ವಾಯು ಮಾಲಿನ್ಯ ತಡೆಗೆ ಸರ್ಕಾರದೊಂದಿಗೆ ಕೈಜೋಡಿಸಲು ಮನವಿ ಮಾಡಿದ ಮುಖ್ಯಮಂತ್ರಿ
ಕಳೆದ ಕೆಲವು ವರ್ಷಗಳಿಂದ ದೆಹಲಿ ಸರ್ಕಾರಕ್ಕೆ ವಾಯು ಮಾಲಿನ್ಯವು ದೊಡ್ಡ ತಲೆನೋವಾಗಿದೆ. ಇದನ್ನು ತಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಪ್ರಪಂಚದೆಲ್ಲೆಡೆ ಕರೋನಾ ವೈರಸ್ ಆರಂಭವಾದ ನಂತರ ಫೇಸ್ ಮಾಸ್ಕ್ ಧರಿಸಿದರೆ ದೆಹಲಿಯ ಜನರು ವಾಯು ಮಾಲಿನ್ಯದ ಕಾರಣ ಕರೋನಾ ಆರಂಭಕ್ಕೂ ಮೊದಲೇ ಫೇಸ್ ಮಾಸ್ಕ್ ಬಳಕೆಯನ್ನು ಆರಂಭಿಸಿದ್ದರು.

ಕರೋನಾ ಕಾರಣಕ್ಕೆ ರಾಷ್ಟ್ರವ್ಯಾಪಿ ವಿಧಿಸಲಾದ ಲಾಕ್ ಡೌನ್ ಅವಧಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ಕಡಿಮೆಯಾಗಿತ್ತು. ಆದರೆ ಲಾಕ್ ಡೌನ್ ತೆರವುಗೊಳಿಸಿದ ನಂತರ ದೆಹಲಿಯಲ್ಲಿ ಪರಿಸರವು ಮತ್ತಷ್ಟು ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 7 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು 22 ದಿನಗಳ ವಾಯು ಮಾಲಿನ್ಯ ಅಭಿಯಾನವನ್ನು ಆರಂಭಿಸಿದೆ.

ಈ ಅಭಿಯಾನದ ಅಂಗವಾಗಿ ಅಕ್ಟೋಬರ್ 9 ರಂದು ಒಂದೇ ದಿನ ವಾಯು ಮಾಲಿನ್ಯಕ್ಕೆ ಕಾರಣವಾದ 32 ಅಪರಾಧಗಳಿಗೆ ಸುಮಾರು ರೂ. 15 ಲಕ್ಷಗಳವರೆಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ದೆಹಲಿ ಸರ್ಕಾರವು 31 ಸದಸ್ಯರ ತಂಡವನ್ನು ಸ್ಥಾಪಿಸಿದೆ. ಈ ತಂಡವು ನಗರದ ಒಳಗೆ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಲಿದ್ದು, ಈ ಸ್ಥಳಗಳಿಂದ ಹೊರಬರುವ ಧೂಳಿನ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲಿದೆ.

ಈ ತಂಡವು ಅಕ್ಟೋಬರ್ 29 ರವರೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಕರಿಸುವಂತೆ ದೆಹಲಿಯ ಜನರಿಗೆ ಮನವಿ ಮಾಡಿದ್ದು, ವಾಹನ ಸವಾರರು ವಾರದಲ್ಲಿ ಒಂದು ದಿನವಾದರೂ ತಮ್ಮ ವಾಹನಗಳನ್ನು ಹೊರತೆಗೆಯದಂತೆ ನೋಡಿಕೊಳ್ಳಬೇಕೆಂದು ಹಾಗೂ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಕೇಳಿಕೊಂಡಿದ್ದಾರೆ.

ಇದರ ಜೊತೆಗೆ ಶೇರ್ ಆಟೋ ಹಾಗೂ ಶೇರ್ ಬೈಕ್ ಬಳಸುವಂತೆ ತಿಳಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಅಕ್ಟೋಬರ್ನಲ್ಲಿ ತಿಂಗಳಿನಲ್ಲಿಯೇ ವಿಶೇಷ ಅಭಿಯಾನವನ್ನು ಆರಂಭಿಸಿದೆ. ವಾಹನಗಳಿಂದ ಬರುವ ಹೊಗೆ ಕೂಡ ದೆಹಲಿಯ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.

ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ವಾಯು ಮಾಲಿನ್ಯ ಕಡಿಮೆಯಾಗುವುದಲ್ಲದೆ ಇಂಧನ ಬಳಕೆ ಪ್ರಮಾಣವೂ ಸಹ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಈ ಬಗ್ಗೆ ದೆಹಲಿ ಜನತೆಗೆ ಮನವಿ ಮಾಡಿರುವ ಅವರು ಗ್ರೀನ್ ದೆಹಲಿ ಮೊಬೈಲ್ ಪ್ರೊಸೆಸರ್ ಅನ್ನು ಡೌನ್ಲೋಡ್ ಮಾಡಿಕೊಂಡು ವಾಯು ಮಾಲಿನ್ಯಕ್ಕೆ ಕಾರಣವಾಗುವ ಉಲ್ಲಂಘನೆಗಳನ್ನು ವರದಿ ಮಾಡುವಂತೆ ಹೇಳಿದ್ದಾರೆ.

ವಾಯು ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳು ನಿಮ್ಮ ಕಣ್ಣ ಮುಂದೆ ನಡೆದರೆ ಅವುಗಳನ್ನು ವರದಿ ಮಾಡಿ. ಅದು ರಸ್ತೆಯಲ್ಲಿ ಹೊಗೆಯನ್ನು ಹೊರ ಸೂಸುವ ಲಾರಿಯೇ ಆಗಿರಲಿ ಅಥವಾ ಕಾರ್ಖಾನೆಗಳಿಂದ ಹೊರ ಬರುವ ಹೊಗೆಯೇ ಆಗಿರಲಿ, ಕಸವನ್ನು ಸುಡುವುದೇ ಆಗಿರಲಿ, ಅವುಗಳ ಬಗ್ಗೆ ವರದಿ ಮಾಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ.

ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದ ದೆಹಲಿ ನಗರವು ಮತ್ತಷ್ಟು ತತ್ತರಿಸುವ ಸಾಧ್ಯತೆಗಳಿವೆ. ದೆಹಲಿ ಸರ್ಕಾರವು ಎಲ್ಲಾ ವಾಹನ ಸವಾರರು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು (ಪಿಯುಸಿ) ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ತಮ್ಮ ವಾಹನಗಳಿಗೆ ಪಿಯುಸಿ ಹೊಂದಿರದ ವಾಹನ ಸವಾರರಿಗೆ ರೂ. 10,000 ದಂಡ ವಿಧಿಸಲಾಗುವುದು ಎಂದು ದೆಹಲಿ ಸರ್ಕಾರವು ತಿಳಿಸಿದೆ.

ಇದರ ಜೊತೆಗೆ ಸಂಬಂಧ ಪಟ್ಟ ವಾಹನ ಸವಾರನ ಚಾಲನಾ ಪರವಾನಗಿಯನ್ನು ಮೂರು ತಿಂಗಳವರೆಗೆ ಅಮಾನತು ಮಾಡಲಾಗುತ್ತದೆ. ಈ ನಿಯಮ ಉಲ್ಲಂಘಿಸುವವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ದೆಹಲಿ ರಾಜ್ಯ ಸಾರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವಾಹನಗಳು ಈ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯ ಸಮಸ್ಯೆಯನ್ನು ಕಡಿಮೆ ಮಾಡಲು ಹಾಗೂ ಗಾಳಿಯ ಗುಣಮಟ್ಟವನ್ನು ಸುಧಾರಿಸಲು, ವಾಹನಗಳು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಹೊಂದುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಎಲ್ಲಾ ವಾಹನ ಸವಾರರು ತಮ್ಮ ವಾಹನಗಳನ್ನು ಪರೀಕ್ಷಿಸಬೇಕು ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಸಾರಿಗೆ ಇಲಾಖೆಯಿಂದ ಅನುಮೋದಿಸಿದ ಕೇಂದ್ರಗಳಲ್ಲಿ ಪಡೆಯಬೇಕು ಎಂದು ತಿಳಿಸಲಾಗಿದೆ.

ಈ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ದಂಡ ವಿಧಿಸುವುದರಿಂದ ಚಾಲನಾ ಪರವಾನಗಿ ಅಮಾನತುಗೊಳ್ಳುವುದರಿಂದ ಹಾಗೂ ಜೈಲುವಾಸಕ್ಕೆ ತುತ್ತಾಗುವಂತಹ ಕ್ರಮಗಳಿಂದ ಪಾರಾಗಬಹುದು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ದೆಹಲಿ ರಾಜ್ಯ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವುದು ಸಹ ಸೇರಿದೆ. ದೆಹಲಿ ರಾಜ್ಯ ಸರ್ಕಾರವು ತನ್ನ ಎಲೆಕ್ಟ್ರಿಕ್ ವಾಹನ ನೀತಿಯ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಸಹ ಫೇಮ್ ಇಂಡಿಯಾ 2 ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತಿದೆ.


Click it and Unblock the Notifications