ಅತಿವೇಗದ ಕಾರಿಗೆ 3 ಮಂದಿ ಬಲಿ... ವಾಹನ ಯಾರದು ಗೊತ್ತಾ? ಸರ್ಕಾರಿ ಉನ್ನತಾಧಿಕಾರಿ...
ವಿಶ್ವದ ಅತಿ ಹೆಚ್ಚು ರಸ್ತೆ ಅಪಘಾತಗಳು ನಡೆಯುವ ದೇಶಗಳಲ್ಲಿ ಭಾರತ ಕೂಡ ಒಂದು, ಹೆಚ್ಚಿನ ಅಪಘಾತಗಳಿಗೆ ಅತಿವೇಗವೆ ಪ್ರಮುಖ ಕಾರಣವಾಗಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಇಂದು (ನ.21) ಬೆಳಗ್ಗೆ ಕೂಡ ರಸ್ತೆ ಅಪಘಾತವೊಂದು ನಡೆದಿದ್ದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ.
ಬಿಹಾರದ ಮಧುಬನಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 57ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿವೇಗದಲ್ಲಿ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರು ಡಿಕ್ಕಿಯಾಗಿ 3 ಮಂದಿ ಮೃತಪಟ್ಟಿದ್ದಾರೆ. ಬಿಹಾರದ ಮಾಧೇಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರ ವಾಹನ ಡಿಕ್ಕಿಯಾದ ಪರಿಣಾಮ ಈ ಅಪಘಾತ ನಡೆದಿದೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ಮಹಿಳೆ, ಆಕೆಯ ಮಗು ಮತ್ತು ಸ್ಥಳದಲ್ಲಿ ರಸ್ತೆ ನಿರ್ವಹಣೆ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ. ಇದಲ್ಲದೆ, ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ದರ್ಬಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (DMCH) ದಾಖಲಿಸಲಾಗಿದೆ. ಸದ್ಯ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಅಪಘಾತದ ನಂತರ ಕೋಪಗೊಂಡ ಸ್ಥಳೀಯರು NH57 ಹೆದ್ದಾರಿಯನ್ನು ತಡೆದು ಗಲಾಟೆ ಮಾಡಿದ್ದಾರೆ.
ಅಪಘಾತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ವರದಿಗಳ ಪ್ರಕಾರ ಅಪಘಾತಕ್ಕೆ ಕಾರಣವಾದ ಕಾರು ಮಾಧೇಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಪ್ರಕಾಶ್ ಮೀನಾ ಅವರದ್ದು. ಆದರೆ ರಸ್ತೆ ಅಪಘಾತ ಸಂಭವಿಸಿದಾಗ ಅವರು ಕಾರಿನೊಳಗೆ ಇದ್ದರೇ? ಎಂಬುದು ಖಚಿತವಾಗಿಲ್ಲ. ಕಾರಿನಲ್ಲಿದ್ದವರು ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಕಾರು ದರ್ಭಾಂಗಾ ಕಡೆಗೆ ಹೋಗುತ್ತಿತ್ತು ಎಂದು ಮಧುಬನಿ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಕುಮಾರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ಹೆಚ್ಚು ವೇಗದಲ್ಲಿತ್ತು, ರಸ್ತೆ ದಾಟುತ್ತಿದ್ದ ಜನರ ಗುಂಪಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ವಾಹನ ನಿಯಂತ್ರಣ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಅಪಘಾತವು ಬೆಳಿಗ್ಗೆ 8 ಗಂಟೆಗೆ ಸಂಭವಿಸಿದ್ದು, ಸಂತ್ರಸ್ತರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾಧೇಪುರ ಡಿಎಂ ಅವರ ವಾಹನವು ಅವರನ್ನು ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಫುಲ್ಪಾರಸ್ ಡಿಎಸ್ಪಿ ಮತ್ತು ಎಸ್ಡಿಒ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗ್ರಾಮಸ್ಥರು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
NH 57 ದೆಹಲಿಯನ್ನು ಸಿಲ್ಲಿಗುರಿಗೆ ಲಕ್ನೋ, ಗೋರಖ್ಪುರ, ದರ್ಭಾಂಗ ಮತ್ತು ಪೂರ್ಣಿಯ ಮೂಲಕ ಸಂಪರ್ಕಿಸುತ್ತದೆ. ಇದು ಸರ್ವೀಸ್ ಲೇನ್ ಇಲ್ಲದೆ ನಾಲ್ಕು ಪಥದ ವಿಸ್ತರಣೆಯಾಗಿದೆ. ಅಪಘಾತ ಖಂಡಿಸಿ ಸ್ಥಳೀಯರು ರಸ್ತೆ ತಡೆ ನಡೆಸಿದ್ದರಾದರೂ ಇದೀಗ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications