ಕೋರಮಂಡಲ್ ರೈಲಿಗಿದೆ ತೀರಾ ಕೆಟ್ಟ ಹಿಸ್ಟರಿ: ಇಲ್ಲಿದೆ ಶಾಕಿಂಗ್ ಮಾಹಿತಿ
ಭಾರತದ ಇತಿಹಾಸದಲ್ಲಿ ಅತಿದೊಡ್ಡ ರೈಲ್ವೆ ದುರಂತ ಶುಕ್ರವಾರ ಸಂಜೆ ನಡೆದಿದೆ. ಒಡಿಶಾದ ಬಾಲಸೋರ್ನಲ್ಲಿ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಡಿಕ್ಕಿ ಸಂಭವಿಸಿದೆ. 288 ಜನರು ಸಾವನ್ನಪ್ಪಿದ್ದು, 800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಅದರಲ್ಲೂ ಕೋರಮಂಡಲ್ ಎಕ್ಸ್ಪ್ರೆಸ್ ಕರಾಳ ಇತಿಹಾಸವನ್ನು ಹೊಂದಿದ್ದು, 1977ರಲ್ಲಿ ಸಂಚಾರ ಆರಂಭಿಸಿದ್ದ ಈ ರೈಲು, ಈವರೆಗೆ ಸರಿ ಸುಮಾರು 4 ದಶಕದಲ್ಲಿ 8 ಬಾರಿ ಅಪಘಾತಕ್ಕೆ ತುತ್ತಾಗಿದೆ. 1997 ಆಗಸ್ಟ್ 15ರಂದು ಆಂಧ್ರಪ್ರದೇಶದ ವಿಶಾಖಪಟ್ಟಣ ಸಮೀಪ ಕೋರಮಂಡಲ್ ಎಕ್ಸ್ಪ್ರೆಸ್ ಅಪಘಾತಕ್ಕೆ ಒಳಗಾಗಿತ್ತು. ಆಗ 75 ಮಂದಿ ಪ್ರಾಣ ಕಳೆದುಕೊಂಡಿದ್ದರು.

1999ರಲ್ಲಿ ಅದೇ ದಿನ ಒಡಿಶಾ ಹಾಗೂ ಆಂಧ್ರ ಪ್ರದೇಶ ಗಡಿಯ ನಾಗವಲ್ಲಿ ನದಿ ದಾಟುವಾಗ ದುರಂತ ಸಂಭವಿಸಿ, 50 ಮಂದಿ ಮೃತಪಟ್ಟು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 2002ರ ಮಾರ್ಚ್ 15ರಂದು ಆಂಧ್ರದ ಕೋವುರಿನ ಮೇಲ್ಸೇತುವೆ ಹತ್ತಿರ 7 ಬೋಗಿಗಳು ಹಳಿ ತಪ್ಪಿ, ಹಲವು ಪ್ರಯಾಣಿಕರು ಗಾಯಾಳುಗಳಾಗಿದ್ದರು. 2009ರಲ್ಲಿ ಒಡಿಶಾ ಜಾಜಪುರ ಸಮೀಪ ಅಗ್ನಿ ಅವಘಡಕ್ಕೆ ತುತ್ತಾಗಿತ್ತು.
2009ರಲ್ಲೂ ಇದೇ ಜಾಜಪುರ ಹತ್ತಿರ ರೈಲು ಹಳಿ ತಪ್ಪಿ, 15 ಮಂದಿ ಅಸುನೀಗಿ, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. 2012ರಲ್ಲೂ ಒಡಿಶಾದ ಲಿಂಗರಾಜ ರೈಲು ನಿಲ್ದಾಣ ಸಮೀಪ ಹಾಗೂ 2015ರಲ್ಲಿ ಆಂಧ್ರ ಪ್ರದೇಶದ ನಿಡದವೊಲು ರೈಲ್ವೆ ಸ್ಟೇಷನ್ ಹತ್ತಿರ ಅಗ್ನಿಅವಘಡ ಸಂಭವಿಸಿತ್ತು. 2012ರಲ್ಲಿ ಒಡಿಶಾದಲ್ಲಿ ಕೋರಮಂಡಲ್ ರೈಲಿಗೆ ಅಡ್ಡಬಂದು ಆರು ಆನೆಗಳು ವೃತಪಟ್ಟಿದವು.
ಪ್ರತಿದಿನ ಮಧ್ಯಾಹ್ನ 3.20ಕ್ಕೆ ಹೌರಾದ ಶಾಲಿಮಾರ್ ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸುವ ಈ ಕೋರಮಂಡಲ್ ಎಕ್ಸ್ಪ್ರೆಸ್ ರೈಲು, ಪಶ್ಚಿಮ ಬಂಗಾಳ, ಒಡಿಶಾ, ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಸಂಚರಿಸುತ್ತದೆ. ಒಟ್ಟು 16 ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಯಾಗಿ, ಮರುದಿನ ಸಂಜೆ 4.50ರ ಸುಮಾರಿಗೆ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಈ ರೈಲು 33 ಗಂಟೆಯಲ್ಲಿ 1659 ಕಿಲೋಮೀಟರ್ ಕ್ರಮಿಸುತ್ತದೆ.
ರೈಲ್ವೆ ದುರಂತ ನಡೆದ ಒಡಿಶಾದ ಬಾಲಸೋರ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಭೇಟಿ ನೀಡಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ರೂ.10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ರೂ.2 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ರೂ.50,000 ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಇನ್ನು, ದುರಂತ ನಡೆದ ಸ್ಥಳದಲ್ಲಿಯೇ ಮೊಕ್ಕ ಹೂಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಪರಿಸ್ಥಿತಿಯನ್ನು ಸಹಬದಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಹಳಿಯನ್ನು ಸರಿಪಡಿಸುವ ಕಾರ್ಯ ಭರದಿಂದ ನಡೆದಿದೆ. ಸದ್ಯ, ಒಂದು ಮಾರ್ಗದಲ್ಲಿ ರಿಪೇರಿ ಕೆಲಸ ಮುಗಿದಿದೆ. ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದ ಟ್ರ್ಯಾಕ್ ಹಾಗೂ ವಿದ್ಯುತ್ ಮಾರ್ಗ ರಿಪೇರಿಯಾದ ಬಳಿಕ ಎಲ್ಲ ರೈಲುಗಳು ಎಂದಿನಂತೆ ಸಂಚರಿಸಲಿವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications