ಮಾನವೀಯತೆಯೇ ಇಲ್ವಾ: ಬೆಂಗಳೂರು ಏರ್ಪೋರ್ಟ್ ಪಾರ್ಕಿಂಗ್ನಲ್ಲಿ ಕಾರಿನಲ್ಲಿ ನಾಯಿ ಕೂಡಿಹಾಕಿದ.. ರಕ್ತಸ್ರಾವ!
ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಸಾಕುನಾಯಿಯನ್ನು ಕೂಡಿಹಾಕಿ, ವ್ಯಕ್ತಿಯೊಬ್ಬ ಕೊಂಚವು ಮಾನವೀಯತೆ ಇಲ್ಲದೆ ವರ್ತಿಸಿದ್ದಾನೆ. ಈ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ತೀವ್ರವಾಗಿ ನಿತ್ರಾಣಗೊಂಡಿದ್ದ ನಾಯಿಯನ್ನು ಸಿಐಎಸ್ಎಫ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಕಸ್ತೂರಿ ನಗರ ನಿವಾಸಿ ವಿಕ್ರಮ್ ರಾಮದಾಸ್ ಲಿಂಗೇಶ್ವರ್ (41) ಈ ಕೃತ್ಯವೆಸಗಿದ ವ್ಯಕ್ತಿಯಾಗಿದ್ದಾನೆ. ಮುಂಬೈ ಮೂಲಕ ಕೊಯಮತ್ತೂರಿಗೆ ರಾತ್ರಿ 8.50ಕ್ಕೆ ಹೊರಡುವ ವಿಮಾನದ ಟಿಕೆಟ್ ಬುಕ್ ಮಾಡಿದ್ದ ಆ ವ್ಯಕ್ತಿ, ಅಂದು ಮಧ್ಯಾಹ್ನ 3.52ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ನಲ್ಲಿ ಕಾರನ್ನು ಬಿಟ್ಟು, ಅದರಲ್ಲಿ ತನ್ನ ಸಾಕುನಾಯಿಯನ್ನು ಕೂಡಿಹಾಕಿ ತೆರಳಿದ್ದಾನೆ.

ಅದೇ ದಿನ 5.45ರ ಸುಮಾರಿಗೆ ಗಸ್ತಿನಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತೆ ಪಡೆ (CISF)ಯ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕಾರಿನೊಳಗೆ ನಾಯಿ ಬೊಗಳುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಕಾರ್ಯಪೃವೃತರಾದ ಸಬ್ಇನ್ಸ್ಪೆಕ್ಟರ್ ಬಿ.ಕೆ.ಮುನಿ ಹಾಗೂ ಅವರ ಸಹೋದ್ಯೋಗಿಗಳು ಕಾರಿನ ಗಾಜು ಓಡಿದು, ತೀವ್ರವಾಗಿ, ಅಸ್ವಸ್ಥಗೊಂಡಿದ್ದ ನಾಯಿಯನ್ನು ರಕ್ಷಿಸಿದ್ದು, ಅದಾಗಲೇ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಆ ಬಳಿಕ, ನಿತ್ರಾಣಗೊಂಡಿದ್ದ ನಾಯಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಚಾರ್ಲಿ ಅನಿಮಲ್ ರೆಸ್ಕ್ಯೂ ಎಂಬ ಎನ್ಜಿಒವನ್ನು ಸಿಐಎಸ್ಎಫ್ ಸಿಬ್ಬಂದಿ ಸಂಪರ್ಕಿಸಿದ್ದು, ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ವಿಮಾನ ನಿಲ್ದಾಣದ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಈ ಕೃತ್ಯ ವೆಸಗಿದ ರಾಮದಾಸ್ ಲಿಂಗೇಶ್ವರ್ ನನ್ನು ಪತ್ತೆ ಮಾಡಿದ್ದಾರೆ.
ಆತನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ಐಪಿಸಿ 429 (ಪ್ರಾಣಿಗಳನ್ನು ಕೊಲ್ಲುವುದು ಮತ್ತು ವಿಕಲಾಂಗಗೊಳಿಸುವುದು) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಆದರೆ, ಘಟನೆಗೆ ಕಾರಣವೇನೆಂಬುದು ಈವರೆಗೆ ತಿಳಿದುಬಂದಿಲ್ಲ.
ನಾಯಿಗೆ ಚಿಕಿತ್ಸೆ ಮುಂದುವರಿದಿದ್ದು, ಅದು ಚೇತರಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು, ಗೊತ್ತಿಲ್ಲದೇ ಕಾರಿನೊಳಗೆ ಬಹುತೇಕ ವೃದ್ದರು ಹಾಗೂ ಮಕ್ಕಳು ಸಿಲುಕಿಕೊಳ್ಳುತ್ತಾರೆ. ಆಗ ಯಾವುದೇ ವ್ಯಕ್ತಿ, ಈ ಉಪಾಯಗಳನ್ನು ಮಾಡಿ, ಸುಲಭವಾಗಿ ಅಪಾಯದಿಂದ ಪಾರಾಗಬಹುದು. ಎಲ್ಲದಕ್ಕಿಂತ ಮೊದಲು ಮಾಡಬೇಕಾದ ಕೆಲಸವೆಂದರೆ, ಕಾರಿನ ಪವರ್ ವಿಂಡೋವನ್ನು ಪರಿಶೀಲಿಸಿ. ಅದರ ಬಟನ್ ಒತ್ತಿ ಹೊರಬರಬಹುದು.
ಕೆಲವು ಸಂದರ್ಭದಲ್ಲಿ ಕಾರಿನ ಬಾಗಿಲು ಆಟೋ ಲಾಕ್ ಆಗುತ್ತವೆ. ಆ ವೇಳೆಯಲ್ಲಿ ಹಾರ್ನ್ ಮಾಡಿ, ಸಮೀಪದಲ್ಲಿರುವ ಜನರ ಗಮನವನ್ನು ಸೆಳೆಯಬಹುದು. ಇದಿಷ್ಟೇ ಅಲ್ಲದೆ, ಕಾರಿನ ಕಿಟಕಿ ಗಾಜನ್ನು ಒಡೆಯುವ ಮೂಲಕ ಸುಲಭವಾಗಿ ಪಾರಾಗಬಹುದು. ಅದಕ್ಕೆ ಅನುಕೂಲವಾಗಲೆಂದು ಹಲವು ಕಂಪನಿಗಳು ಸುತ್ತಿಗೆಯಂತಹ ಪರಿಕರಗಳನ್ನು ನೀಡಿರುತ್ತವೆ. ಅದನ್ನು ಬಳಕೆ ಮಾಡಿಕೊಳ್ಳಿರಿ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯನ್ನು ಗಮನಿಸಿದಾಗ, ಆ ವ್ಯಕ್ತಿ ಕೃತ್ಯ ಏತಕ್ಕೆ ಮಾಡಿದ ಎಂಬುದು ಈವರೆಗೆ ಗೊತ್ತಿಲ್ಲ. ಈ ರೀತಿಯಾಗಿ ಕಾರುಗಳು ಲಾಕ್ ಆದಾಗ ಎಷ್ಟೋ ಮಂದಿ, ಉಸಿರಾಟದ ಸಮಸ್ಯೆಯಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಆದರೆ, ಹೊರಬರುವುದರ ಬಗ್ಗೆ ಸ್ವಲ್ಪವೂ ಅರಿವಿಲ್ಲದ ನಾಯಿ ಪಾಡು ಏನಾಗ ಬೇಡ ನೀವೇ ಹೇಳಿರಿ. ಇಂತಹ ಘಟನೆಗಳು ಮರುಕಳಿಸದಿರಲಿ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications