ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಿಂದಿನ ಸರ್ಕಾರಗಳು ವಿಫಲವಾದ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈಗ ಬಿಹಾರದ ಸಚಿವರು ಹಾಗೂ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ನಾರಾಯಣ್ ಪ್ರಸಾದ್ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಸಾರ್ವಜನಿಕರು ಸಾರ್ವಜನಿಕ ಸಾರಿಗೆಯನ್ನು ಬಳಸುವುದಾದರೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾರಾಯಣ್ ಪ್ರಸಾದ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ್ ಪ್ರಸಾದ್, ಸಾಮಾನ್ಯ ಜನರು ಹೆಚ್ಚಾಗಿ ಸಾರಿಗೆ ಬಸ್ಸುಗಳನ್ನು ಬಳಸುತ್ತಾರೆ. ಕೆಲವರು ಮಾತ್ರ ಸ್ವಂತ ವಾಹನಗಳನ್ನು ಬಳಸುತ್ತಾರೆ ಎಂದು ಹೇಳಿದರು.
MOSTREAD: ಟ್ರ್ಯಾಕ್ಟರ್ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್ಗಳಿರಲು ಕಾರಣಗಳಿವು

ಇದರಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವು ಸಾಮಾನ್ಯ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಹೇಳಿದರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಜನರು ನಿಧಾನವಾಗಿ ಒಗ್ಗಿಕೊಳ್ಳುತ್ತಾರೆ ಎಂದು ನಾರಾಯಣ್ ಪ್ರಸಾದ್ ಹೇಳಿದ್ದಾರೆ.

ಈ ಬಗ್ಗೆ ಎನ್ಡಿಟಿವಿ ನ್ಯೂಸ್ ವರದಿ ಮಾಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನರು ಈಗಾಗಲೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ಬಿಜೆಪಿ ಪ್ರಮುಖ ನಾಯಕರು ನೀಡಿರುವ ಈ ಹೇಳಿಕೆ ಸುಡುವ ಬೆಂಕಿಯ ಮೇಲೆ ತೈಲವನ್ನು ಸುರಿದಂತಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಹುತೇಕ ಜನರು ಓಡಾಟಕ್ಕಾಗಿ ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಜನರು ಸ್ವಂತ ವಾಹನಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಬಿಹಾರದ ಸಚಿವರ ಈ ಹೇಳಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಸಚಿವರ ಪ್ರಕಾರ, ಸಾಮಾನ್ಯ ಜನರು ವಾಹನಗಳನ್ನು ಹೊಂದಿಲ್ಲದೇ ಕೇವಲ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ ಎಂದು ಭಾವಿಸುವುದಾದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನರ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪ್ರಮುಖ ಕಾರಣ ಇಂಧನಗಳ ಬೆಲೆ ಏರಿಕೆ. ಇಂಧನ ಬೆಲೆ ಏರಿಕೆಯಿಂದಾಗಿ ಅಕ್ಕಿ, ದಿನಸಿ ಹಾಗೂ ತರಕಾರಿಗಳನ್ನು ಸಾಗಿಸುವ ಸರಕು ಲಾರಿಗಳ ಬಾಡಿಗೆ ದರವೂ ಏರಿಕೆಯಾಗುತ್ತದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುತ್ತವೆ.

ಈ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಸ್ವಂತ ವಾಹನವನ್ನು ಹೊಂದದೆ ಸಾರ್ವಜನಿಕ ಸಾರಿಗೆಯನ್ನು ಮಾತ್ರ ಅವಲಂಬಿಸಿರುವ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಚಿವರಿಗೆ ತಿಳಿದಿಲ್ಲವೇ ಎಂದು ಜನರು ಸಚಿವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ರೀತಿ ಮಾತನಾಡುವುದನ್ನು ನಿಲ್ಲಿಸುವಂತೆ ಸಾರ್ವಜನಿಕರು ನಾರಾಯಣ್ ಪ್ರಸಾದ್'ರವರಿಗೆ ಸಲಹೆ ನೀಡಿದ್ದಾರೆ. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ಸೇರಿದಂತೆ ಭಾರೀ ಪ್ರಮಾಣದ ತೆರಿಗೆಯನ್ನು ವಿಧಿಸುತ್ತಿವೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಲು ಇದು ಪ್ರಮುಖ ಕಾರಣವಾಗಿದೆ. ಈ ಕಾರಣಕ್ಕೆ ವಾಹನ ಸವಾರರು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಅಥವಾ ಅವುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೆಟ್ರೋಲ್, ಡೀಸೆಲ್'ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದರೆ ಅವುಗಳ ಬೆಲೆಗಳು ಗಮನಾರ್ಹವಾಗಿ ಇಳಿಯುತ್ತವೆ. ಆದರೆ ಪೆಟ್ರೋಲ್, ಡೀಸೆಲ್ನಿಂದ ಬರುವ ಆದಾಯವನ್ನು ಕಳೆದುಕೊಳ್ಳಲು ಸರ್ಕಾರಗಳು ಬಯಸುವುದಿಲ್ಲವಾದ್ದರಿಂದ ಜನರ ಒತ್ತಾಯಕ್ಕೆ ಮಣಿಯುವ ಸಾಧ್ಯತೆಗಳು ಕಡಿಮೆ.


Click it and Unblock the Notifications