ಆಟೋ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸಿದ ಸರ್ಕಾರ
ಕೋವಿಡ್-19 ವೈರಸ್ ನಿಂದಾಗಿ ಜಗತ್ತಿನ ಆರ್ಥಿಕ ವ್ಯವಸ್ಥೆ ಕುಸಿತಗೊಂಡಿದೆ. ವಿಶ್ವದ ವಿವಿಧ ದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಜನರು ತಮ್ಮ ಮನೆಗಳಿಂದ ಹೊರ ಬಾರದೇ ಮನೆಯೊಳಗೆ ಉಳಿದಿದ್ದಾರೆ. ಬಹುತೇಕ ಜನರು ಯಾವುದೇ ಆದಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರತವೂ ಇದರಿಂದ ಹೊರತಾಗಿಲ್ಲ. ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಇವುಗಳ ಜೊತೆಗೆ ಆಟೋ, ಟ್ಯಾಕ್ಸಿ ಹಾಗೂ ಎಲೆಕ್ಟ್ರಿಕ್ ರಿಕ್ಷಾಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ.

ಜನರು ವಿನಾ ಕಾರಣ ತಮ್ಮ ಮನೆಗಳಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಈ ಕಾರಣಕ್ಕೆ ಜನರು ಮನೆಗಳಿಂದ ಹೊರಬರುತ್ತಿಲ್ಲ. ಜನ ಹೊರಬಾರದ ಕಾರಣಕ್ಕೆ ಆಟೋ, ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ರಿಕ್ಷಾಗಳನ್ನೇ ನಂಬಿಕೊಂಡು ಜೀವನ ನಡೆಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ವಾಹನಗಳಿಂದ ದೈನಂದಿನ ಆದಾಯ ಗಳಿಸುತ್ತಿದ್ದವರ ಪರಿಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಅವರಿಗೆ ಸಹಾಯ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಲಾಕ್ ಡೌನ್ ಕಾರಣಕ್ಕೆ ಬಡವರ, ನಿರ್ಗತಿಕರ ನೆರವಿಗೆ ಧಾವಿಸಿವೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ದೆಹಲಿ ಸರ್ಕಾರವು ಈಗಾಗಲೇ 35 ಸಾವಿರಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆರ್ಥಿಕ ನೆರವನ್ನು ಘೋಷಿಸಿದೆ. ಪ್ರತಿಯೊಬ್ಬರಿಗೂ ರೂ.5,000 ನೀಡಲಾಗುತ್ತಿದೆ.

ಇದರ ಜೊತೆಗೆ ದೆಹಲಿ ಸರ್ಕಾರವು ಆಟೋ, ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ರಿಕ್ಷಾ ಚಾಲಕರಿಗೆ ತಲಾ 5 ಸಾವಿರ ರೂಪಾಯಿಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ, ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ರಿಕ್ಷಾ ಚಾಲಕರ ನೆರವಿಗೆ ದೆಹಲಿ ಸರ್ಕಾರವು ಧಾವಿಸಿದೆ.

ಈ ಬಗ್ಗೆ ಮಾತನಾಡಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಆಟೋ, ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ರಿಕ್ಷಾ ಚಾಲಕರಿಗೆ ನೀಡಲಾಗುವ ಸಬ್ಸಿಡಿಗಳನ್ನು ಮುಂದಿನ 7ರಿಂದ 10 ದಿನಗಳಲ್ಲಿ ಪಾವತಿಸಲಾಗುವುದೆಂದು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ವಾಹನಗಳು ಲಭ್ಯವಿಲ್ಲದ ಕಾರಣಕ್ಕೆ ಭಾರತದ ಬಹುತೇಕ ಎಲ್ಲಾ ರಸ್ತೆಗಳು ನಿರ್ಜನವಾಗಿವೆ. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಾರು ಹಾಗೂ ಬೈಕ್ಗಳಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ.

ಈ ರೀತಿಯ ಸಂದರ್ಭಗಳು ಹೆಚ್ಚಾಗಿ ಸಿಗದ ಕಾರಣಕ್ಕೆ ಜಾಲಿ ರೈಡ್ ಮಾಡುತ್ತಿರುವುದಾಗಿ ಕೆಲವರು ಹೇಳಿದ್ದಾರೆ. ಈ ರೀತಿ ವರ್ತಿಸುತ್ತಿರುವವರಿಗೆ ಕೋವಿಡ್ -19 ವೈರಸ್ನ ಗಂಭೀರತೆ ಅರಿವಾದಂತಿಲ್ಲ. ಇವರಿಗೆ ಸೋಂಕು ತಗುಲುವುದು ಮಾತ್ರವಲ್ಲದೇ ಇವರ ಕುಟುಂಬದವರಿಗೂ ಸೋಂಕು ತಗುಲುತ್ತದೆ.

ಈ ಕಾರಣಕ್ಕೆ ಪೊಲೀಸರು ವಿನಾಕಾರಣ ಹೊರಗೆ ಬರುವವರ ವಿರುದ್ಧ ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ದಂಡ ವಿಧಿಸುವುದು, ಪ್ರಕರಣ ದಾಖಲಿಸುವುದು ಹಾಗೂ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.


Click it and Unblock the Notifications