Bengaluru Tunnel Road: ವಿಶ್ವದ ಅತಿದೊಡ್ಡ ಬೆಂಗಳೂರು ಸುರಂಗ ರಸ್ತೆ ನಿರ್ಮಾಣಕ್ಕೆ ವೇಗ, ಇಲ್ಲಿದೆ ಅಪ್ಡೇಟ್
ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿ, ಸುಗಮ ಸಂಚಾರವನ್ನು ಒದಗಿಸಲು ಸುರಂಗ ರಸ್ತೆ (Tunnel Road) ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಇದು, ಲೋಕಾರ್ಪಣೆಗೊಂಡ ಮೇಲೆ ವಿಶ್ವದಲ್ಲಿಯೇ ಅತಿ ಉದ್ದದ ಟನೆಲ್ ರೋಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದೀಗ, ಬೆಂಗಳೂರು ಸುರಂಗ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ವೇಗ ನೀಡಿದಂತೆ ಕಾಣುತ್ತಿದ್ದು, ಮಹತ್ವಾಕಾಂಕ್ಷೆಯ 150 ಕಿಲೋಮೀಟರ್ ಉದ್ದದ ದ್ವಿಮುಖ ಸುರಂಗ ರಸ್ತೆ ಯೋಜನೆಗೆ ಗ್ಲೋಬಲ್ ಟೆಂಡರ್ ಆಹ್ವಾನಿಸಲಾಗಿದೆ. ಬರೊಬ್ಬರಿ 50,000 ಕೋಟಿ ವೆಚ್ಚದ ಯೋಜನೆಗೆ ನಿರ್ಮಾಣ ಸಂಸ್ಥೆಗಳು, ಆಸಕ್ತಿ ವ್ಯಕ್ತಪಡಿಸುವ ಗಡುವನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದೆ. ನಿಮಗೆ ಗೊತ್ತಿರಲಿ.. ಈ ಯೋಜನೆಗೆ ತಗುಲುವ ವೆಚ್ಚ, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಮೊತ್ತಕ್ಕೆ ಸರಿ ಸಮನಾಗಿದೆ.

ಈ ಸಂಬಂಧ, ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಹಲವು ವಾರಗಳಿಂದ ದೇಶ - ವಿದೇಶದ ಎಂಜಿನಿಯರಿಂಗ್ ಸಲಹಾ ಸಂಸ್ಥೆಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಅಲ್ಲಿ, ಸುರಂಗ ರಸ್ತೆಯ ವಿನ್ಯಾಸ ಹಾಗೂ ಕಾರ್ಯವಿಧಾನದ ಬಗ್ಗೆ ಚರ್ಚಿಸಿದ್ದಾರೆ. ಇದರೊಂದಿಗೆ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪ್ರದೇಶದಲ್ಲಿ ಭಾರೀ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅದನ್ನು ಪರಿಹರಿಸಲು ಕೂಡ ಚರ್ಚೆ ನಡೆಸಿದ್ದಾರೆ.
ಮಂಗಳವಾರ, ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಸುರಂಗ ರಸ್ತೆ, ಮೇಲ್ಸೇತುವೆಗಳು ಸೇರಿದಂತೆ ವಿವಿಧ ಪರಿಹಾರ ಯೋಜನೆಗಳ ಕುರಿತಂತೆ ಹಲವು ವಾರಗಳಿಂದ ಚರ್ಚಿಸಲಾಗಿದೆ. ಇದಕ್ಕಾಗಿ ಬಿಡಿಎ, ಬಿಬಿಎಂಪಿ ಮೂಲಕ ವಿವಿಧ ನಿರ್ಮಾಣ ಸಂಸ್ಥೆಗಳಿಗೆ ಆಸಕ್ತಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಆ ಅವಧಿಯು ಆಗಸ್ಟ್ 7ಕ್ಕೆ ಮುಕ್ತಾಯಗೊಂಡಿದೆ ಎಂದು ಹೇಳಿದ್ದಾರೆ.

ಆದರೆ, ಮತ್ತಷ್ಟು ಸಂಸ್ಥೆಗಳು ಭಾಗವಹಿಸಲು ಆಸಕ್ತಿ ತೋರಿಸುತ್ತಿರುವ ಕಾರಣ, ಈ ಅವಧಿಯನ್ನು ಇನ್ನೊಂದು ವಾರದವರೆಗೆ (ಆಗಸ್ಟ್ 17) ವಿಸ್ತರಿಸಲಾಗಿದೆ. ಜೊತೆಗೆ ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ಮೆಟ್ರೊ ಸುರಂಗವು ಒಂದು ದಿಕ್ಕಿನಲ್ಲಿ ಮಾತ್ರ ಚಲಿಸಲು ಅನುವು ಮಾಡಿಕೊಡುತ್ತದೆ. ಅದು, ಉದ್ದೇಶಿತ ಸುರಂಗ ಮಾರ್ಗದಲ್ಲಿ ದ್ವಿಮುಖ ರಸ್ತೆ ಆಗಬೇಕೆಂದು ಸೂಚಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ವಿದೇಶಿ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು ಈ ಯೋಜನೆಯ ವಿನ್ಯಾಸ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆ ಚರ್ಚಿಸಲು ಮುಂದೆ ಬರುತ್ತಿವೆ. ಅಲ್ಲದೆ, ನೆಲಮಂಗಲ, ಬಳ್ಳಾರಿ, ಕೋಲಾರ, ಹೊಸೂರು ಮತ್ತು ಮೈಸೂರಿನಿಂದ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಿಂದಲ್ಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಈ ಸಂಬಂಧ ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿರುವುದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದೇನೆ. ಸದ್ಯ, ಆ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ಹೇಳಿದ್ದಾರೆ. ಇನ್ನು, ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೇಗಿದೆ ಅಂದರೆ, 2022ರ ಪ್ರಕಟಗೊಂಡ ಟ್ರಾಫಿಕ್ ಇಂಡೆಕ್ಸ್ ಪ್ರಕಾರ, ಬೆಂಗಳೂರು ವಿಶ್ವದಲ್ಲಿ ಹೆಚ್ಚು ಸಂಚಾರ ದಟ್ಟನೆ ಹೊಂದಿರುವ ವಿಶ್ವದ ದೊಡ್ಡ ನಗರಗಳ ಪೈಕಿ ಎರಡನೇ ಸ್ಥಾನದಲ್ಲಿದೆ.
ನಗರದಲ್ಲಿ ವಾಹನ ಸವಾರನೊಬ್ಬ 10 ಕಿಮೀ ಓಡಿಸಲು ಸುಮಾರು 29 ನಿಮಿಷಗಳು, 10 ಸೆಕೆಂಡು ಬೇಕಾಗುತ್ತದೆ. ಲಂಡನ್ ನಗರ ಮೊದಲ ಸ್ಥಾನದಲ್ಲಿದೆ. ಇಲ್ಲಿ, 10 ಕಿಲೋಮೀಟರ್ ವಾಹನವನ್ನು ಚಲಾಯಿಸಲು 36 ನಿಮಿಷ 20 ಸೆಕೆಂಡು ಸಮಯಾವಕಾಶ ಬೇಕು. ಪೀಣ್ಯದಿಂದ ಹೊಸೂರು ರಸ್ತೆವರೆಗೆ ಸುರಂಗ ರಸ್ತೆ ಕೆಲವೇ ವರ್ಷಗಳಲ್ಲಿ ನಿರ್ಮಾಣವಾಲಿದ್ದು, ಬೆಂಗಳೂರಿನ ನಿವಾಸಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications