Bengaluru Tumakuru Flyover: ಬೆಂಗಳೂರು ತುಮಕೂರು ಮೇಲ್ಸೇತುವೆ ಬಸ್ ಸಂಚಾರಕ್ಕೆ ಮುಕ್ತವೇ?
ಅರ್ಧ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಬಗ್ಗೆ ಬಿಗ್ ಅಪ್ಡೇಟ್ ಲಭ್ಯವಾಗಿದೆ. ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಸ್ ಸೇರಿದಂತೆ ಭಾರೀ ಗಾತ್ರದ ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗಲಿದೆ.
2021ರ ಡಿಸೆಂಬರ್ ಕೊನೆಯಲ್ಲಿ 8ನೇ ಮೈಲಿ ಸಮೀಪ ಈ ಫ್ಲೈ ಓವರ್ (ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)ನ ಪ್ಲಿಲರ್ 102 ಹಾಗೂ 103ರ ನಡುವೆ ದೋಷ ಕಂಡುಬಂದ ಹಿನ್ನೆಲೆ, ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಕೆಲ ತಿಂಗಳ ಬಳಿಕ, ದ್ವಿಚಕ್ರ ವಾಹನ, ಕಾರು ಸೇರಿದಂತೆ ಸಣ್ಣ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಯಿತು. ಆದರೆ, ಭಾರೀ ಗಾತ್ರದ ವಾಹನಗಳಿಗೆ ನಿರ್ಬಂಧವನ್ನು ಮುಂದಿವರಿಸಲಾಯಿತು.

ಇದರಿಂದ ಈಗಲೂ ವಾರಾಂತ್ಯದ ದಿನಗಳಲ್ಲಿ ಪೀಣ್ಯ, ದಾಸರಹಳ್ಳಿ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿರುತ್ತದೆ. ಮೇಲ್ಸೇತುವೆಯಲ್ಲಿ ಕೇಬಲ್ ಅಳವಡಿಕೆ ಕೆಲಸಗಳು ನಾಲ್ಕೈದು ತಿಂಗಳಿಂದ ಕುಂಟುತ್ತಾ ಸಾಗಿದೆ. ಸದ್ಯ, ಒಂದುಷ್ಟು ಮಟ್ಟಿಗೆ ವೇಗವನ್ನು ಪಡೆದುಕೊಂಡಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ತಜ್ಞರ ಸಲಹೆ ಮೇರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಕಾಮಗಾರಿಯನ್ನು ನಡೆಸುತ್ತಿದೆ.
ಆದರೆ, 4 ಕಿಲೋಮೀಟರ್ ಉದ್ದದ ಬೆಂಗಳೂರು ತುಮಕೂರು ಮೇಲ್ಸೇತುವೆಯಲ್ಲಿ ಹಳೆಯ ಕೇಬಲ್ಗಳನ್ನು ಹೊಸ ಅತ್ಯಾಧುನಿಕ ಕೇಬಲ್ಗಳಿಗೆ ಬದಲಾಯಿಸಲು ಐದಾರು ತಿಂಗಳು ಬೇಕಾಗಲಿದ್ದು, ಆ ಬಳಿಕವೇ ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತಾಯವಾಗಲಿದೆ. ಈ ಕಾಮಗಾರಿಯನ್ನು ಮುಗಿಸಲು ಸುಮಾರು ರೂ.30 ಕೋಟಿ ವೆಚ್ಚವಾಗಬಹುದು ಎಂದು ಹೇಳಲಾಗಿದೆ.

ಅಂದುಕೊಂಡಂತೆ ಈ ಮೇಲ್ಸೇತುವೆ ದುರಸ್ತಿ ಕಾರ್ಯಗಳು ನಡೆದು ಮುಂದಿನ ವರ್ಷ ಸಂಚಾರಕ್ಕೆ ಮುಕ್ತಾಯವಾದರೆ, ಬೆಂಗಳೂರಿಂದ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಮಂಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಸೇರಿದಂತೆ ಬಹುತೇಕ ಅರ್ಧ ಕರ್ನಾಟಕದ ಜಿಲ್ಲೆಗಳಿಗೆ ಬಸ್ ನಲ್ಲಿ ಪ್ರಯಾಣಿಸುವ ಜನರಿಗೆ ದೊಡ್ಡಮಟ್ಟದ ಅನುಕೂಲವಾಗಲಿದ್ದು, ಟ್ರಾಫಿಕ್ ಕಿರಿಕಿರಿ ತಪ್ಪಲಿದೆ.
ಭಾರತಮಾಲಾ ಯೋಜನೆಯಡಿ ರೂ.844 ಕೋಟಿ ವೆಚ್ಚದಲ್ಲಿ ನೆಲಮಂಗಲ - ತುಮಕೂರು ಮಧ್ಯೆ 44.04 ಕಿಲೋಮೀಟರ್ ಉದ್ದದ ದಶಪಥ ಹೆದ್ದಾರಿಯನ್ನು ನಿರ್ಮಾಣ ಕಾಮಗಾರಿಯು ನಿಧಾನವಾಗಿ ನಡೆಯುತ್ತಿದೆ. 2025ರ ಆಗಸ್ಟ್ ತಿಂಗಳ ಕೊನೆಯಲ್ಲಿ ಈ ಹೆದ್ದಾರಿ ಲೋಕಾರ್ಪಣೆಗೊಳ್ಳುವ ನೀರಿಕ್ಷೆಯಿದೆ. ಅದಕ್ಕಿಂತ ಮುಚ್ಚೆಯೇ ಪೂರ್ಣಗೊಂಡರೆ, ಸ್ಥಳೀಯವಾಗಿ ಕೈಗಾರಿಕೆಗಳ ಅಭಿವೃದ್ಧಿಯು ವೇಗವನ್ನು ಪಡೆಯಲಿದೆ.
ಇದರೊಟ್ಟಿಗೆ, ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ತಲುಪಲು ಹಿಡಿಯುವ ಸಮಯವು ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಬೆಂಗಳೂರು - ತುಮಕೂರು ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಮುಂದಿನ ವರ್ಷದ ಆರಂಭದಲ್ಲಿ ಬಸ್ ಸೇರಿದಂತೆ ಭಾರೀ ಗಾತ್ರದ ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗುವುದು ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಖುಷಿ ತಂದಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications