Police procession: ಟಾಟಾ ಸಫಾರಿಯಲ್ಲಿ ಪೊಲೀಸ್ ಅಧಿಕಾರಿ ಮೆರವಣಿಗೆ.. ಮುಂದೇನಾಯ್ತು ಗೊತ್ತಾ?
ಸಾರ್ವಜನಿಕ ರಸ್ತೆಗಳಲ್ಲಿ ವಿವಿಧ ಕಾರಣಗಳಿಗೆ ಮೆರವಣಿಗೆ ನಡೆಸಿ, ಸಾಮಾನ್ಯ ಜನರಿಗೆ ತೊಂದರೆ ನೀಡುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಇದರಿಂದ ಸಂಚಾರ ದಟ್ಟಣೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇದೀಗ, ಛತ್ತೀಸ್ಗಢದಲ್ಲಿ ಅಲಂಕೃತ ಟಾಟಾ ಸಫಾರಿಯಲ್ಲಿ ಬೀಳ್ಕೊಡುಗೆ ಭಾಗವಾಗಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿ ಅಮಾನತುಗೊಂಡಿದ್ದಾರೆ.
ಇಲ್ಲಿನ ರಾಜನಂದಗಾಂವ್ನ ಡೊಂಗರ್ಗಢ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಂದ್ರ ಸ್ವರ್ಣಕರ್, ಬಿಲಾಸ್ಪುರ ಎಂಬಲ್ಲಿಗೆ ವರ್ಗಾವಣೆಯಾಗಿದ್ದರು. ಅವರ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ, ಟಾಟಾ ಸಫಾರಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದನ್ನು ಆಧರಿಸಿ, ಹಿರಿಯ ಅಧಿಕಾರಿಗಳು ಇನ್ಸ್ಪೆಕ್ಟರ್ ಸುರೇಂದ್ರ ಸ್ವರ್ಣಕರ್ ವಿರುದ್ಧ ಶಿಸ್ತು ಕ್ರಮ ಕೈಗೆಗೊಂಡಿದ್ದಾರೆ.

ಸದ್ಯ, ಎಲ್ಲೆಡೆ ಹರಿದಾಡುತ್ತಿರುವ ಮೆರವಣಿಗೆ ವಿಡಿಯೋವನ್ನು ಪತ್ರಕರ್ತ ಎಜಾಜ್ ಕೈಸರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಇನ್ಸ್ಪೆಕ್ಟರ್ರನ್ನು ಅನುಚಿತ ನಡವಳಿಕೆಯ ಕಾರಣ, ಐಜಿ ಅವರು ಸಸ್ಪೆಂಡ್ ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಿಧಾನವಾಗಿ ಚಲಿಸುತ್ತಿರುವ ಟಾಟಾ ಸಫಾರಿ ಎಸ್ಯುವಿಯ ಸನ್ರೂಫ್ ಹೊರಗೆ ಇನ್ಸ್ಪೆಕ್ಟರ್ ಸುರೇಂದ್ರ ಸ್ವರ್ಣಕರ್ ನಿಂತಿರುವುದನ್ನು ಕಾಣಬಹುದು. ಜೊತೆಗೆ ತಮಟೆ ಸೌಂಡ್ಗೆ ಡ್ಯಾನ್ಸ್ ಕೂಡ ಜೋರಾಗಿಯೇ ಇದೆ.
ಇನ್ಸ್ಪೆಕ್ಟರ್ ಸುರೇಂದ್ರಗೆ ಬಿಲಾಸ್ಪುರ ಪೊಲೀಸ್ ಠಾಣೆಗೆ ಅಧಿಕಾರ ಸ್ವೀಕರಿಸಲು ಹೋದಾಗ, ಅಲ್ಲಿನ ಐಜಿ ಬದ್ರಿ ನಾರಾಯಣ ಮೀನಾ, ಸಿನಿಮೀಯ ಶೈಲಿಯಲ್ಲಿಯೇ ಅಮಾನತ್ತು ಪತ್ರ ನೀಡಿದ್ದಾರೆ. ಎಲ್ಲಿಯಾದ್ರೂ ಪೊಲೀಸರು, ವೃತ್ತಿಯ ಭಾಗವಾಗಿ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗವಾಗುವುದು ಸಹಜ. ಇದನ್ನು ಸಾರ್ವಜನಿಕ ರಸ್ತೆಯಲ್ಲಿ ಸಂಭ್ರಮಿಸುವುದು ಯಾವುದೇ ರೀತಿಯಿಂದಲೂ ಸರಿಯಲ್ಲ. ಅಲ್ಲದೆ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಇತರೆ ಪೋಲಿಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿಯಿಲ್ಲ.
ಇನ್ಸ್ಪೆಕ್ಟರ್ ಸುರೇಂದ್ರ ಈ ಮೊದಲು ಬಿಲಾಸ್ಪುರ ಪೊಲೀಸ್ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ಹಲವು ಆರೋಪಗಳು ಕೇಳಿಬಂದ ಹಿನ್ನೆಲೆ, ಡೊಂಗರ್ಗಢ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಇಲ್ಲಿ ಬಂದು ಕೇವಲ 11 ತಿಂಗಳು ಮಾತ್ರ ಕಳೆದಿದ್ದವು. ಮತ್ತೆ ಅಲ್ಲಿನ ಗೃಹ ಇಲಾಖೆಗೆ ಬಿಲಾಸ್ಪುರಗೆ ವರ್ಗಾವಣೆ ಮಾಡಿದೆ. ಮೂಲಗಳ ಪ್ರಕಾರ, ಇನ್ಸ್ಪೆಕ್ಟರ್ ಸುರೇಂದ್ರ ಸಾಕಷ್ಟು ರಾಜಕೀಯ ಪ್ರಭಾವವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.
ಕಾರುಗಳಲ್ಲಿ ಸನ್ರೂಫ್ ಬಳಕೆ ಏಕೆ ಮಾಡಲಾಗುತ್ತದೆ ಎನ್ನುವುದೇ ಹಲವರಿಗೆ ತಿಳಿದಿಲ್ಲ. ಒಳ್ಳೆ ಗಾಳಿ ಹಾಗೂ ಸೂರ್ಯನ ಶಾಖ ಪಡೆಯಲು ಇದನ್ನು ನೀಡಲಾಗುತ್ತದೆ. ಆದರೆ, ದುರ್ಬಳಕೆ ಮಾಡಿಕೊಳ್ಳುವರೇ ಜಾಸ್ತಿ. ಕೆಲವರು ಲಾಂಗ್ ಡ್ರೈವ್ ಹೋದಾಗ ಅದರಿಂದ ಹೊರಬಂದು ನಿಂತುಕೊಳ್ಳುತ್ತಾರೆ. ಇದು ಎಷ್ಟು ಅಪಾಯಕಾರಿಯೆಂದು ಅವರಿಗೆ ಗೊತ್ತಿರುವುದೇ ಇಲ್ಲ. ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ರೆ, ರಸ್ತೆಗೆ ಬಂದು ಬೀಳಬೇಕಾಗುತ್ತದೆ. ಜೊತೆಗೆ ಗಂಭೀರವಾಗಿ ಗಾಯಗೊಳ್ಳಬಹುದು.
ದೊಡ್ಡ, ದೊಡ್ಡ ನಗರಗಳಲ್ಲಿ ಸನ್ರೂಫ್ ಹೊರಗೆ ನಿಂತಿರುವುದನ್ನು ಕಂಡರೆ, ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸುತ್ತಾರೆ. ಆದರೆ, ಛತ್ತೀಸ್ಗಢದಲ್ಲಿ ಪೊಲೀಸರೇ ನಿಯಮ ಮೀರಿದ್ದು, ಪರಿಣಾಮ ಇನ್ಸ್ಪೆಕ್ಟರ್ ಅಮಾನತುಗೊಂಡಿದ್ದಾರೆ. ಏನೇ ಆಗಲಿ ಸಾಮಾನ್ಯ ಜನರಿಗೆ ಬುದ್ದಿಹೇಳಬೇಕಿದ್ದ ಪೊಲೀಸರೇ ಸಾರ್ವಜನಿಕ ರಸ್ತೆಯಲ್ಲಿ ಈ ರೀತಿ ಮಾಡಿರುವುದು ಎಷ್ಟರಮಟ್ಟಿಗೆ ಸರಿ. ಇನ್ಮುಂದೆಯಾದರೂ ಇಂತಹ ಘಟನೆಗಳು ಮರುಕಳಿಸದಿರಲಿ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications