ಸುಖಾಸುಮ್ಮನೆ ವಾಹನ ಚಾಲಕರನ್ನು ತಡೆಯಬೇಡಿ: ಟ್ರಾಫಿಕ್ ಪೊಲೀಸರಿಗೆ ಡಿಜಿ, ಐಜಿಪಿ ಸೂಚನೆ
ಹೊರರಾಜ್ಯದ ಕಾರು ಚಾಲಕನಿಂದ ಲಂಚ ಪಡೆದ ಆರೋಪದಡಿ ಬೆಂಗಳೂರಿನ ಹಲಸೂರು ಗೇಟ್ ಸಂಚಾರ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು ಹೆಡ್ ಕಾನ್ಸ್ಟೆಬಲ್ರನ್ನು ಜಂಟಿ ಪೊಲೀಸ್ ಆಯುಕ್ತ (ಟ್ರಾಫಿಕ್) ಬಿ.ಆರ್.ರವಿಕಾಂತೇಗೌಡ ಅಮಾನತುಗೊಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಾದ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್, ವಾಹನ ಚಾಲಕರು ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದರೆ ಮಾತ್ರ ದಾಖಲೆಗಳನ್ನು ಪರಿಶೀಲಿಸಬೇಕು, ಇಲ್ಲದಿದ್ದರೆ ಯಾವುದೇ ಪೊಲೀಸರು ವಾಹನವನ್ನು ನಿಲ್ಲಿಸುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ನಿಯಮಗಳ ಉಲ್ಲಂಘನೆ ಹೆಸರಿನಲ್ಲಿ ವಾಹನ ಚಾಲಕರ ಮೇಲೆ ನಡೆಸುವ ದೌರ್ಜನ್ಯಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಅದರಲ್ಲೂ ಈ ಮಧ್ಯ ಕಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಹೊರಬರುತ್ತಿವೆ. ವಾಹನ ಚಾಲಕರು ಪೊಲೀಸರ ವರ್ತನೆ ಕುರಿತು ಟ್ವಿಟ್ಟರ್ನಲ್ಲಿ ನೇರವಾಗಿ ಉನ್ನತ ಅಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ.

ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ, ಸಿಬ್ಬಂದಿಗೆ ಎಚ್ಚರಿಕೆ ನೀಡುತ್ತಿದ್ದರೂ ಆಗಾಗ್ಗೆ ಕಾಣಿಸಿಕೊಳ್ಳುವ ಪೊಲೀಸರ ಲಂಚದ ಪ್ರಕರಣಗಳು ಇಲಾಖೆ ಮುಜುಗರ ತರುವಂತೆ ಮಾಡುತ್ತಿದೆ. ಇದೀಗ ಅಂತಹದೇ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರು ಪೊಲೀಸರನ್ನು ಮುಲಾಜಿಲ್ಲದೇ ಅಮಾನುತುಗೊಳಿಸಿದ್ದಾರೆ.

ಏನಿದು ಪ್ರಕರಣ?
ಎಎಸ್ಐ ಮಹೇಶ್ ಡಿ.ಸಿ ಮತ್ತು ಎಚ್.ಸಿ.ಗಂಗಾಧರಪ್ಪ ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ಹೊರರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳನ್ನು ನಿಯಮಿತವಾಗಿ ನಿಲ್ಲಿಸಿ ಅವರಿಂದ ಲಂಚವನ್ನು ಸಂಗ್ರಹಿಸುತ್ತಿದ್ದರು.

ಅದರಂತೆ ಜೂನ್ 10 ರಂದು ದೇವಾಂಗ ಜಂಕ್ಷನ್ನಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದ ವೇಳೆ ಕೇರಳ ಮೂಲದ ಕುಮಾರ್ ಎಂಬುವರ ಕಾರನ್ನು ನಿಲ್ಲಿಸಿದ್ದರು. ಅದರಲ್ಲಿ ಕುಮಾರ್ ಅವರು ವಾಶ್ಬೇಸಿನ್ ಸಾಗಿಸುತ್ತಿರುವುದನ್ನು ಕಂಡು ಅದೇನೋ ದೊಡ್ಡ ಅಪರಾದವಾದಂತೆ ಚಾಲಕನನ್ನು ಭಯ ಭೀಳಿಸಿ ಒಂದು ಸೆಕ್ಷನ್ ಅಡಿಯಲ್ಲಿ ಕೇಸ್ ಹಾಕುತ್ತೇವೆಂದು ಬೆದರಿಸಿದ್ದಾರೆ.

ನ್ಯಾಯಾಲಯದಲ್ಲಿ 20,000 ರೂ. ಆದರೆ, 2,500 ರೂಪಾಯಿ ಕೊಟ್ಟರೆ ಬಿಡುತ್ತೇವೆ ಎಂದೂ ಹೇಳಿದ್ದರು. ಇದರಿಂದ ಭೀತಿಗೊಳಗಾದ ಕುಮಾರ್ ಹಣ ಪಾವತಿಸಿದ್ದರು. ಆದರೆ ಪೊಲೀಸರು ಯಾವುದೇ ರಸೀದಿ ನೀಡಿದೆ, ಹಣವನ್ನು ಜೇಬಿಗೆ ಇಳಿಸಿದ್ದರು.

ಈ ಘಟನೆಯ ನಂತರ, ಕುಮಾರ್ ಲಂಚದ ಬಗ್ಗೆ ಬರೆದು ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಮಾಡಿದ್ದಾರೆ. ಅಧಿಕಾರಿಗಳು ಈ ಆರೋಪದ ಕುರಿತು ತನಿಖೆಯನ್ನು ಮಾಡಿದ್ದು, ಇಲಾಖೆ ನೀಡುವ ದೇಹಕ್ಕೆ ಧರಿಸಿರುವ ಕ್ಯಾಮೆರಾಗಳನ್ನು ಇಬ್ಬರೂ ಧರಿಸಿರಲಿಲ್ಲ. ಜೊತೆಗೆ ಕುಮಾರ್ನಿಂದ ಲಂಚವನ್ನು ಸಂಗ್ರಹಿಸಿದ್ದಾರೆ ಎಂಬುದು ಸಾಭೀತಾಗಿದೆ.

ಹೀಗಾಗಿ ರವಿಕಾಂತೇಗೌಡ ಸೋಮವಾರ ಇಬ್ಬರನ್ನು ಅಮಾನತುಗೊಳಿಸಿದ್ದಾರೆ. ಈ ಘಟನೆಯು ವಾಹನ ಸವಾರರಿಗೆ ಒಂದು ವಿಧದಲ್ಲಿ ಸಹಕರಿಸಿದೆ. ಅದು ಹೇಗೆ ಅಂತೀರಾ...ಈ ಘಟನೆಯಿಂದಲೇ ಡಿಜಿ ಮತ್ತು ಐಜಿಪಿ ಸೂದ್ ಅವರನ್ನು ಟ್ವೀಟ್ ಮಾಡಲು ಪ್ರೇರೇಪಿಸಿದೆ. ಅವರ ಟ್ವೀಟ್ ಟ್ರಾಫಿಕ್ ಪೊಲೀಸರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಉನ್ನತ ಅಧಿಕಾರಿಗಳು ಇಂತಹ ಸೂಚನೆಗಳೊಂದಿಗೆ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಸೂಚನೆಗಳನ್ನು ನೀಡಿದ್ದರೂ ನಿರ್ಲಕ್ಷಿಸಲಾಗುತ್ತಿದೆ. ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನಗಳನ್ನು ತಡೆಯಲು ಯತ್ನಿಸಿ ತೀವ್ರ ಗಾಯಗೊಂಡ ಘಟನೆಗಳು ನಡೆದಿವೆ.

ಕೆಲವು ಸ್ಥಳಗಳಲ್ಲಿ ಟ್ರಾಫಿಕ್ ಪೊಲೀಸರ ಗುಂಪು, ಹೆಲ್ಮೆಟ್ ಧರಿಸಿ ನಿಯಮ ಉಲ್ಲಂಘಿಸದಿದ್ದರೂ ಅನಾವಶ್ಯಕವಾಗಿ ವಾಹನಗಳನ್ನು ನಿಲ್ಲಿಸುವುದನ್ನು ವಾಹನ ಚಾಲಕರು ಗಮನಿಸಿರಬೇಕು. ಇದು ಉನ್ನತ ಅಧಿಕಾರಿಗಳ ಸೂಚನೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇನ್ನು ಎಎಸ್ಐ ಮತ್ತು ಮೇಲಿನ ಶ್ರೇಣಿಯ ಪೊಲೀಸರಿಗೆ ಮಾತ್ರ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಥವಾ ಅಂತಹುದೇ ಉಲ್ಲಂಘನೆಯನ್ನು ಗಮನಿಸಿದರೆ ವಾಹನವನ್ನು ನಿಲ್ಲಿಸುವ ಅಧಿಕಾರವನ್ನು ಹೊಂದಿರುತ್ತಾರೆ.

ಡಿಜಿ ಮತ್ತು ಐಜಿಪಿ ಸೂದ್, ಟ್ರಾಫಿಕ್ ಪೊಲೀಸರು ಪರಿಶೀಲನೆಗಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಉಂಟಾದ ಗಲಾಟೆಗಳ ದೂರುಗಳ ನಂತರ ಈ ಟ್ವೀಟ್ ಮಾಡಿದ್ದಾರೆ. ಕಣ್ಣಿಗೆ ಗೋಚರಿಸುವ ಸಂಚಾರ ಉಲ್ಲಂಘನೆಯನ್ನು ಮಾತ್ರ ಪರಿಗಣಿಸಬೇಕೇ ಹೊರತು ಸುಕಾಸುಮ್ಮನೆ ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಲು ಯಾವುದೇ ವಾಹನವನ್ನು ನಿಲ್ಲಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ನಿತ್ಯ ವಾಹನ ಸವಾವರರು ಎಲ್ಲಾ ದಾಖಲೆಗಳಿದ್ದರು, ನಿಯಮಗಳನ್ನು ಉಲ್ಲಂಘಿಸದಿದ್ದರೂ ಟ್ರಾಫಿಕ್ ಪೊಲೀಸರಿಗೆ ಹೆದರಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೋ ಒಂದು ನೆಪವೊಡ್ಡಿ ದಂಡ ಕಟ್ಟುವಂತೆ ಬೆದರಿಸುತ್ತಾರೆ ಎಂದು ಹಲವರು ಆರೋಪಿಸಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಾಕ್ಷ್ಯ ಸಮೇತ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ಪೊಲೀಸರು ಕೂಡ ಮುಂದಿನ ದಿನಗಳಲ್ಲಿ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾರೆ. ಇದೀಗ ಡಿಜಿ ಮತ್ತು ಐಜಿಪಿ ಸೂದ್ ಅವರ ಟ್ವೀಟ್ ಯಾವ ಮಟ್ಟಿಗೆ ಪ್ರಭಾವ ಭಿರಲಿದೆ ಕಾದುನೋಡಬೇಕಿದೆ.


Click it and Unblock the Notifications