ಎಂಜಿ ರಸ್ತೆಯಲ್ಲಿ ಓಪನ್ ಸ್ಟ್ರೀಟ್; ಕುಣಿದು ಕುಪ್ಪಳಿಸಿದ ಸಾರ್ವಜನಿಕರು
ಸದಾ ವಾಹನ ದಟ್ಟಣೆಯಿಂದ ತುಂಬಿ ತುಳುಕುತ್ತಿರುವ ಬೆಂಗಳೂರಿನ ಎಂಜಿ ರಸ್ತೆ ಭಾನುವಾರದಂದು (ಫೆ. 21, 2015) ಸಂಚಾರ ಮುಕ್ತಗೊಂಡಿರುವುದು ಎಲ್ಲರಲ್ಲೂ ಹರ್ಷ ಮೂಡಿಸಿತ್ತು. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನಗರ ಭೂ ಸಾರಿಗೆ ನಿರ್ದೇಶಾಲಯ ಹಾಗೂ ಮತ್ತಿತ್ತರ ಸರ್ಕಾರಿ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಎಂಜಿ ರಸ್ತೆ 'ಓಪನ್ ಸ್ಟ್ರೀಟ್'ಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕಾವೇರಿ ಎಂಪೋರಿಯಂ ವರೆಗಿನ ಮಾರ್ಗವನ್ನು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ 12 ತಾಸುಗಳ ಕಾಲ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಸದಾ ಟ್ರಾಫಿಕ್ ಸಿಗ್ನಲ್ ಹಾಗೂ ವಾಹನ ದಟ್ಟಣೆಯಿಂದ ಬೆಸತ್ತು ಹೋಗಿರುವ ಸಾರ್ವಜನಿಕರು ಮಾತ್ರ ಕುಣಿದು ಕುಪ್ಪಳಿಸುವ ಮೂಲಕ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು.

ಎಂದಿನಿಗಿಂತಲೂ ವಿರುದ್ಧವಾಗಿ ಎಂಜಿ ರಸ್ತೆ ಅಕ್ಷರಶ: ಕಲೆ, ಸಂಸ್ಕೃತಿಗಳ ಬೀಡು ಎನಿಸಿಕೊಂಡಿತ್ತು. ಈ ಮೂಲಕ "ಕರ್ನಾಟಕ ಒಂದು ರಾಜ್ಯ, ಹಲವು ಜಗತ್ತುಗಳು" ಎಂಬ ಧ್ಯೇಯ ವಾಕ್ಯಕ್ಕೆ ಮತ್ತಷ್ಟು ಒತ್ತು ನೀಡಿದಂತಾಗಿತ್ತು.
ಎಂಜಿ ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ನಡೆದ ಮುಕ್ತ ಹಾದಿ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಚಾಲನೆ ನೀಡಿದರು.
ಎಂಜಿ ರಸ್ತೆಯ ಮುಕ್ತ ಹಾದಿಗೆ ದೊರಕಿರುವ ಅಭೂತಪೂರ್ವ ಬೆಂಬಲಕ್ಕೆ ಸಾಕ್ಷಿಯೆಂಬಂತೆ ಪ್ರತಿ ನಿತ್ಯ 20,000ದಷ್ಟು ಸಂಚರಿಸುವ ಎಂಜಿ ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ಭಾನುವಾರದಂದು 50,000 ಕ್ಕೂ ಹೆಚ್ಚು ಮಂದಿ ಸಂಚರಿಸಿದ್ದರು. ದೇಶಿ ಆಟಗಳ ಮೋಜು ಮಸ್ತಿಯೊಂದಿಗೆ ಮಕ್ಕಳು ಚಿತ್ರಕಲೆಯಲ್ಲಿ ಮಗ್ನರಾಗಿರುವ ದೃಶ್ಯಗಳು ಮನ ಸೆಳೆಯುವಂತಿತ್ತು.
ಇವೆಲ್ಲದರ ನಡುವೆ ಜಾನಪದ ಕುಣಿತವೂ ನೆರೆದಿದ್ದವರನ್ನು ರಂಜಿಸುವಂತಾಗಿತ್ತು. ಬೆಂಗಳೂರು ಮುಕ್ತ ಹಾದಿ ಕಾರ್ಯಕ್ರಮದಲ್ಲಿ ಸಾರ್ವಜನಿಕ ಜೊತೆಗೆ ಸೈಕಲ್ ಸವಾರಿಗೂ ಉತ್ತೇಜನ ನೀಡಲಾಯಿತು. ಇದೇ ಸಂದರ್ಭದಲ್ಲಿ ಹೊರ ರಾಜ್ಯದಿಂದ ಬಂದ ಜನರಿಗೆ ಕನ್ನಡದ ಮೊದಲ ಪಾಠವನ್ನು ಕಲಿಸಿ ಕೊಡುವ ಪ್ರಯತ್ನವೂ ನಡೆದಿರುವುದು ಪ್ರಶಂಸೆಗೆ ಪಾತ್ರವಾಗಿತ್ತು.
ಬೆಂಗಳೂರಿನಲ್ಲಿ ನಡೆದ ಓಪನ್ ಸ್ಟ್ರೀಟ್ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಸಂಚಾರ ಪೊಲೀಸ್ ಹಾಗೂ ಬಿಎಂಟಿಸಿ ಸಹ ಕೈಜೋಡಿಸಿಕೊಂಡಿದ್ದವು.


Click it and Unblock the Notifications







































