Ayodhya: ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವವರಿಗೆ ಸಿಹಿಸುದ್ದಿ.. ಈ ನಗರದಿಂದ ವಿಮಾನ, 80 ನಿಮಿಷ ಪ್ರಯಾಣ
ಪವಿತ್ರ ಪುಣ್ಯಕ್ಷೇತ್ರ ಅಯೋಧ್ಯೆ (Ayodhya)ಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೇ ಶುರುವಾಗಿದೆ. 2024ರ ಜನವರಿ 22ರಂದು 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈಗ, ಶೀರಾಮನ ದರ್ಶನಕ್ಕೆ ತೆರಳುವ ಭಕ್ತರಿಗೆ ಸಿಹಿಸುದ್ದಿಯೊಂದು ದೊರೆತಿದ್ದು, ಕೆಲವೇ ದಿನಗಳಲ್ಲಿ ವಿಮಾನ ಸೇವೆ (Flight Services) ಆರಂಭವಾಗಲಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ (Air India Express) ಸಂಸ್ಥೆಯ ವಿಮಾನ ಡಿಸೆಂಬರ್ 30ರಂದು ದೆಹಲಿಯಿಂದ ಅಯೋಧ್ಯೆಗೆ ತನ್ನ ಮೊದಲ (Inaugural Run) ಸಂಚಾರವನ್ನು ನಡೆಸಲಿದೆ. ಆ ಮೂಲಕ ವಿಮಾನ ಸೇವೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದ್ದು, ಜನವರಿ 16ರಿಂದ ದೈನಂದಿನ ಕಾರ್ಯಚರಣೆಗಳು ಶುರುವಾಗಲಿದೆ. ಅಯೋಧ್ಯೆಯ 'ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'ವು ಎ-321/ಬಿ-737 ವಿಮಾನಗಳನ್ನು ಇಳಿಸಲು ಸೂಕ್ತವಾದ ವಿಸ್ತೃತ ರನ್ವೇಯನ್ನು ಹೊಂದಿದೆ.

ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯ ಐಎಕ್ಸ್ 2789 (IX 2789) ವಿಮಾನವು ರಾಷ್ಟ್ರ ರಾಜಧಾನಿ ದೆಹಲಿ (Delhi)ಯಿಂದ ಬೆಳಗ್ಗೆ 11 ಗಂಟೆಗೆ ಸಂಚಾರ ಆರಂಭಿಸಲಿದ್ದು, ಮಧ್ಯಾಹ್ನ 12.20ಕ್ಕೆ ಅಯೋಧ್ಯೆ (Ayodhya) ತಲುಪಲಿದೆ. ಅಲ್ಲಿಂದ 12.50ಕ್ಕೆ ಹೊರಡುವ ವಿಮಾನ (IX 1769) ಮಧ್ಯಾಹ್ನ 2.10ರ ಸುಮಾರಿಗೆ ದೆಹಲಿಗೆ ಹಿಂದಿರುಗಲಿದೆ.
ಏರ್ ಇಂಡಿಯಾದ ಅಂಗಸಂಸ್ಥೆಯಾಗಿರುವ 'ಏರ್ ಇಂಡಿಯಾ ಎಕ್ಸ್ಪ್ರೆಸ್' ಟೈರ್-2 ಮತ್ತು ಟೈರ್-3 ನಗರಗಳಿಗೆ ವಿಮಾನ ಸೇವೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ರೂ.350 ಕೋಟಿ ವೆಚ್ಚದಲ್ಲಿ ಅಯೋಧ್ಯೆ ವಿಮಾನ ನಿಲ್ದಾಣ (Shri Ram International Airport)ವನ್ನು ಅಭಿವೃದ್ಧಿಪಡಿಸಿದೆ. ಡಿಸೆಂಬರ್ 14 ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಏರ್ಪೋರ್ಟ್ ಗೆ ಪರವಾನಿಗೆಯನ್ನು ನೀಡಿದೆ.

ಇಂಡಿಗೋ (IndiGo) ಸಂಸ್ಥೆಯ ಮೊದಲ ವಿಮಾನವು ದೆಹಲಿಯಿಂದ ಅಯೋಧ್ಯೆಗೆ ಡಿಸೆಂಬರ್ 30 ರಂದು ಸಂಚರಿಸಲಿದೆ ಎಂದು ವರದಿಯಾಗಿದೆ. ದೈನಂದಿನ ವಿಮಾನ ಸಂಚಾರ ಜನವರಿ 6 (2024) ರಿಂದ ಶುರುವಾಗಲಿದೆ. ಅಯೋಧ್ಯೆಗೆ ವಿಮಾನ ಸೇವೆಯನ್ನು ವಿಸ್ತರಿಸುವ ಮೂಲಕ ಇಂಡಿಗೋ ದೇಶದ 86ನೇ ನಗರಕ್ಕೆ ಪ್ರವೇಶವನ್ನು ಪಡೆಯಲಿದೆ. ಜನವರಿ 11 ರಿಂದ ಅಹಮದಾಬಾದ್ ಮತ್ತು ಅಯೋಧ್ಯೆ ನಡುವೆಯೂ ವಿಮಾನ ಸೇವೆ ಆರಂಭಿಸಲು ಯೋಜಿಸಿದೆ.
ಡಿಸೆಂಬರ್ 8 ರಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರು, 'ಈ ತಿಂಗಳ ಅಂತ್ಯದ ವೇಳೆಗೆ ಅಯೋಧ್ಯೆಯ ವಿಮಾನ ನಿಲ್ದಾಣವನ್ನು ಸಿದ್ಧಪಡಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ' ಎಂದು ಹೇಳಿದ್ದರು. ರೈಲು ಇಲಾಖೆಯು ದೇಶದ ನಾನಾ ಭಾಗಗಳಿಂದ ಅಯೋಧ್ಯೆಗೆ ಹೆಚ್ಚಿನ ರೈಲುಗಳನ್ನು ಓಡಿಸಲು ಯೋಜಿಸಿದೆ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೊಂಡ ಮೊದಲ 100 ದಿನಗಳಲ್ಲಿ ಅಲ್ಲಿಗೆ ದೇಶದ ವಿವಿಧೆಡೆಗಳಿಂದ ಭಕ್ತರು ಬರಲು 1,000ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ. ಈ ರೈಲುಗಳು ಜನವರಿ 19 ರಿಂದ ಕಾರ್ಯಾಚರಣೆ ನಡೆಸಲಿವೆ ಎಂದು ಹೇಳಲಾಗಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಂದ ಅಯೋಧ್ಯೆಗೆ ರೈಲು ಸಂಚಾರ ಪ್ರಾರಂಭವಾಗಬಹುದು ಎಂದು ಮೂಲಗಳು ಹೇಳಿವೆ.
ಅಯೋಧ್ಯೆಯ ಸರಯೂ ನದಿಯಲ್ಲಿ ಶೀಘ್ರದಲ್ಲೇ ವಾಟರ್ ಮೆಟ್ರೋ ಕೂಡ ಓಡಾಟ ನಡೆಸಲಿದೆ. ಈ ವಾಟರ್ ಮೆಟ್ರೋವನ್ನು ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಾರ್ಪಣೆಗೊಳಿಸಬಹುದು. ಇದು ಗುಪ್ತರ್ ಘಾಟ್ ಮತ್ತು ರಾಮ್ ಕಿ ಪೈಡಿ ನಡುವೆ ಸಂಚರಿಸಲಿದ್ದು, 50 ಮಂದಿ ಪ್ರಯಾಣಿಸಬಹುದು. ಇನ್ನು, ದೆಹಲಿಯಿಂದ ಅಯೋಧ್ಯೆಗೆ ವಂದೇ ಭಾರತ್ ರೈಲಿನ ಸೇವೆಯೂ ಕೆಲವೇ ದಿನಗಲ್ಲಿ ಶುರುವಾಗುವ ನೀರಿಕ್ಷೆಯಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications