ಕಾಡು ಪ್ರಾಣಿಗೆ ಆಹಾರ ನೀಡಿ ಸಂಕಷ್ಟಕ್ಕೆ ಸಿಲುಕಿದ ಪತ್ರಕರ್ತ
ಕರೋನಾ ವೈರಸ್ನಿಂದ ಉಂಟಾದ ಸಂಕಷ್ಟದ ಸಂದರ್ಭದಲ್ಲಿ ಹಲವಾರು ಜನರು ಉದ್ಯೋಗ ಕಳೆದುಕೊಂಡು ಆದಾಯವಿಲ್ಲದಂತಾದರು. ಕೆಲವು ಸಂಘ ಸಂಸ್ಥೆಗಳು ಇಂತಹ ಜನರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಉದ್ಯೋಗ ಕಳೆದುಕೊಂಡವರಿಗೆ ಸಂಘ ಸಂಸ್ಥೆಗಳು ಆಹಾರ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿವೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಹಾರ ನೀಡಿದ ಇಬ್ಬರ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿರುವ ಘಟನೆ ವರದಿಯಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದಜನರಿಗೆ ಸಹಾಯ ಮಾಡಿದ ಯುವಕರ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಭಾವಿಸಿದರೆ ನಿಮ್ಮ ಅಭಿಪ್ರಾಯ ತಪ್ಪು.

ಈ ಯುವಕರು ಕಾಡಿನಲ್ಲಿ ವಾಸಿಸುವ ಜಿಂಕೆಗಳಿಗೆ ಆಹಾರ ನೀಡಿದ್ದಾರೆ. ಈ ಕಾರಣಕ್ಕೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಅಧಿಕಾರಿಗಳು ಈ ಯುವಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅರಣ್ಯ ನಿಯಮಗಳ ಪ್ರಕಾರ ವನ್ಯ ಜೀವಿಗಳಿಗೆ ಆಹಾರ ನೀಡುವಂತಿಲ್ಲ.

ಈ ಕಾರಣಕ್ಕಾಗಿಯೇ ಅರಣ್ಯ ಅಧಿಕಾರಿಗಳು ವನ್ಯಜೀವಿ ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನವನ ಅಥವಾ ಕಾಡಿನ ಮೂಲಕ ಪ್ರಯಾಣಿಸುವಾಗ ಪ್ರಾಣಿಗಳಿಗೆ ಆಹಾರ ನೀಡಬಾರದೆಂದು ಸೂಚನಾ ಫಲಕಗಳನ್ನು ಅಳವಡಿಸಿರುತ್ತಾರೆ. ಆದರೂ ಬಹುತೇಕ ಜನರು ಈ ನಿಯಮಗಳನ್ನು ಉಲ್ಲಂಘಿಸುತ್ತಾರೆ.

ಕೆಲವರು ಕಾಡು ಪ್ರಾಣಿಗಳಿಗೆ ಆಹಾರ ನೀಡುವುದರ ಜೊತೆಗೆ ಅವುಗಳೊಂದಿಗೆ ಫೋಟೋ ತೆಗೆದು ಕೊಳ್ಳುತ್ತಾರೆ. ಇನ್ನೂ ಕೆಲವರು ತಾವು ನೀಡುವ ಆಹಾರವನ್ನು ಪ್ರದರ್ಶಿಸಲು ಹಾಗೂ ಮೋಜು ಮಾಸ್ತಿ ಮಾಡಲು ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಇದರಿಂದ ಕೆಲವೊಮ್ಮೆ ಅನಾಹುತಗಳು ಸಂಭವಿಸುತ್ತವೆ. ಸಂದರ್ಶಕರು ನೀಡುವ ಆಹಾರದಿಂದ ಮಾನವ - ಪ್ರಾಣಿಗಳ ನಡುವೆ ಸಂಘರ್ಷದಂತಹ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಪ್ರಾಣಿಗಳಿಗೆ ಆಹಾರ ನೀಡಬಾರದು ಎಂದು ಅರಣ್ಯ ಅಧಿಕಾರಿಗಳು ಸೂಚನೆ ನೀಡುತ್ತಾರೆ.

ಈ ಸೂಚನೆಗಳನ್ನು ಚಿತ್ರಗಳ ಮೂಲಕ ಅರಣ್ಯ ಪ್ರವೇಶಿಸುವ ಸಂದರ್ಭಗಳಲ್ಲಿ ನೀಡಲಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿ ಮಹೀಂದ್ರಾ ಎಕ್ಸ್ಯುವಿ 500 ಕಾರಿನಲ್ಲಿ ಬಂದ ಯುವಕರು ಜಿಂಕೆಗೆ ಆಹಾರ ನೀಡಿದ್ದಾರೆ.

ಇದರ ಬಗ್ಗೆ ಮಾಹಿತಿ ಪಡೆದ ನಂತರ ಬಂಡೀಪುರ ಹುಲಿ ಸಂರಕ್ಷಿತ ಅಧಿಕಾರಿಗಳು ಯುವಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಜಿಂಕೆಗೆ ಆಹಾರ ನೀಡಿದ ವ್ಯಕ್ತಿ ಪತ್ರಕರ್ತ ಎಂದು ತಿಳಿದು ಬಂದಿದೆ. ಆತ ನವದೆಹಲಿಯವನು ಎಂದು ಹೇಳಲಾಗಿದೆ. ಅವರು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರು ಆಗಸ್ಟ್ 3 ರಂದು ಬೆಳಿಗ್ಗೆ 11 ಗಂಟೆಗೆ ಬಂಡಿಪುರ ಮಾರ್ಗವಾಗಿ ಊಟಿಗೆ ತೆರಳಿದ್ದರು. ಅದೇ ಮಾರ್ಗದಲ್ಲಿ ತೆರಳುವಾಗ ಅವರು ಜಿಂಕೆಗಳಿಗೆ ಆಹಾರ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಜಿಂಕೆಗಳಿಗೆ ಆಹಾರ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಫೋಟೋಗಳ ಆಧಾರದ ಮೇಲೆ ಪತ್ರಕರ್ತನ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಜಿಂಕೆಗಳಿಗೆ ಆಹಾರ ನೀಡುತ್ತಿರುವ ಫೋಟೋವನ್ನು ಆತ ತೆಗೆದಿಲ್ಲ. ಬದಲಿಗೆ ಆತನ ಎದುರಿಗಿದ್ದ ಮತ್ತೊಂದು ಕಾರಿನ ಚಾಲಕ ಈ ತೆಗೆದಿದ್ದಾನೆ.

ಬಳಿಕ ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾನೆ. ಚಿತ್ರಗಳು ವೈರಲ್ ಆದ ನಂತರ ಪತ್ರಕರ್ತನ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡು, ದಂಡ ವಿಧಿಸಿದೆ. ಅರಣ್ಯ ಅಧಿಕಾರಿಗಳು ಆತನಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸ್ಟಾರ್ ಆಫ್ ಮೈಸೂರ್ ಪತ್ರಿಕೆ ವರದಿ ಮಾಡಿದೆ.

ಮಾನವರು ನೀಡುವ ಆಹಾರಗಳನ್ನು ತಿನ್ನುವ ವನ್ಯ ಜೀವಿಗಳು ಕಾಡಿನಲ್ಲಿ ಆಹಾರವನ್ನು ಹುಡುಕುವ ಬದಲು ರಸ್ತೆ ಬದಿಯಲ್ಲಿ ನಿಲ್ಲಲು ಶುರು ಮಾಡುತ್ತವೆ.ಪ್ರಯಾಣಿಕರು ನೀಡುವ ಆಹಾರವನ್ನು ತಿನ್ನುವ ಹಂತಕ್ಕೆ ತಲುಪುತ್ತವೆ.

ಇದರಿಂದ ದಟ್ಟ ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ರಸ್ತೆಗೆ ಬಂದು ನಿಲ್ಲುತ್ತವೆ. ಈ ವೇಳೆ ಅತಿ ವೇಗದಲ್ಲಿ ಬರುವ ವಾಹನಗಳಿಗೆ ಸಿಲುಕಿ ದಯನೀಯವಾಗಿ ಸಾಯುತ್ತವೆ. ಇಂತಹ ದುರಂತಗಳನ್ನು ತೊಡೆದು ಹಾಕಲು ಅರಣ್ಯ ಇಲಾಖೆಯು ಪ್ರಾಣಿಗಳಿಗೆ ಆಹಾರ ನೀಡದಿರಿ ಎಂದು ಪ್ರವಾಸಿಗರಿಗೆ ಸೂಚನೆ ನೀಡುತ್ತದೆ.

ಅರಣ್ಯ ಇಲಾಖೆಯ ಸೂಚನೆಗಳನ್ನು ಮೀರಿ ಕೆಲವರು ವನ್ಯ ಜೀವಿಗಳಿಗೆ ಆಹಾರ ನೀಡುತ್ತಾರೆ. ಇಂತಹ ಕೃತ್ಯಗಳು ಪದೇ ಪದೇ ನಡೆಯುವುದನ್ನು ತಡೆಗಟ್ಟುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೋಗಳನ್ನು ಆಧರಿಸಿ ಅರಣ್ಯ ಇಲಾಖೆಯು ಪತ್ರಕರ್ತನ ವಿರುದ್ಧ ಕ್ರಮ ಕೈಗೊಂಡಿದೆ.


Click it and Unblock the Notifications