ಸರ್ಕಾರಿ ಕಾರಿನೊಂದಿಗೆ ಇನ್ಸ್ಟಾಗ್ರಾಂನಲ್ಲಿ ಪಬ್ಲಿಕ್ ಸ್ಟಂಟ್ : IAS ಅಧಿಕಾರಿ ಚುನಾವಣಾ ಕರ್ತವ್ಯದಿಂದ ವಜಾ
ಚುನಾವಣಾ ಕೆಲಸಕ್ಕೆ ನೀಡಿದ್ದ ಕಾರಿನೊಂದಿಗೆ ಫೋಟೋ ತೆಗೆದು ಪಬ್ಲಿಕ್ ಸ್ಟಂಟ್ ಮಾಡಿದ್ದಾರೆ ಎಂಬ ಕಾರಣಕ್ಕೆ ಐಎಸ್ ಅಧಿಕಾರಿಯೊಬ್ಬರನ್ನು ಚುನಾವಣಾ ಕೆಲಸದಿಂದ ವಜಾ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತ್ ಮುಂಬರುವ ಚುನಾವಣೆಗೆ ಭರದಿಂದ ಸಿದ್ದತೆಗಳು ಸಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಮುಂದಿನ ತಿಂಗಳು ಅಂದರೆ ಡಿಸೆಂಬರ್ 1 ರಿಂದ ಡಿಸೆಂಬರ್ 5 ರವರೆಗೆ ಹೊಸ ಸರ್ಕಾರವನ್ನುಆಯ್ಕೆ ಮಾಡುವ ಚುನಾವಣೆ ನಡೆಯಲಿದೆ.

ಇದಕ್ಕೆ ಮುಂಚಿತವಾಗಿ ಆಯಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಚುನಾವಣಾ ಆಯೋಗವು ಅಧಿಕಾರಿಗಳನ್ನು ನೇಮಿಸಲು ಆರಂಭಿಸಿದೆ. ಹೀಗೆ ಆಯ್ಕೆಯಾದ ಅಧಿಕಾರಿಗಳಲ್ಲಿ, ಅಭಿಷೇಕ್ ಸಿಂಗ್ ಎಂಬ ಐಎಎಸ್ ಅಧಿಕಾರಿಯೊಬ್ಬ ಅನುಮತಿಯಿಲ್ಲದೆ ಸರ್ಕಾರಿ ವಾಹನದೊಂದಿಗೆ ಪೋಸ್ ಕೊಡುತ್ತ ಇರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಕ್ಕಾಗಿ ಚುನಾವಣಾ ಕೆಲಸದಿಂದ ವಜಾ ಆಗಿದ್ದಾರೆ. ಹೌದು, ನಂಬಲು ಕಷ್ಟವಾದರೂ ಈ ಘಟನೆ ಗುಜರಾತ್ನಲ್ಲಿ ನಡೆದಿದೆ.
ಈ ಘಟನೆಯಿಂದಾಗಿ ಸರ್ಕಾರಿ ವಾಹನಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ ಕೊಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿದ್ದು, ಇನ್ನು ಮುಂದೆ ಈ ರೀತಿ ಅನುಮತಿಯಿಲ್ಲದೆ ಪೋಸ್ಟ್ ಮಾಡುವುದಕ್ಕೂ ಮೊದಲು ಯೋಚಿಸುವಂತೆ ಮಾಡಿದೆ. ಅಭಿಷೇಕ್ ಸಿಂಗ್ನನ್ನು ಗುಜರಾತ್ ಚುನಾಣೆಯಲ್ಲಿ ಮೇಲ್ವಿಚಾರಕ ಅಧಿಕಾರಿಯಾಗಿ ಚುನಾವಣಾ ಆಯೋಗವು ನೇಮಕ ಮಾಡಲಾಗಿತ್ತು. ಈ ಕುರಿತಾಗಿ ಅವರು ಹಾಕಿದ ಪೋಸ್ಟ್ ಗಮನಿಸಿದ ಆಯೋಗವು ಚುನಾವಣಾ ಜವಾಬ್ದಾರಿಯಿಂದ ವಜಾ ಮಾಡಿದೆ.
ಇಲ್ಲಿ ಆಗಿದ್ದಾದರೂ ಏನು?
ಅಹಮದಾಬಾದ್ನ ಬಾಪುನಗರ್ ಮತ್ತು ಅಸ್ವರಾ ಚುನಾವಣಾ ಕ್ಷೇತ್ರದಲ್ಲಿ ಚುನಾವಣಾ ಮೇಲ್ವಿಚಾರಕ ಅಧಿಕಾರಿಯಾಗಿ ನೇಮಕವಾಗಿದ್ದ ಅಭಿಷೇಕ್ ಸಿಂಗ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕರ್ತವ್ಯ ನಿರ್ವಹಿಸಲು ಆಯೋಗವು ನೀಡಿದ್ದ ಟೊಯೋಟಾ ಇನೋವಾ ಕ್ರಿಸ್ಟಾ ಕಾರ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ನಲ್ಲಿ "Joined Ahmedabad as Observer for Gujarat Elections #Election2022 #GujaratElections2022 #NoVoterTobeleftBehindNovember." ಎಂಬ ಶೀರ್ಷಿಕೆ ನೀಡಿದ್ದಾರೆ.
ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಒಟ್ಟು ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದು ಇನ್ನೊಂದು ಫೋಟೋದಲ್ಲಿ ಅವರ ಜೊತೆಗೆ ಇತರ ಮೂವರು ಅಧಿಕಾರಿಗಳು ಮತ್ತು ಒಬ್ಬ ಗನ್ಮ್ಯಾನ್ ಪೋಸ್ ನೀಡಿದ್ದಾರೆ. ಈ ಪೋಸ್ಟ್ ಗಮನಿಸಿದರೆ ಸುಮಾರು 18 ಸಾವಿರಕ್ಕೂ ಅಧಿಕ ಲೈಕ್ಗಳು ಬಂದಿರುವುದನ್ನು ಕಾಣಬಹುದಾಗಿದೆ. ಅನುಮತಿಯಿಲ್ಲದೇ ಫೋಟೋ ತೆಗೆದು ಪೋಸ್ಟ್ ಮಾಡಿದಕ್ಕಾಗಿ ಅಧಿಕಾರಿಗೆ ಚುನಾವಣಾ ಆಯೋಗವು ಈ ಕ್ರಮ ಕೈಗೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದನ್ನು ಗಮನಿಸಿದ ಚುನಾವಣಾ ಆಯೋಗವು ಕೂಡಲೇ ಅಭಿಷೇಕ್ ಸಿಂಗ್ರ ಮೇಲೆ ಕ್ರಮ ಕೈಗೊಂಡಿದೆ. ಚುನಾವಣಾ ಮೇಲ್ವಿಚಾರಕರಾಗಿ ನೇಮಕಗೊಂಡಿದ್ದ ಅಧಿಕಾರಿ ಪಬ್ಲಿಕ್ ಸ್ಟಂಟ್ಗಾಗಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದು, ಆಯೋಗವು ಈ ಕೂಡಲೇ ಚುನಾವಣಾ ಮೇಲ್ವಿಚಾರಕ ಜವಾಬ್ದಾರಿಯಿಂದ ವಜಾ ಮಾಡಲಾಗಿದೆ, ಎಂದು ಆದೇಶವನ್ನು ಹೊರಡಿಸಿದೆ.
ಅಷ್ಟು ಮಾತ್ರವಲ್ಲದೇ ಮುಂದಿನ ಆದೇಶ ಬರುವವರೆಗೂ ಅಭಿಷೇಕ್ ಸಿಂಗ್ ಯಾವುದೇ ಚುನಾವಣಾ ಸಂಭಂಧಿತ ಕೆಲಸಗಳಿಂದ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ. ಇನ್ನು ಆಯೋಗವು ಅವರ ಬಳಿ ಕೂಡಲೇ ಚುನಾವಣಾ ಕ್ಷೇತ್ರವನ್ನು ತೊರೆದು ಉತ್ತರ ಪ್ರದೇಶದಲ್ಲಿರುವ ಅವರ ಕರ್ತವ್ಯ ನಿರತ ಕೇಡರ್ಗೆ ಹಾಜರಾಗಲು ಸೂಚಿಸಿದೆ. ಇದರ ಜೊತೆಗೆ ಅವರಿಗೆ ನೀಡಲಾಗಿದ್ದ ಟೋಯೋಟಾ ಇನೋವಾ ಕ್ರಿಸ್ಟಾ ಜೊತೆಗೆ ಇತರ ಎಲ್ಲಾ ಸರ್ಕಾರಿ ಸೌಕರ್ಯಗಳನ್ನು ಸಹ ವಾಪಸ್ ಪಡೆಯಲಾಗಿದೆ.
ವಜಾಗೊಂಡಿರುವ ಅಭಿಷೇಕ್ ಸಿಂಗ್ ಬದಲಾಗಿ ಅವರು ಹೊತ್ತುಕೊಂಡಿದ್ದ ಜವಾಬ್ದಾರಿಯನ್ನು ಐಎಸ್ ಅಧಿಕಾರಿ ಕ್ರಿಶಾನ್ ಬಾಜ್ಪಾಯ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಗುಜರಾತ್ನ ಪ್ರಮುಖ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ ಸಿಂಗ್, ಚುನಾವಣಾ ಆಯೋಗ ಕೈಗೊಂಡಿರುವ ಕ್ರಮವನ್ನು ನಾನು ಗೌರವಿಸುತ್ತೇನೆ. ಆದರೆ ಪೋಸ್ಟ್ನಲ್ಲಿ ಯಾವುದೇ ತಪ್ಪು ಮಾಡಿರುವುದಾಗಿ ನನಗೆ ಅನಿಸುತ್ತಿಲ್ಲ. ಜನರ ಹಣದಿಂದ ಕೊಂಡಿರುವ ಕಾರಿನೊಂದಿಗೆ ನಾನು ಫೋಟೋ ಕ್ಲಿಕ್ಕಿಸಿಕೊಂಡು, ಅಧಿಕಾರಿಗಳೊಂದಿಗೆ ಕರ್ತವ್ಯಕ್ಕೆ ಹಾಜರಾಗುವ ಫೋಟೋವನ್ನು ಪೋಸ್ಟ್ ಮಾಡಿದ್ದೇನೆ. ಇದರ ಹಿಂದೆ ಪಬ್ಲಿಕ್ ಸ್ಟಂಟ್ನ ಯಾವುದೇ ಉದ್ದೇಶವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಸರ್ಕಾರಿ ಸೌಲಭ್ಯಗಳನ್ನು ಶೋಕಿಗಾಗಿ ಮತ್ತು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಉಪಯೋಗಿಸುವ ಅಧಿಕಾರಿಗಳ ಮೇಲೆ ಇದೇ ರೀತಿ ಕ್ರಮ ಕೈಗೊಂಡರೆ, ಸರ್ಕಾರಿ ಸವಲತ್ತುಗಳ ದುರುಪಯೋಗ ನಿಲ್ಲುತ್ತದೆ ಮತ್ತು ಜನರ ಅಭಿವೃದ್ಧಿ ಕೊಂಚ ಮಟ್ಟಿಗೆ ಸುಧಾರಿಸುತ್ತದೆ.


Click it and Unblock the Notifications