ಪೊಲೀಸ್ ಚೌಕಿಗೆ ಗುದ್ದಿದ ಲ್ಯಾಂಬೊರ್ಗಿನಿ ಕಾರು- ಶಾಸಕರ ಪುತ್ರನಿಂದಲೂ ಸರಣಿ ಅಪಘಾತ..
ಬೆಂಗಳೂರಿನ ಎರಡು ಜನನಿಬಿಢ ರಸ್ತೆಗಳಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿಂದ ಅಪಘಾತಗಳು ಸಂಭವಿಸಿವೆ. ಒಂದೇ ದಿನ ನಡೆದ ಈ ಘಟನೆಯಿಂದಾಗಿ ರಾಜಧಾನಿಯ ಜನರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಗಳು ಕಳೆದ ಭಾನುವಾರ ಫೆಬ್ರವರಿ 8ರಂದು ನಡೆದಿದೆ.

ಹೆಬ್ಬಾಳದಲ್ಲಿ ನಡೆದ ಅಪಘಾತದಲ್ಲಿ ರಸ್ತೆಯಲ್ಲಿದ್ದ ದ್ವಿಚಕ್ರ ವಾಹನ ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಟಿಎಸ್ 09 ಯುಸಿ 9 ಎಂಬ ನಂಬರ್ ಪ್ಲೇಟ್ ಹೊಂದಿದ್ದ ಈ ಕಾರು ಹೆಬ್ಬಾಳದ ಬಳಿ ಅತಿ ವೇಗವಾಗಿ ಚಲಿಸಿ ಅಪಘಾತಕ್ಕೀಡಾಗಿದೆ. ಈ ಘಟನೆಯು ಮಧ್ಯಾಹ್ನ 2.30ರ ವೇಳೆಗೆ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಯುವಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಯುವಕರನ್ನು ಇಂಜಿನಿಯರ್ ಪ್ರಫುಲ್ ಕುಮಾರ್ ಹಾಗೂ ಆಟೋ ಡ್ರೈವರ್ ಅಬ್ದುಲ್ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ ಕಾರಣಕ್ಕೆ, ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಕಾರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಗಾಯಗೊಂಡಿದ್ದ ಪ್ರಫುಲ್ ಹಾಗೂ ಅಬ್ದುಲ್ರವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸರ ತನಿಖೆಯ ನಂತರ ಬೆಂಟ್ಲಿ ಕಾರು ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರಮೊಹಮ್ಮದ್ ನಲಪಾಡ್ಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ನೋಟಿಸ್ ಕೂಡಾ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಈ ಅಪಘಾತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಮತ್ತೊಂದು ಐಷಾರಾಮಿ ಕಾರು ಸಹ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಕೋಟಿಗಟ್ಟಲೇ ಬೆಲೆಬಾಳುವ ಹೊಸ ಲ್ಯಾಂಬೊರ್ಗಿನಿ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದ ಚಿತ್ರಗಳನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ.

ಈ ಅಪಘಾತದಲ್ಲಿ ಲ್ಯಾಂಬೊರ್ಗಿನಿ ಕಾರು ಟ್ರಾಫಿಕ್ ಪೊಲೀಸ್ ಚೌಕಿಗೆ ಗುದ್ದಿತ್ತು. ಈ ಕಾರು ಶಾಸಕ ಹ್ಯಾರಿಸ್ರವರ ಪುತ್ರ ಮೊಹಮ್ಮದ್ ನಲಪಾಡ್ಗೆ ಸೇರಿದ್ದೆಂದು ತಿಳಿದು ಬಂದಿದ್ದು, ನೋಟಿಸ್ ಕೂಡ ನೀಡಲಾಗಿದೆ. ಈ ಘಟನೆಯು ಸಂಜೆ 5.15ರ ವೇಳೆಗೆ ಸಂಭವಿಸಿದೆ. ಈ ಘಟನೆ ನಡೆದಾಗ ಪೊಲೀಸ್ ಚೌಕಿಯಲ್ಲಿ ಯಾರೂ ಇರಲಿಲ್ಲವೆಂದು ತಿಳಿದು ಬಂದಿದೆ.

ಇದರಿಂದ ಹೆಚ್ಚಿನ ಪ್ರಮಾಣದ ದುರಂತವಾಗುವುದು ತಪ್ಪಿದೆ. ಈ ಘಟನೆ ನಡೆದಿರುವುದು ಕಬ್ಬನ್ ಪಾರ್ಕ್ ಬಳಿಯಲ್ಲಿ. ಪೊಲೀಸರು ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೊದಲು ಸಹ ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳಿಂದ ಅಪಘಾತಗಳು ಸಂಭವಿಸಿದ್ದವು.
ಕಳೆದ ವರ್ಷದ ಮಾರ್ಚ್ನಲ್ಲಿ 31 ವರ್ಷದ ಯುವಕನೊಬ್ಬ ಐಷಾರಾಮಿ ಕಾರಿನ ಟೆಸ್ಟ್ ಡ್ರೈವ್ ಮಾಡುವ ವೇಳೆಯಲ್ಲಿ ಮೃತಪಟ್ಟಿದ್ದ. ಈ ಕಾರಿನಲ್ಲಿದ್ದ ಸಹ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರಿಂದ ಹಾಗೂ ಏರ್ಬ್ಯಾಗ್ಗಳು ಕಾರ್ಯನಿರ್ವಹಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ತಿಳಿದು ಬಂದಿದೆ.

ಈ ಎಲ್ಲಾ ಅಪಘಾತಗಳು ಸಂಭವಿಸಿರುವುದು ಈ ಕಾರುಗಳನ್ನು ಅತಿ ವೇಗದಲ್ಲಿ ಚಲಾಯಿಸಿದ ಕಾರಣಕ್ಕೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರುಗಳಲ್ಲಿ ಅತಿ ವೇಗದ ಸ್ಪೀಡ್ ಲಿಮಿಟ್ ಅನ್ನು ನೀಡಲಾಗಿರುತ್ತದೆ. ಈ ಸ್ಪೀಡ್ ಅನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ಈ ಅಪಘಾತಗಳು ಸಂಭವಿಸುತ್ತವೆ.


Click it and Unblock the Notifications