬಸ್ ತಂಗುದಾಣವನ್ನು ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಿದ್ದು, ಇದನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿರ್ವಹಿಸುತ್ತಿತ್ತು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಶೆಲ್ಟರ್ ನಿರ್ಮಾಣದ ಹೊಣೆ ಹೊತ್ತಿರುವ ಕಂಪನಿಯೊಂದರ ಸಹಾಯಕ ಉಪಾಧ್ಯಕ್ಷ ಎನ್.ರವಿರೆಡ್ಡಿ ಅವರು ಬಸ್ ಶೆಲ್ಟರ್ ಮಾಯವಾದ ಒಂದು ತಿಂಗಳ ನಂತರ ಸೆಪ್ಟೆಂಬರ್ 30 ರಂದು ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ವಿಚಿತ್ರವೆಂದರೆ ಈ ಬಸ್ ನಿಲ್ದಾಣವು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಸಮೀಪ ಹಾಗೂ ವಿಧಾನಸೌಧದಿಂದ ಒಂದು ಕಿಲೋಮೀಟರ್ಗೂ ಕಡಿಮೆ ಅಂತರದಲ್ಲಿದೆ. ಇನ್ನೂ ವಿಚಿತ್ರವೆಂದರೆ ನಿಲ್ದಾಣ ಕಣ್ಮರೆಯಾದ ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ದೂರು ನೀಡಿರುವ ಎನ್.ರವಿರೆಡ್ಡಿ ಅವರ ಪ್ರಕಾರ, ಪರಿಶೀಲನೆಗಾಗಿ ನಿಲ್ದಾಣಕ್ಕೆ ಭೇಟಿ ನೀಡಿದಾಗಲೇ ಕಳುವಾಗಿರುವುದು ತಿಳಿದಿದೆ.
ರೆಡ್ಡಿ ಅವರ ದೂರಿನಲ್ಲಿ "ಬಿಬಿಎಂಪಿ ವತಿಯಿಂದ ನಗರದಲ್ಲಿ ಬಸ್ ಶೆಲ್ಟರ್ಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ. ಅದರಂತೆ, ಆಗಸ್ಟ್ 21 ರಂದು ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಈ ನಿರ್ದಿಷ್ಟ ಬಸ್ ಶೆಲ್ಟರ್ (ಕಾಫಿ ಡೇ ಬಳಿ) ನಿರ್ಮಿಸಿದ್ದೇವೆ. ಇದು ಸ್ಟೇನ್ಲೆಸ್ ಸ್ಟೀಲ್ ಆಗಿತ್ತು. 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ.
ಆಗಸ್ಟ್ 28 ರಂದು ನಾವು ನಿಲ್ದಾಣಕ್ಕೆ ಭೇಟಿ ನೀಡಿದಾಗ ಅದು ಕಣ್ಮರೆಯಾಗಿತ್ತು, ನಮಗೆ ಅದನ್ನು ತೆಗೆದುಹಾಕುವ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಕಾರಣ ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದೆವು, ಅವರಿಂದಲೂ ತೆರವುಗೊಳಿಸುವುದರ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಿಚಾರ ತಿಳಿದು ನಾವು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ನಿಗೂಢವನ್ನು ಭೇದಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಸ್ ನಿಲ್ದಾಣಗಳನ್ನು ಎಗರಿಸಿದ ಉದಾಹರಣೆಗಳಿವೆ. ಕೆಲವನ್ನು ಬಿಬಿಎಂಪಿ ಇಂದಲೇ ತೆರವುಗೊಳಿಸಿದ್ರೆ ಇನ್ನೂ ಕೆಲವು ಕಳುವಾಗಿದ್ದವು.
ಕಳೆದ ಮಾರ್ಚ್ನಲ್ಲಿ ಎಚ್ಆರ್ಬಿಆರ್ ಲೇಔಟ್ನಲ್ಲಿ ಮೂರು ದಶಕಗಳಷ್ಟು ಹಳೆಯದಾದ ಬಸ್ ನಿಲ್ದಾಣವು ರಾತ್ರೋರಾತ್ರಿ ಕಣ್ಮರೆಯಾಗಿತ್ತು. ಕಲ್ಯಾಣ್ ನಗರದಲ್ಲಿನ ಈ ಬಸ್ ನಿಲ್ದಾಣವನ್ನು 1990 ರಲ್ಲಿ ಲಯನ್ಸ್ ಕ್ಲಬ್ ಕೊಡುಗೆಯಾಗಿ ನೀಡಿತು ಎಂದು ಈ ಹಿಂದೆ ಮಾಧ್ಯಮ ವರದಿ ತಿಳಿಸಿದೆ. ವಾಣಿಜ್ಯ ಸ್ಥಾಪನೆಗೆ ದಾರಿ ಮಾಡಿಕೊಡಲು ಬಿಬಿಎಂಪಿಯಿಂದ ರಾತ್ರೋರಾತ್ರಿ ಅದನ್ನು ತೆಗೆಯಲಾಗಿತ್ತು.
ಇನ್ನು ಕಳ್ಳತನಗಳ ವಿಷಯಕ್ಕೆ ಬಂದ್ರೆ 2015ರಲ್ಲಿ ದೂಪನಹಳ್ಳಿ ಬಸ್ ನಿಲ್ದಾಣ ಹೊರೈಜನ್ ಶಾಲೆಯ ಬಳಿ ರಾತ್ರೋರಾತ್ರಿ ನಾಪತ್ತೆಯಾಗಿತ್ತು. ಈ ಹಿಂದೆ 2014ರಲ್ಲಿ ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್ 3ನೇ ಹಂತದಲ್ಲಿ 20 ವರ್ಷಗಳಷ್ಟು ಹಳೆಯದಾದ ಬಸ್ ನಿಲ್ದಾಣ ನಾಪತ್ತೆಯಾಗಿತ್ತು. ಇವು ತೀರಾ ಹಳೆಯವಾದ್ದರಿಂದ ಅಧಿಕಾರಿಗಳು ಹೊಸ ಬಸ್ ನಿಲ್ದಾಣವನ್ನು ಹಾಕಲಿದ್ದಾರೆ ಎಂದುಕೊಂಡು ಸಾರ್ವಜನಿಕರು ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ.
ಖುದ್ದು ಬಿಎಂಟಿಸಿ ಅಧಿಕಾರಿಗಳು ಬಂದು ನೋಡಿ ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದಾಗ ಮಾತ್ರ ಇಂತಹ ಘಟನೆಗಳು ಬೆಳಕಿಗೆ ಬರುತ್ತವೆ. ಈಗ ಎಲ್ಲೆಡೆ ಸಿಸಿ ಕ್ಯಾಮರಾಗಳು ಇರುವುದರಿಂದ ಕಳ್ಳರು ಬೇಗನೆ ಸಿಕ್ಕಿ ಬೀಳುತ್ತಾರೆ. ಆದರೆ ಮಳೆಗಾಲದಲ್ಲಿ ಬಸ್ ನಿಲ್ದಾಣಗಳು ಹೀಗೆ ಕಳುವಾದ್ರೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಇಂತಹ ಕೃತ್ಯಗಳಿಗೆ ಕೈಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.


Click it and Unblock the Notifications