ನಾಯಿಗೆ ನರಕ ತೋರಿದ ವೈದ್ಯನ ವಿರುದ್ಧ ಎಫ್ಐಆರ್: ಕಾರಿನ ವೇಗಕ್ಕೆ ಮೂಕ ಜೀವಿಯ ನರಳಾಟ
ವ್ಯಕ್ತಿಯೊಬ್ಬ ನಾಯಿಯನ್ನು ಕಾರಿಗೆ ಕಟ್ಟಿಕೊಂಡು ರಸ್ತೆಯುದ್ದಕ್ಕೂ ಎಳೆದೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋದಲ್ಲಿ ಕಾರನ್ನು ಓಡಿಸಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ನಾಯಿಯು ವಾಹನದ ವೇಗಕ್ಕೆ ತಾಳಲಾರದೆ ಹರಸಾಹಸ ಪಡುತ್ತಾ ಅಕ್ಕಪಕ್ಕಕ್ಕೆ ತೂಗಾಡುತ್ತಿರುವ ದೃಶ್ಯ ಎಲ್ಲರ ಮನಕಲುಕುವಂತೆ ಮಾಡಿದೆ. ವಾಹನದ ವೇಗಕ್ಕೆ ತಕ್ಕಂತೆ ನಾಯಿಗೆ ಓಡಲು ಸಾಧ್ಯವಾಗದಿದ್ದರೂ ಕುತ್ತಿಗೆಗೆ ಕಟ್ಟಿರುವ ಹಗ್ಗ ನಾಯಿಯನ್ನು ಬಲವಂತವಾಗಿ ಎಳೆದೊಯ್ಯುತ್ತದೆ. ಇದನ್ನು ಅಕ್ಕಪಕ್ಕದ ಸವಾರರು ವಿಡಿಯೋ ಮಾಡಿದ್ದಾರೆ.

ಈ ದುಷ್ಕೃತ್ಯವೆಸಗಿದವನು ಡಾ.ರಜನೀಶ್ ಗ್ವಾಲಾ ಎಂದು ತಿಳಿದುಬಂದಿದೆ. ಈತ ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಸರಾಂತ ಪ್ಲಾಸ್ಟಿಕ್ ಸರ್ಜನ್ ಆಗಿದ್ದಾನೆ. ಉದ್ದೇಶಿತ ವಿಡಿಯೋದ ಪ್ರಕಾರ, ಗ್ವಾಲಾ ಕಾರನ್ನು ಓಡಿಸುತ್ತಿದ್ದಾಗ ಕೆಲವು ಪ್ರಯಾಣಿಕರು ಅವನ ಕೃತ್ಯವನ್ನು ಚಿತ್ರೀಕರಿಸಿ, ಬಳಿಕ ಆತನ ಕಾರನ್ನು ಅಡ್ಡಗಟ್ಟಿ ನಾಯಿಯನ್ನು ರಕ್ಷಿಸಿದ್ದಾರೆ.
The person who did this he is a Dr. Rajneesh Gwala and dog legs have multiple fracture and this incident is of Shastri Nagar Jodhpur please spread this vidro so that CP_Jodhpur should take action against him and cancel his licence WHO TheJohnAbraham Manekagandhibjp pic.twitter.com/leNVxklx1N
— Dog Home Foundation (DHFJodhpur) September 18, 2022
ಬಳಿಕ ಈ ಕುರಿತು ಪೊಲೀಸರ ಗಮನಕ್ಕೆ ತಂದಿದ್ದು, ಆರಂಭದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಅನಗತ್ಯವಾಗಿ ನಾಯಿಯಿದ್ದ ಆಂಬ್ಯುಲೆನ್ಸ್ ಅನ್ನು ಪೊಲೀಸ್ ಠಾಣೆಗೆ ಕೊಂಡೊಯ್ದರು. ಗಾಯಗೊಂಡ ನಾಯಿಗೆ ಚಿಕಿತ್ಸೆ ನೀಡಲು ಅದನ್ನು ಬಿಡುಗಡೆ ಮಾಡುವಂತೆ ನಾವು ವಿನಂತಿಸಿದರೂ ಅದನ್ನು ಒಂದು ಗಂಟೆಗೂ ಹೆಚ್ಚು ಕಾಲ ಇರಿಸಿಕೊಂಡಿದ್ದರು.

ಪೊಲೀಸರು ವೈದ್ಯರ ಪರವಾಗಿ ವರ್ತಿಸಿದ್ದು, ಎರಡು ಗಂಟೆಗಳ ನಂತರವೇ ಎಫ್ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದರು. ನಾಯಿಯ ಒಂದು ಕಾಲಿಗೆ ಮುರಿತ ಮತ್ತು ಇನ್ನೊಂದು ಕಾಲಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಇನ್ನು ಕುತ್ತಿಗೆಯ ಮೇಲೆ ಮೂಗೇಟುಗಳಾಗಿವೆ ಎಂದು ಡಾಗ್ ಹೋಮ್ ಫೌಂಡೇಶನ್ನ ಕೇರ್ಟೇಕರ್ ಭಾನುವಾರ ತಿಳಿಸಿದ್ದಾರೆ.

ಡಾ.ರಜನೀಶ್ ಗ್ವಾಲಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 428 (ಪ್ರಾಣಿಗಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ದುಷ್ಕೃತ್ಯ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಾಸ್ತ್ರಿನಗರ ಎಸ್ಎಚ್ಒ ಜೋಗೇಂದ್ರ ಸಿಂಗ್ ಹೇಳಿದ್ದಾರೆ.

ಡಾ.ರಜನೀಶ್ ಗ್ವಾಲಾ ಕರೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. 24 ಗಂಟೆಗಳ ಒಳಗೆ ಉತ್ತರ ನೀಡುವಂತೆ ಗ್ವಾಲಾ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಎಸ್ಎನ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಮತ್ತು ನಿಯಂತ್ರಕ ಡಾ.ದಿಲೀಪ್ ಕಚವಾಹಾ ತಿಳಿಸಿದ್ದಾರೆ.

ವೈದ್ಯ ರಜನೀಶ್ ಗ್ವಾಲಾ ಏಕೆ ಇಂತಹ ಕೃತ್ಯವೆಸಗಿದ್ದಾನೆ ಎಂಬುದು ತಿಳಿದುಬಂದಿಲ್ಲ. ಆದರೆ ಇದರ ಹಿಂದೆ ಏನೋ ಕಾರಣವಿದ್ದೇ ಇರುತ್ತದೆ. ಇಲ್ಲದಿದ್ದರೇ ಅವನು ಸೈಕೋ ಆಗಿರುತ್ತಾನೆ ಎಂದು ನೆಟ್ಟಿಗರು ವೈದ್ಯನ ವಿರುದ್ದ ಕಿಡಿಕಾರುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಎಸಗುವವರನ್ನು ಮುಲಾಜಿಲ್ಲದೇ ಜೈಲಿಗಟ್ಟಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದೊಂದೆ ಅಲ್ಲದೇ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬದುಕಿರುವ ನಾಯಿಯನ್ನು ಕುತ್ತಿಗೆವರೆಗು ಹೂತುಹಾಕಿ ಅದರ ತಲೆಯ ಮೇಲೆ ಬೈಕ್ ಓಡಿಸಿ ವಿಕೃತಿ ಮೆರೆಯುವ ಯುವಕರ ವಿಡಿಯೋ ಇತ್ತೀಚಗೆ ಹೊರಬಂದಿತ್ತು. ಇದು ಕೂಡ ವೈರಲ್ ಆಗಿ ಯುವಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು.

ಕೇವಲ ನಾಯಿಗಳಷ್ಟೇ ಅಲ್ಲದೇ ಹಸು, ಕತ್ತೆ, ಎಮ್ಮೆ, ಕುದುರೆ ಸೇರಿದಂತೆ ಹಲವು ಪ್ರಾಣಿಗಳಿಗೆ ಹಿಂಸೆ ನೀಡಿರುವ ಹಲವು ಉದಾಹರಣೆಗಳಿವೆ. ಹಸುವೊಂದಕ್ಕೆ ತನ್ನ ಸಾಮರ್ಥ್ಯಕ್ಕೂ ಮೀರಿದ ಭಾರವನ್ನು ಹಾಕಿ ಎಳೆಸಿದ್ದು, ಭಾರವನ್ನು ಎಳೆಯಲಾರದೇ ರಸ್ತೆ ಮಧ್ಯೆ ಜೀವ ಕಳೆದುಕೊಂಡಿತ್ತು. ಕತ್ತೆಯೊಂದನ್ನು ಮನಬಂದಂತೆ ಕಾಲಿನಲ್ಲಿ ಒದೆಯುವ ಯುವಕನ ಕಾಲನ್ನು ಕಚ್ಚಿ ಕತ್ತೆ ಬಹುದೂರ ಎಳೆದೊಯ್ದಿತ್ತು.

ಹಾಗೆಯೇ ಕುದುರೆ ಸವಾರಿ ಮಾಡುತ್ತಾ ಇನ್ನಷ್ಟು ವೇಗ ಹೆಚ್ಚಿಸಲು ಮುಳ್ಳುಗಳಿರುವ ಕೋಲಿನಿಂದ ಕುದುರೆಯನ್ನು ಹೊಡೆಯುವ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿತ್ತು. ಹೀಗೆ ಹಲವು ಪ್ರಕರಣಗಳು ಅಲ್ಲಲ್ಲಿ ಕಾಣಿಸಕೊಳ್ಳುತ್ತಲೇ ಇವೆ. ಇಂತಹ ಕೆಟ್ಟ ಮನಃಸ್ಥಿತಿ ಒಹೊಂದಿರುವವರ ವಿರುದ್ಧ ಕ್ರಮ ಕೈಗೊಂಡರು ಪದೇ ಪದೇ ಇಂತಹ ಘಟನೆಗಳು ವರದಿಯಾಗುತ್ತಲೇ ಇವೆ.

ಇದೀಗ ನಾಯಿಯನ್ನು ಕಾರಿಗೆ ಕಟ್ಟಿಕೊಂಡು ಎಳೆದೊಯ್ದ ಡಾಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆತ ಮತ್ತೊಮ್ಮೆ ಇಂತಹ ಕೃತ್ಯ ಎಸಗಬಾರದು ಹಾಗೂ ಮತ್ಯಾರು ಇಂತಹ ಕೃತ್ಯಗಳಿಗೆ ಮುಂದಾಗದಂತೆ ನ್ಯಾಯಾಲಯ ಸೂಕ್ತ ಶಿಕ್ಷೆಯನ್ನು ವಿಧಿಸಬೇಕಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಪ್ರಾಣಿ ಹಿಂಸೆ ಮಾಡುವವರು ವಿಕೃತ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಇವರಿಗೆ ಯಾವುದೇ ಧಯೆ ಇರುವುದಿಲ್ಲ, ಹಾಗಾಗಿಯೇ ಮನಬಂದಂತೆ ಪ್ರಾಣಿಗಳನ್ನು ನಡೆಸಿಕೊಳ್ಳುತ್ತಾರೆ. ಇಂತಹ ವಿಕೃತರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಕಮೆಂಟ್ನಲ್ಲಿ ತಿಳಿಸಿ. ಅಲ್ಲದೇ ಇಂತಹ ಘಟನೆಗಳು ಕಾಣಿಸಿಕೊಂಡಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ.


Click it and Unblock the Notifications