Dwarka Expressway: ದೇಶದ ಮೊದಲ 8 ಪಥದ ಎಕ್ಸ್ಪ್ರೆಸ್ವೇ ಶೀಘ್ರ ಲೋಕಾರ್ಪಣೆ, ಹೇಗಿದೆ.. ವಿಡಿಯೋ ನೋಡಿ
ದೇಶದಲ್ಲಿ ಸಾರಿಗೆ ಸಂಪರ್ಕವನ್ನು ಮತ್ತಷ್ಟು ವೇಗಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಎಕ್ಸ್ಪ್ರೆಸ್ವೇಗಳನ್ನು ಅಭಿವೃದ್ಧಿಪದಿಸುತ್ತಿದೆ. ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಉತ್ತರ ಪೆರಿಫೆರಲ್ ರಸ್ತೆ ಎಂದು ಕರೆಯುವ ದ್ವಾರಕಾ ಎಕ್ಸ್ಪ್ರೆಸ್ವೇ (Dwarka Expressway)ಯ ಕೆಲವೊಂದು ವಿಡಿಯೋ ತುಣುಕುಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದ್ವಾರಕಾ ಎಕ್ಸ್ಪ್ರೆಸ್ವೇ 27.6 ಕಿಲೋಮೀಟರ್ ಉದ್ದದ ಹೆದ್ದಾರಿಯಾಗಿದ್ದು, ದೆಹಲಿಗೆ ಸುಲಭ ಸಂಪರ್ಕವನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದ್ದಾರೆ. ಈ ಎಕ್ಸ್ಪ್ರೆಸ್ವೇ ದೇಶದ ಮೊದಲ ಎಂಟು ಪಥದ ರಸ್ತೆಯಾಗಿದೆ. ಅದರಲ್ಲೂ ಅತಿಉದ್ದದ 3.6 ಕಿಲೋಮೀಟರ್ ನಗರ ಸುರಂಗ (urban tunnel)ವನ್ನು ಒಳಗೊಂಡಿದೆ ಎಂದು ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ಈ 8 ಪಥದ ದ್ವಾರಕಾ ಎಕ್ಸ್ಪ್ರೆಸ್ವೇ ಒಮ್ಮೆ ಪೂರ್ಣಗೊಂಡ ನಂತರ, ದೆಹಲಿ ಹಾಗೂ ಹರಿಯಾಣ ರಾಜ್ಯಗಳ ನಡುವೆ ಸಾರಿಗೆ ಸೌಕರ್ಯವನ್ನು ಸುಧಾರಿಸುತ್ತದೆ. ಹೆದ್ದಾರಿಯು ದೆಹಲಿಯ ದ್ವಾರಕಾವನ್ನು ಗುರುಗ್ರಾಮದಲ್ಲಿರುವ ಖೇರ್ಕಿ ದೌಲಾ ಟೋಲ್ ಪ್ಲಾಜಾದೊಂದಿಗೆ ಸಂಪರ್ಕಿಸುತ್ತದೆ. ಹರಿಯಾಣ ಗಡಿಯಿಂದ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡೆರಹಿತ ಸಂಪರ್ಕವನ್ನು ಕಲ್ಪಿಸಲು ಇದೇ ಎಕ್ಸ್ಪ್ರೆಸ್ವೇಯ ಸುರಂಗ ರಸ್ತೆ ನೆರವಾಗಲಿದೆ .
ಸದ್ಯ, ಸುರಂಗ ಕಾಮಗಾರಿ ಶೇಕಡ 80% ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಸಂಚಾರ ದಟ್ಟಣೆಯಲ್ಲಿ ಕಡಿಮೆಗೊಳಿಸಲು ಈ ಸುರಂಗ ಸಹಾಯಕವಾಗಲಿದ್ದು, ಗುರುಗ್ರಾಮದ ಮಾನೇಸರ್ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣದ ಅವಧಿಯನ್ನು 20 ನಿಮಿಷಗಳವರೆಗೆ ಕಡಿಮೆಗೊಳಿಸುವ ಸಾಧ್ಯತೆಯಿದೆ.

ದ್ವಾರಕಾ ಎಕ್ಸ್ಪ್ರೆಸ್ವೇಯೂ ಟನೆಲ್ ರೋಡ್, ಅಂಡರ್ಪಾಸ್, ಅಟ್ - ಗ್ರೇಡ್ ರೋಡ್, ಎಲಿವೇಟೆಡ್ ಫ್ಲೈಓವರ್ ಹಾಗೂ ಫ್ಲೈಓವರ್ ಅನ್ನು ಒಳಗೊಂಡಿದೆ. ಕರ್ನಾಟಕದಲ್ಲೂ ಎರಡು ಎಕ್ಸ್ಪ್ರೆಸ್ವೇ ನಿರ್ಮಾಣವಾಗುತ್ತಿದೆ. ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ಮುಂದಿನ ವರ್ಷದ ಆರಂಭದಲ್ಲಿ ಲೋಕಾರ್ಪಣೆಯಾಗಲಿದೆ. 262 ಕಿಮೀ ಉದ್ದದ ಹೆದ್ದಾರಿ ನಿರ್ಮಾಣದಿಂದ ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿ ಎರಡು ಗಂಟೆಗೆ ಇಳಿಯಲಿದೆ.
ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಈ ರಸ್ತೆ ನಿರ್ಮಾಣ ಮಾಡುತ್ತಿದ್ದು, ರೂ.17,000 ಕೋಟಿ ವೆಚ್ಚವಾಗಬಹುದು ಎಂದು ಹೇಳಲಾಗಿದೆ. ಸ್ವೀಡ್ ಲಿಮಿಟ್ ಅನ್ನು 120 kmph ಸೀಮಿತಗೊಳಿಸುವ ನೀರಿಕ್ಷೆ ಇರುವುದರಿಂದ ಪ್ರಯಾಣದ ಅವಧಿಯು ತುಂಬಾ ಕಡಿಮೆಯಾಗಲಿದೆ. ಪ್ರಮುಖವಾಗಿ, ನಾಲ್ಕು ಪಥದ ಹೆದ್ದಾರಿಯಾಗಿದ್ದು, ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡು ನಡುವೆ ಹಾದು ಹೋಗುತ್ತದೆ.
ಬೆಂಗಳೂರು ಪುಣೆ ನಡುವೆ ಹೊಸ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭರದ ಸಿದ್ಧತೆ ನಡೆಸುತ್ತಿದೆ. ಕರ್ನಾಟಕದ 9 ಜಿಲ್ಲೆಗಳು (ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ) ಮತ್ತು ಮಹಾರಾಷ್ಟ್ರದ 3 ಜಿಲ್ಲೆಯಲ್ಲಿ (ಪುಣೆ, ಸತಾರ ಸಾಂಗ್ಲಿ) ಈ ಹೆದ್ದಾರಿ ಹಾದುಹೋಗಲಿದೆ. 719.26 ಕಿಲೋಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಇದಾಗಿದ್ದು, ಕೇವಲ 7 ಗಂಟೆ ಪ್ರಯಾಣದ ಅವಧಿ ಇರಲಿದೆ.
ಬೆಂಗಳೂರು ಪುಣೆ ಎಕ್ಸ್ಪ್ರೆಸ್ವೇ 6 ಪಥದ ಹೆದ್ದಾರಿಯಾಗಿದ್ದು, ದಾಬಸ್ ಪೇಟೆ - ದೊಡ್ಡಬಳ್ಳಾಪುರ ಮಧ್ಯೆಯಿರುವ ಹುಲಿಕುಂಟೆ ಸಮೀಪ ಆರಂಭವಾಗಿ, ಮಹಾರಾಷ್ಟ್ರದ ಶಿವರೆ ಬಳಿ ಕೊನೆಗೊಳ್ಳಲಿದೆ. ರೂ.55,072.54 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹೆದ್ದಾರಿ ನಿರ್ಮಾಣ ದಿಂದ ಇವೆರೆಡು ರಾಜ್ಯಗಳ ನಡುವೆ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳು ಅಭಿವೃದ್ಧಿಯಾಗಲಿವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications