ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತೀರಾ? ಹಾಗಾದ್ರೆ ಯಮರಾಜ ನಿಮ್ಮನ್ನು ಬಿಡಲಾರ..!
ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಗೊಂಡರು ಕೆಲವರಿಗೆ ಅದು ಅರ್ಥವೇ ಆಗುತ್ತಿಲ್ಲ. ದಂಡ ಕಟ್ಟುತ್ತವೇ ಹೊರತು ನಿಯಮ ಪಾಲನೆ ಮಾಡುದಿಲ್ಲ ಎನ್ನುವ ಕೆಲವು ಭಂಡರಿಗೆ ಟ್ರಾಫಿಕ್ ಪೊಲೀಸರು ಸರಿಯಾಗಿ ಟಾಂಗ್ ನೀಡುತ್ತಿದ್ದಾರೆ. ಅದಕ್ಕಾಗಿಯೇ ಯಮಲೋಕದಿಂದ ಬಂದಿರುವ ಯಮರಾಜನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾನೆ.

ಹೌದು, ಸಿಲಿಕಾನ್ ಸಿಟಿ ಬೆಂಗಳೂರು ಈಗಾಗಲೇ ಟ್ರಾಫಿಕ್ ಅವಾಂತರಗಳಿಂದ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ಟ್ರಾಫಿಕ್ ಸಮಸ್ಯೆಯನ್ನ ನಿಯಂತ್ರಿಸಲು ಪರದಾಡುತ್ತಿರುವ ನಮ್ಮ ಬೆಂಗಳೂರು ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವುದಲ್ಲದೇ ಸಾಕ್ಷಾತ್ ಯಮರಾಜನನ್ನೇ ಕರೆತಂದು ವಾಹನ ಸವಾರರಿಗೆ ರಸ್ತೆ ನಿಯಮಗಳ ಜಾಗೃತಿ ಮೂಡಿಸುತ್ತಿರುವುದು ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.

ಯಮ ಬರ್ತಾನೆ ಹುಷಾರ್
ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಿ, ಇಲ್ಲವಾದರೆ ನನ್ನ ಜತೆ ನಡೆಯಿರಿ ಎಂದು ಹೆಲ್ಮೆಟ್ ಹಾಕದ ಬೈಕ್ಗಳನ್ನು ಏರುವ ಯಮರಾಜ ಅವರಿಗೆ ಎಚ್ಚರಿಕೆಯ ಸುಳಿವು ನೀಡುತ್ತಾನೆ. ಹೆಲ್ಮೆಟ್ ಹಾಕು ಇಲ್ಲವೇ ಯಮಪೂರಿಗೆ ಬರುವೆಯಾ ಎಂದು ಮಾರ್ಮಿಕವಾಗಿ ಪ್ರಶ್ನೆ ಕೇಳುತ್ತಾನೆ.

ಇದಕ್ಕೆ ಕಾರಣ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ, ಮೊಕ್ಕದ್ದಮೆ ದಾಖಲಿಸಿಕೊಂಡು ದಂಡ ವಿಧಿಸಿದರೂ ಸಹ ಹೆಲ್ಮೆಟ್ ಧರಿಸದೇ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಿದ್ದರೂ ದಹ ದ್ವಿಚಕ್ರ ವಾಹನ ಸವಾರರು ಈ ನಿಯಮ ಪಾಲಿಸುತ್ತಿಲ್ಲವಾದ್ದರಿಂದ ಸಂಚಾರ ಪೊಲೀಸರು ಈ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ತಿಳಿ ಹೇಳಲು ಸಂಚಾರಿ ಪೊಲೀಸರು ಯಮಧರ್ಮನನ್ನೇ ಧರೆಗಿಳಿಸಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಅಭಿಯಾನ ನಡೆಸಿದ ಯಮರಾಜ ದಂಡ ಕಟ್ಟುವುದು ಮುಖ್ಯವಲ್ಲ ನಿನ್ನ ಜೀವ ಮುಖ್ಯ ಅದನ್ನು ಕಾಪಾಡಿಕೊಂಡರೇ ಎಲ್ಲರಿಗೂ ಒಳ್ಳೆಯದು ಎನ್ನುವುದನ್ನ ತಿಳಿ ಹೇಳುತ್ತಿದ್ದಾನೆ.

ಹೀಗಾಗಿಯೇ ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ವಿನೂತನ ಪ್ರಯತ್ನವು ಇದೀಗ ಭಾರೀ ಜನಪ್ರಿಯತೆ ಪಡೆಯುತ್ತಿದ್ದು, ಸಾವಿರಾರು ವಾಹನ ಚಾಲಕರು ಯಮನನ್ನು ಕಂಡು ರಸ್ತೆ ನಿಯಮ ಉಲ್ಲಂಘಿಸಲು ಹಿಂದೆ ಮುಂದೆ ನೋಡುವಂತಾಗಿದೆ ಎಂದ್ರೆ ನೀವು ನಂಬಲೇಬೇಕು.

ಕೇವಲ ಯಮರಾಜನನ್ನ ಅಷ್ಟೇ ಅಲ್ಲದೆ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಟ್ರಾಫಿಕ್ ಪೊಲೀಸರು ಗಣಪತಿಯನ್ನು ರಸ್ತೆಗಿಳಿಸಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುತ್ತಿದ್ದು, ವೇಷಾಧಾರಿ ಗಣಪತಿ ಕಂಡು ಅದೆಷ್ಟೋ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು ಮಾತ್ರ ಸುಳ್ಳಲ್ಲ.

ಜೊತೆಗೆ ರಸ್ತೆ ಸುರಕ್ಷತೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು, ಹೋರ್ಡಿಂಗ್ಸ್, ಮೆಮೆ, ವಾಟ್ಸಾಪ್ ಟ್ರೋಲ್ ಪೇಜ್ಗಳ ಮೂಲಕವು ಜಾಗೃತಿ ಮೂಡಿಸುತ್ತಿದ್ದು, ರಸ್ತೆಗಿಳಿದಿರುವ ಯಮರಾಜ ಮತ್ತು ಗಣಪತಿ ಇಬ್ಬರು ಸಹ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರಿಗೆ ಸರಿಯಾಗಿ ಚಳಿ ಬಿಡಿಸುತ್ತಿದ್ದಾರೆ ಎನ್ನಬಹುದು.

'ನೀವು ಟ್ರಾಫಿಕ್ ನಿಯಮಗಳನ್ನು ಪಾಲಿಸದಿದ್ದರೆ ಯಮ ನಿಮ್ಮನ್ನು ಹಿಂಬಾಲಿಸುತ್ತಾನೆ' ಎಂಬ ಬ್ಯಾನರ್ ಹಿಡಿದುಕೊಂಡ ಯಮರಾಜ ಮತ್ತು 'ನಿಮ್ಮ ತಲೆಯನ್ನು ಕಾಪಾಡಿಕೊಳ್ಳದಿದ್ದರೆ ಸಾವಿಗೆ ತಲೆಕೊಡಬೇಕಾಗುತ್ತದೆ' ಎಂಬ ಬ್ಯಾನರ್ ಹಿಡಿರುವ ಗಣಪತಿ ಸದ್ಯ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವರಿಗೆ ಸರಿಯಾಗಿಯೇ ಟಾಂಗ್ ನೀಡುತ್ತಿದ್ದು, ಇನ್ನಾದರೂ ಸಂಚಾರಿ ನಿಯಮ ಉಲ್ಲಂಘಿಸುವವರ ಸಂಖ್ಯೆ ಕಡಿಮೆಯಾಗುವುದೇ ಕಾಯ್ದುನೋಡಬೇಕಿದೆ.

ಹೆಲ್ಮೆಟ್ ಇಲ್ಲದೇ ಚಾಲನೆ ದುರಂತಕ್ಕೆ ಆಹ್ವಾನ..!
ಅಂದಹಾಗೆ ಹೆಲ್ಮೆಟ್ ಬಳಕೆ ಬಗ್ಗೆ ಜಾಗೃತಿ ಅಭಿಯಾನ ಆರಂಭಿಸಿರುವ ಬೆಂಗಳೂರು ಪೊಲೀಸರು ಅಪಘಾತದ ವೇಳೆ ಹೆಲ್ಮೆಟ್ ಯಾವ ರೀತಿ ಸಹಾಯಕ್ಕೆ ಬರುತ್ತೆ ಎನ್ನುವುದರ ವಿಡಿಯೋ ಒಂದನ್ನ ಶೇರ್ ಕೂಡಾ ಮಾಡಿದ್ದಾರೆ.

ಇದರಲ್ಲಿ ಹೆಲ್ಮೆಟ್ ಧರಿಸಿದ ಬೈಕ್ ಸವಾರನು ಸಾವಿನ ಮನೆ ಕದತಟ್ಟಿ ಬರುವ ದೃಶ್ಯವು ಎಂತವರಿಗೂ ಒಂದು ಕ್ಷಣ ಮೈ ಜುಂ ಎನ್ನಿಸದೇ ಇರಲಾರದು. ನಿಜಕ್ಕೂ ಈ ಘಟನೆಯು ಹೆಲ್ಮೆಟ್ ಅನ್ನು ಆಟದ ವಸ್ತುವಿನಂತೆ ನಿರ್ಲಕ್ಷ್ಯ ಮಾಡುವ ರೈಡರ್ಗಳಿಗೆ ಒಂದು ಪಾಠ ಎಂದರೆ ತಪ್ಪಾಗಲಾರದು. ಇದಲ್ಲದೇ ಈ ಘಟನೆಯು ಗುಣಮಟ್ಟದ ಮತ್ತು ಐಎಸ್ಐ ಗುರುತು ಪಡೆದಿರುವ ಹೆಲ್ಮೆಟ್ನ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.
ಟ್ರಕ್ ಚಕ್ರಕ್ಕೆ ಸಿಲುಕಿದ ಯುವಕ ಪಾರಾಗಿ ಬಂದಿದ್ದು ಹೇಗೆ ಅನ್ನೋದಕ್ಕೆ ಈ ವಿಡಿಯೋವನ್ನು ತಪ್ಪದೇ ನೋಡಿ..


Click it and Unblock the Notifications








