ಅ.25ರಿಂದ ಪಿಯುಸಿ ಪ್ರಮಾಣ ಪತ್ರ ಇಲ್ಲದಿದ್ದರೆ ಇಂಧನ ತುಂಬಬೇಡಿ: ಬಂಕ್ ಮಾಲೀಕರಿಗೆ ಸರ್ಕಾರ ಆದೇಶ
ಪ್ರತಿ ವರ್ಷ ಚಳಿಗಾಲದ ಆರಂಭದೊಂದಿಗೆ ದೆಹಲಿ-ಎನ್ಸಿಆರ್ (ನ್ಯಾಷನಲ್ ಕ್ಯಾಪಿಟಲ್ ರೀಜನ್) ನಿವಾಸಿಗಳು ವರ್ಷದ ಅತ್ಯಂತ ಕೆಟ್ಟ ಮಾಲಿನ್ಯದಲ್ಲಿ ದಿನದೂಡುತ್ತಿದ್ದಾರೆ. ಎಷ್ಟೇ ಕ್ರಮಗಳನ್ನು ತೆಗೆದುಕೊಂಡರೂ ವರ್ಷದಿಂದ ವರ್ಷಕ್ಕೆ ಇದು ಹೆಚ್ಚಾಗುತ್ತಲೇ ಬಂದಿದೆ. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ದೆಹಲಿ ಸರ್ಕಾರ ಹೊಸ ಕ್ರಮವನ್ನು ತೆಗೆದುಕೊಂಡಿದೆ.

ಈ ಬಾರಿ ದೆಹಲಿ ಸರ್ಕಾರವು ನಗರದಲ್ಲಿ ಮಾಲಿನ್ಯವನ್ನು ತಡೆಯಲು ಹೊಸ ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದು, ಅದರಂತೆ ಯಾವುದೇ ಪೆಟ್ರೋಲ್ ಬಂಕ್ಗಳು "ಪೋಲ್ಯೂಷನ್ ಅಂಡರ್ ಕಂಟ್ರೋಲ್" ಪ್ರಮಾಣಪತ್ರ (ಪಿಯುಸಿಸಿ) ಇಲ್ಲದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ನೀಡದಂತೆ ಬಂಕ್ಗಳಿಗೆ ಆದೇಶ ಹೊರಡಿಸಿದೆ.

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಶನಿವಾರ ಈ ಹೊಸ ನಿಯಮವನ್ನು ಘೋಷಿಸಿದರು. ಅಕ್ಟೋಬರ್ 25 ರಿಂದ ಹೊಸ ಕಾನೂನು ಅನ್ವಯವಾಗಲಿದೆ ಎಂದು ಹೇಳಿದ ಸಚಿವರು, ಸರ್ಕಾರವು ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆಯನ್ನು ಹೊರಡಿಸುತ್ತದೆ ಎಂದು ತಿಳಿಸಿದರು.

ಸೆಪ್ಟೆಂಬರ್ 29 ರಂದು ಪರಿಸರ, ಸಾರಿಗೆ ಮತ್ತು ಸಂಚಾರ ಇಲಾಖೆಗಳ ಅಧಿಕಾರಿಗಳ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ನಿಯಮಗಳು ಮತ್ತು ವಿಧಾನಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬುದರ ಕುರಿತು ಸಮಿತಿಯು ಚರ್ಚಿಸಿದೆ. ಅಕ್ಟೋಬರ್ 25 ರಿಂದ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.

ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ವಾಹನಗಳ ಕಾರ್ಬನ್ ಹೊರಸೂಸುವಿಕೆ ಪ್ರಮುಖ ಕಾರಣವಾಗಿದೆ. ಅದನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದ್ದರಿಂದ ಅಕ್ಟೋಬರ್ 25 ರಿಂದ ವಾಹನದ ಪಿಯುಸಿ ಪ್ರಮಾಣಪತ್ರವಿಲ್ಲದೆ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್, ಡೀಸೆಲ್ ನೀಡದಿರಲು ನಿರ್ಧರಿಸಲಾಗಿದೆ.

ಮಾಲಿನ್ಯವನ್ನು ಎದುರಿಸಲು ದೆಹಲಿ ಸರ್ಕಾರವು ಅಕ್ಟೋಬರ್ 3 ರಂದು 24X7 ವಾರ್ ರೂಮ್ ಅನ್ನು ಪ್ರಾರಂಭಿಸಲಿದೆ ಎಂದು ಸಚಿವರು ಹೇಳಿದರು. ಹೊಸ ಪ್ಯಾನೆಲ್ ತಿದ್ದುಪಡಿಯಾದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಅಥವಾ GRAP ಯ ಪರಿಣಾಮಕಾರಿ ಮತ್ತು ಗಂಭೀರ ಅನುಷ್ಠಾನವನ್ನು ಖಚಿತಪಡಿಸುತ್ತದೆ.

ಅಕ್ಟೋಬರ್ 6 ರಿಂದ ಧೂಳಿನ ಮಾಲಿನ್ಯದ ಮಟ್ಟವನ್ನು ಪರಿಶೀಲಿಸಲು ಅಧಿಕಾರಿಗಳು ನಿರ್ಮಾಣ ಸ್ಥಳಗಳ ಹಠಾತ್ ಪರಿಶೀಲನೆಯನ್ನು ಸಹ ಮಾಡುತ್ತಾರೆ. ಈ ವರ್ಷದ ಆರಂಭದಲ್ಲಿಯೂ ಇದೇ ರೀತಿಯ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸಿತ್ತು ಎಂದು ಹೇಳಿದ ಅವರು, ಕರಡು ನಿಯಮಗಳು ಸಿದ್ಧವಾದಂತೆ ತೋರುತ್ತಿದೆ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಪಡೆಯುತ್ತೇವೆ ಎಂದರು.

ಮೋಟಾರು ವಾಹನಗಳೇ ಗುರಿ
ದೆಹಲಿ ಸರ್ಕಾರವು ಇತ್ತೀಚಿನ ದಿನಗಳಲ್ಲಿ ವಾಹನ ಚಾಲಕರ ಮೇಲೆ ಕಟ್ಟುನಿಟ್ಟಾಗಿದೆ. ಎನ್ಸಿಆರ್ನಲ್ಲಿ ಮಾಲಿನ್ಯದ ಮಟ್ಟಗಳು ಇನ್ನು ಮುಂದೆ ಹೆಚ್ಚಾಗದಂತೆ ನೋಡಿಕೊಳ್ಳಲು ಈಗಾಗಲೇ ಕೆಲವು ಕ್ರಮಗಳನ್ನು ಪರಿಚಯಿಸಿದೆ. ಹೊಸದಿಲ್ಲಿಯಲ್ಲಿ 15 ವರ್ಷ ಹಳೆಯ ಪೆಟ್ರೋಲ್ ಚಾಲಿತ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ಚಾಲಿತ ವಾಹನಗಳ ಮರು-ನೋಂದಣಿಯನ್ನು ನಿಲ್ಲಿಸಲಾಗಿದೆ.

ಇದು ಆಟೋಮೊಬೈಲ್ಗಳಿಂದ ವಾಯು ಮಾಲಿನ್ಯದ ದೊಡ್ಡ ಮೂಲವಾಗಿದೆ ಎಂದು ಗ್ರಹಿಸಲಾಗಿದೆ. ಅಕ್ಟೋಬರ್ 2020 ರಿಂದ ದೆಹಲಿ ಸರ್ಕಾರವು ಪಿಯುಸಿಯನ್ನು ಒಯ್ಯುವ ಮಾನದಂಡದ ಅನುಸರಣೆಗೆ ಕಟ್ಟುನಿಟ್ಟಾಗಿರಲಿದೆ. ಈ ಡ್ರೈವ್ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಈಗಾಗಲೇ ವಿವಿಧ ಪೆಟ್ರೋಲ್ ಪಂಪ್ಗಳಲ್ಲಿ 500 ತಂಡಗಳನ್ನು ನಿಯೋಜಿಸಿದೆ.

ಇತ್ತೀಚಿನ ವರ್ಷಗಳಲ್ಲಿ, ಇಡೀ ಉತ್ತರ ಭಾರತವು ಗಂಭೀರ ವಾಯುಮಾಲಿನ್ಯ ಮಟ್ಟದಿಂದ ಬಳಲುತ್ತಿದೆ. ಈ ಪಟ್ಟಿಯಲ್ಲಿ ಎನ್ಸಿಆರ್ ಅಗ್ರಸ್ಥಾನದಲ್ಲಿದೆ. ನವದೆಹಲಿಯ ಗಾಳಿಯಲ್ಲಿ ಮಾಲಿನ್ಯಕಾರಕ ಮಟ್ಟಗಳು ಹೆಚ್ಚಿರುತ್ತವೆ, ವಿಶೇಷವಾಗಿ ಚಳಿಗಾಲದಲ್ಲಿ ಗೋಚರತೆ ಕಡಿಮೆ ಇರುವಾಗ ಇದರ ಪ್ರಭಾವ ಹೆಚ್ಚಾಗಿರುತ್ತದೆ.

ಈ ನಿಟ್ಟಿನಲ್ಲಿ ವಾಹನ ಚಾಲಕರಿಗೆ ಕಟ್ಟುನಿಟ್ಟಾದ ನೀತಿಗಳನ್ನು ಪರಿಚಯಿಸುವುದರ ಜೊತೆಗೆ, ದೆಹಲಿ ಸರ್ಕಾರವು ಹೊಸ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಜನರು ಗಂಭೀರವಾಗಿ ನಿಯಮಗಳನ್ನು ಅನುಸರಿಸಲು ಇವುಗಳನ್ನು ಪರಿಚಯಿಸಲಾಗುತ್ತಿದೆ. ಈ ಕ್ರಮಗಳಿಂದ ನಾಗರಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತಯೂ ನೋಡಿಕೊಳ್ಳಲಾಗುತ್ತಿದೆ.


Click it and Unblock the Notifications