ಹೆಲ್ಮೆಟ್ ಇಲ್ಲದ ಬೈಕ್ ಸವಾರರನ್ನು ಅಡ್ಡಗಟ್ಟಬೇಡಿ, ಇ-ಚಲನ್ ಮೂಲಕ ದಂಡ ಹಾಕಿ ಎಂದ ಸಿಎಂ
ಹೆಲ್ಮೆಟ್ ಬಳಕೆ ಮಾಡುವುದು ಯಾಕೆ ಹೇಳಿ? ಅದು ನಮ್ಮ ರಕ್ಷಣೆಗಾಗಿಯೇ ಇದೆಯೇ ಹೊರತು ಬೇರೆಯವರಿಗಲ್ಲ. ಕೇವಲ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೆಲ್ಮೆಟ್ ಬಳಕೆ ಮಾಡಿದರೂ ಸಹ ಅದು ಆಗಬಹುದಾದ ದುರಂತಗಳಿಂದ ನಮ್ಮನ್ನು ಪಾರು ಮಾಡಬಲ್ಲದು. ಆದ್ರೆ ಹೆಲ್ಮೆಟ್ ಬಳಕೆ ಬೇಡವೇ ಬೇಡ ಎಂದು ಪ್ರತಿಭಟನೆ ಮಾಡುವವರಿಗೆ ಏನೆಂದೂ ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ.

ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದಾಗಿ ದೇಶಾದ್ಯಂತ ನೂರಾರು ಅಪಘಾತಗಳು ಸಂಭವಿಸುತ್ತಿದ್ದು, ಹೆಲ್ಮೆಟ್ ಇಲ್ಲದ ಪರಿಣಾಮ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಜೀವರಕ್ಷಕವಾಗಿರುವ ಹೆಲ್ಮೆಟ್ ಬಳಕೆ ವಿರೋಧಿಸುತ್ತಿರುವ ಕೆಲವರು ಮಾತ್ರ ಯಾವುದೇ ಕಾರಣಕ್ಕೂ ಹೆಲ್ಮೆಟ್ ಬಳಕೆ ಮಾಡಲ್ಲ ಎನ್ನುವ ಶಪಥ ಮಾಡುತ್ತಿದ್ದಾರೆ.

ವಾಹನ ಸವಾರರ ಸುರಕ್ಷತೆಗಾಗಿ ಕೇಂದ್ರ ಸಾರಿಗೆ ಇಲಾಖೆ ಮತ್ತು ಆಯಾ ರಾಜ್ಯ ಸರ್ಕಾರಗಳು ಕೆಲವು ಕಠಿಣ ನಿಯಮಗಳನ್ನು ಜಾರಿ ತರುತ್ತಿವೆ. ಇವುಗಳಲ್ಲಿ ಬೈಕ್ ಸವಾರರಿಗೆ ಹೆಚ್ಚಿನ ಸುರಕ್ಷತೆ ನೀಡಬಲ್ಲ ಹೆಲ್ಮೆಟ್ ಕಡ್ಡಾಯ ಬಳಕೆ ಕೂಡಾ ಒಂದು. ಆದ್ರೆ ಹೆಲ್ಮೆಟ್ ಕಡ್ಡಾಯ ವಿರೋಧಿಸಿ ಉಗ್ರ ಪ್ರತಿಭಟನೆಗಳು ನಡೆಯುತ್ತಿರುವುದು ಮಾತ್ರ ದುರ್ದೈವೇ ಸರಿ.

ಯಾಕೆಂದ್ರೆ, ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವುದನ್ನ ದೇಶದ ಬಹುತೇಕ ರಾಜ್ಯಗಳಲ್ಲಿ ಕಡ್ಡಾಯಗೊಳಿಸಲಾಗಿದ್ದು, ನಿಯಮ ಪಾಲಿಸದ ಬೈಕ್ ಸವಾರರನ್ನು ಹಿಡಿದು ದಂಡ ವಸೂಲಿ ಸಹ ಮಾಡಲಾಗುತ್ತಿದೆ. ಹೀಗಿರುವಾಗ ಹೆಲ್ಮೆಟ್ ಬಳಕೆಯ ವಿರುದ್ಧ ಮಹಾರಾಷ್ಟ್ರದಲ್ಲಿ ದೊಡ್ಡ ಜನಾಂದೋಲನ ನಡೆಯುತ್ತಿದ್ದು, ಹೆಲ್ಮೆಟ್ ಕಡ್ಡಾಯ ವಿಚಾರ ಇದೀಗ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಹೌದು, ಹೆಲ್ಮೆಟ್ ಕಡ್ಡಾಯ ಬಳಕೆಯ ಕುರಿತಂತೆ ಮಹಾರಾಷ್ಟ್ರದ ಬಹುತೇಕ ಜಿಲ್ಲೆಯಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಬೈಕ್ ಸವಾರರ ಮಧ್ಯೆ ದೊಡ್ಡ ಗೊಂದಲವೇ ನಿರ್ಮಾಣವಾಗಿದ್ದು, ನಿಯಮ ಉಲ್ಲಂಘಿಸುವ ಬೈಕ್ ಸವಾರರ ವಿರುದ್ಧ ಕ್ರಮಕೈಗೊಳ್ಳುತ್ತಿರುವ ಪೊಲೀಸರ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಅಲ್ಲಿನ ಜನಪ್ರತಿನಿಧಿಗಳು ಸಹ ಕೈ ಜೋಡಿಸಿದ್ದು, ಟ್ರಾಫಿಕ್ ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ.

ಆದರೆ ಮಹಾರಾಷ್ಟ್ರದಲ್ಲಿ ಈಗಾಗಲೇ ಹೆಲ್ಮೆಟ್ ಬಳಕೆಯು ಕಡ್ಡಾಯವಾಗಿದ್ದು, ಜನಾಕ್ರೋಶದಿಂದಾಗಿ ಜನಪ್ರತಿನಿಧಿಗಳು ಮತ್ತು ಟ್ರಾಫಿಕ್ ಪೊಲೀಸರು ಗೊಂದಲದಲ್ಲಿ ಸಿಲುಕುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.

ಇದರಿಂದಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಪೊಲೀಸರಿಗೆ ಹೊಸ ಸೂಚನೆ ಒಂದನ್ನು ನೀಡಿದ್ದು, ಹೆಲ್ಮೆಟ್ ಹಾಕದ ಬೈಕ್ ಸವಾರರನ್ನು ತಡೆದು ಕಿರುಕುಳ ನೀಡದೆ ಇ-ಚಲನ್ ಮೂಲಕವೇ ದಂಡ ವಸೂಲಿ ಮಾಡಿ ಎಂದಿದ್ದಾರೆ.

ಇ-ಚಲನ್ ಮೂಲಕ ದಂಡವಸೂಲಿ ಮಾಡಲು ಬೇಕಾದ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುವಾಗಿ ಪೊಲೀಸ್ ಇಲಾಖೆಗೆ ಭರವಸೆ ನೀಡಿರುವ ದೇವೇಂದ್ರ ಫಡ್ನವಿಸ್ ಅವರು, ಹೆಲ್ಮೆಟ್ ಇಲ್ಲ ಎಂಬ ಕಾರಣಕ್ಕೆ ಬೈಕ್ ಸವಾರರನ್ನು ತಡೆದು ಕಿರುಕುಳ ನೀಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಹಾಗಂತ ಹೆಲ್ಮೆಟ್ ಬಳಕೆ ಮಾಡದ ಬೈಕ್ ಸವಾರರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎನ್ನುವುದು ಅರಿತಿರುವ ಫಡ್ನವಿಸ್, ಬೈಕ್ ಸವಾರರಿಗೆ ಸಮಾಧಾನ ಪಡಿಸಲು ಜಾಣ್ಮೆಯ ಕ್ರಮ ಅನುಸರಿಸಿದ್ದಾರೆ ಎನ್ನಬಹುದು.

ಒಟ್ಟಿನಲ್ಲಿ ಹೆಲ್ಮೆಟ್ ಬಳಕೆಯ ವಿಚಾರವು ಇದೀಗ ಮಹಾರಾಷ್ಟ್ರದಲ್ಲಿ ಹೊಸ ವಿವಾದವನ್ನೇ ಸೃಷ್ಠಿಸಿದ್ದು, ಹೆಲ್ಮೆಟ್ ಬಳಕೆ ಮಾಡದ ಬೈಕ್ ಸವಾರರನ್ನು ತಡೆಯಬೇಡಿ, ಅದರ ಬದಲಾಗಿ ಇ-ಚಲನ್ ಮೂಲಕ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿಗಳೇ ಆದೇಶಿಸಿದ್ದಾರೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಆದ್ರೆ ಪ್ರತಿಭಟನಾಕರರ ಬೇಡಿಕೆಗೆ ಯಾವುದೇ ಸೊಪ್ಪು ಹಾಕದ ಮಹಾರಾಷ್ಟ್ರ ಪೊಲೀಸರು ಬೈಕ್ ಸವಾರರು ಎಷ್ಟೇ ಪ್ರತಿಭಟನೆ ಮಾಡಿದರೂ ಸಹ ಕಡ್ಡಾಯ ಹೆಲ್ಮೆಟ್ ಬಳಕೆ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನ ತರುವುದಾಗಿ ಹೇಳಿಕೊಂಡಿದ್ದು, ಇದೀಗ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications








