ಕಾರಿಗೆ ಒರಗಿದ್ದಕ್ಕೆ ಒದೆ ತಿಂದ ಬಾಲಕನಿಗೆ ಕಿಯಾ ಕಾರಲ್ಲಿ ರೈಡ್ ಆಫರ್ ಮಾಡಿದ ಬ್ಯುಸಿನೆಸ್ಮ್ಯಾನ್
ರಾಜಸ್ಥಾನ ಮೂಲದ ಆರು ವರ್ಷದ ಗಣೇಶ್ ಎಂಬ ಬಾಲಕನನ್ನು ತನ್ನ ಕಾರಿಗೆ ಒರಗಿ ನಿಂತಿದ್ದ ಎಂಬ ಕಾರಣಕ್ಕೆ ಕಾರಿನ ಮಾಲೀಕ ಶಿಹಶಾದ್ ಎಂಬಾತ ಆ ಬಾಲಕನಿಗೆ ಒದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ, ಅದೇ ಬಾಲಕನಿಗೆ ಕೇರಳದ ಬ್ಯುಸಿನೆಸ್ಮ್ಯಾನ್ ಒಬ್ಬ ತನ್ನ ಕಿಯಾ ಕಾರ್ನಿವಲ್ ಕಾರ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಿದ್ದಾರೆ. ಹೌದು, ಕೆಲದಿನಗಳ ಹಿಂದೆ ತನ್ನ ಟಾಟಾ ಟಿಯಾಗೋ ಕಾರಿಗೆ ಒರಗಿದ್ದ ಎಂಬ ಕಾರಣಕ್ಕೆ ಬಾಲಕನ ಎದೆಗೆ ಒದ್ದ ಶಿಹಶಾದ್ ಎಂಬ ಮಾಲೀಕ ದರ್ಪ ತೋರಿದ್ದ. ಈತನ ಈ ನಡೆಗೆ ದೇಶದ ಮೂಲೆ ಮೂಲೆಯಿಂದ ಆಕ್ರೋಶ ವ್ಯಕ್ತವಾಗಿದ್ದವು. ಘಟನೆಯ ನಂತರ ಶಿಹಶಾದ್ನನ್ನು ಬಂಧಿಸಲಾಗಿತ್ತು.

ಆದರೆ ಆತ ಯಾಕೆ ತನ್ನನ್ನು ಒದ್ದ ಎಂದು ತಿಳಿಯದೇ ನಿಂತಿದ್ದ ಬಾಲಕನ ಮುಗ್ಧತೆ ಜನರನ್ನು ಇನ್ನೂ ಕಾಡುತ್ತಿದೆ. ಇದೀಗ ಕೇರಳದಲ್ಲಿ ಅಚ್ಚಾಯನ್ಸ್ ಜ್ಯುವೆಲ್ಲರಿಯ ಮಾಲೀಕರಾದಂತಹ ಟೋನಿ ವರ್ಕಿಚ್ಚನ್ ಎಂಬ ಬ್ಯುಸಿನೆಸ್ಮ್ಯಾನ್ ಒಬ್ಬರು ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ.

ಘಟನೆಯ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನನ್ನು ಭೇಟಿಯಾಗಲು ಬಂದಿದ್ದ ಟೋನಿ ವರ್ಕಿಚ್ಚನ್, ಬಾಲಕನನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ ನಂತರ ಬಾಲಕನ ಹೆತ್ತವರೊಂದಿಗೆ ಮಾತನಾಡಿದ ಈತ, 20000 ರೂ ನಗದು ನೀಡಿ ಸಹಾಯ ಮಾಡಿದ್ದಾರೆ.

ವರದಿಯ ಪ್ರಕಾರ ಬಾಲಕನಿಗೆ ಇನ್ನೂ ಸಹ ಆತ ತನಗೆ ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾನೆ ಎಂದೇ ತಿಳಿದಿಲ್ಲ. ಘಟನೆಯ ನಂತರ ಬಾಲಕ ಇನ್ನೂ ಸಹ ಆ ಆಘಾತದಿಂದ ಹೊರ ಬಂದಿಲ್ಲ. ಆತನ ಹೆತ್ತವರ ಸ್ಥಿತಿಯೂ ಸಹ ಇದೇ ಆಗಿದೆ.

ಇನ್ನು ಬಾಲಕ ಹಾಗೂ ಆತನ ಹೆತ್ತವರನ್ನು ಈ ಆಘಾತದಿಂದ ಹೊರತರಲು ಬ್ಯುಸಿನೆಸ್ಮ್ಯಾನ್ ಟೋನಿ ವರ್ಕಿಚ್ಚನ್ ಅವರು ಕೌನ್ಸಿಲಿಂಗ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಇಷ್ಟು ಮಾತ್ರವಲ್ಲದೇ, ಬಾಲಕ ಆಸ್ಪತ್ರೆಯಿಂದ ಹೊರಬಂದ ಮೇಲೆ, ಆತನನ್ನು ತನ್ನ ಕಿಯಾ ಕಾರ್ನಿವಲ್ ಕಾರ್ನಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಾಗಿಯೂ ಹೇಳಿದ್ದಾರೆ.

ಈತನ ನಡೆಗೆ ಎಲ್ಲೆಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಶಿಹಶಾದ್ ಈತನಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಘಟನೆಯ ಕುರಿತಾಗಿ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲಕನ ಹೆತ್ತವರಿಂದ ಮಾಹಿತಿ ಕಲೆ ಹಾಕುತ್ತಿದ್ದು, ತಲಶೇರಿ ಪೊಲೀಸ್ ಇಲಾಖೆಯು ಶಿಹಶಾದ್ನ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸಲು ಆದೇಶಿಸಿದ್ದು ಆರ್ಟಿಒ ಆರೋಪಿಗೆ ಡ್ರೈವಿಂಗ್ ಲೈಸೆನ್ಸ್ ರದ್ದಾಗದಿರಲು ಸೂಕ್ತ ವಿವರಣೆ ನೀಡಲು ಸೂಚನೆ ಹೊರಡಿಸಿದೆ.

ಇನ್ನು ಆರೋಪಿ ಮಹಮ್ಮದ್ ಶಿಹಶಾದ್ ನ ಮೇಲೆ ಹಲವಾರು ಕೇಸ್ಗಳನ್ನು ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 308, 323 ಕೋಡ್ಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಘಟನೆಗೆ ಸಂಭಂಧಿಸಿದ ಟಾಟಾ ಟಿಯಾಗೋ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಘಟನೆ ಕಳೆದ ವಾರ ಕೇರಳದ ತಲಶೇರಿಯಲ್ಲಿ ರಾತ್ರಿ ೮ ಗಂಟೆಗೆ ಸಂಭವಿಸಿದೆ. ಶಿಹಶಾದ್ ತನ್ನ ಟಾಟಾ ಟಿಯಾಗೋ ನೋ ಪಾರ್ಕಿಂಗ್ ಝೋನ್ ನಲ್ಲಿ ನಿಲ್ಲಿಸಿದ್ದ. ಇನ್ನು ಅದೇ ಸಮಯಕ್ಕೆ ಅಲ್ಲಿ ಬಲೂನ್ಗಳನ್ನು ಮಾರುತ್ತಿದ್ದ ಬಾಲಕ ಗಣೇಶ್ ಅರಿವಿಲ್ಲದೆ ಶಿಹಶಾದ್ನ ಕಾರಿಗೆ ಒರಗಿದ.

ಇದನ್ನು ಕಂಡ ಶಿಹಶಾದ್ನೇರವಾಗಿ ಆ ಬಾಲಕನ ಬಳಿ ಬಂದು ಏನನ್ನೂ ಹೇಳದೆ ಇದ್ದಕ್ಕಿಂದ್ದಂತೆ ಬಾಲಕನ ಎದೆಯ ಮೇಲೆ ಒದ್ದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಜನರು ಕಾರಿನ ಬಳಿ ಧಾವಿಸಿ ಆತನ ನಡೆಯನ್ನು ಪ್ರಶ್ನಿಸತೊಡಗಿದ್ದಾರೆ. ಅದಾದ ನಂತರ ಕೆಲವೇ ಹೊತ್ತಲ್ಲಿ ಶೀಹಶಾದ್ ಜಾಗ ಖಾಲಿ ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳೂ ಸಹ ಅಲ್ಲೇ ಇದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಘಟನೆ ನಡೆದ ಬಳಿಕ ವೈರಲ್ ಆಗಿದೆ.

ವಿಡಿಯೋ ವೈರಲ್ ಆದ ಕೂಡಲೇ ಪೊಲೀಸರು ಆರೋಪಿಯ ವಿರುದ್ದ ಕ್ರಮ ಕೈಗೊಂಡಿದ್ದು, ಕೂಡಲೇ ಆತನನ್ನು ಬಂಧಿಸಿ 15 ದಿವಸಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈಗಾಗಲೇ ಬಹುತೇಕ ಎಲ್ಲಾ ಕಡೆಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಪೊಲೀಸರ ತನಿಖೆಯಲ್ಲಿ ಇವು ಬಹಳಷ್ಟು ಉಪಯುಕ್ತವಾಗುತ್ತಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಆರೋಪಿ ಶಿಹಶಾದ್ ಮಾಡಿರುವುದು ಅಕ್ಷಮ್ಯ ಅಪರಾಧ. ಒಬ್ಬ ಪುಟ್ಟ ಬಾಲಕನೆಂದೂ ನೋಡದೆ ಕ್ರೂರವಾದ ರೀತಿಯಲ್ಲಿ ಹಲ್ಲೆ ಮಾಡಿರುವುದಕ್ಕೆ ಆತನಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಅಚ್ಚಾಯನ್ಸ್ ಜ್ಯುವೆಲ್ಲರಿಯ ಮಾಲೀಕರಾದಂತಹ ಟೋನಿ ವರ್ಕಿಚ್ಚನ್ರ ನಡೆ ನಿಜಕ್ಕೂ ಪ್ರಶಂಸನೀಯವಾಗಿದೆ. ಭೇಧ-ಭಾವ ಮಾಡದೇ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ನಡೆದಾಗ ಮಾತ್ರ ಒಬ್ಬ ವ್ಯಕ್ತಿ ಮನುಷ್ಯನಾಗಲು ಸಾಧ್ಯ.


Click it and Unblock the Notifications