ಮಾಜಿ ಪ್ರಧಾನಿಗೆ ಆ ಒಂದು ಕಾರು ಬಲು ಇಷ್ಟ: ಖರೀದಿಸುವಾಗ ಹಣ ಕೊಟ್ಟಿದ್ದು ಅವರೇ!
ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಗುರುವಾರ (ಡಿಸೆಂಬರ್ 26) ರಾಷ್ಟ್ರ ರಾಜಧಾನಿಯಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ ಮಾಜಿ ಪ್ರಧಾನಿಯನ್ನು 2024 ರ ಡಿಸೆಂಬರ್ 26 ರ ಗುರುವಾರ ರಾತ್ರಿ ಏಮ್ಸ್ಗೆ ದಾಖಲಿಸಲಾಗಿತ್ತು. ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಸಂಜೆ ಮನೆಯಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ರಾತ್ರಿ 8:06 ಕ್ಕೆ ದೆಹಲಿಯ ಏಮ್ಸ್ಗೆ ಕರೆತರಲಾಯಿತು, ಎಲ್ಲಾ ಪ್ರಯತ್ನಗಳ ಹೊರತಾಗಿಯೂ ರಾತ್ರಿ 9:51 ಕ್ಕೆ ನಿಧನರಾದರು ಎಂದು ವೈದ್ಯರು ಘೋಷಿಸಿದರು.
ಭಾರತದ 14ನೇ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು, ಸೆಪ್ಟೆಂಬರ್ 26, 1932 ರಂದು ಪಂಜಾಬ್ನಲ್ಲಿ ಜನಿಸಿದ್ದರು. 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿದ್ದ ಅವರು, ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮನಮೋಹನ್ ಸಿಂಗ್ ಅವರ ನಿಧನವು ಭಾರತೀಯ ರಾಜಕೀಯಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಕಾಂಗ್ರೆಸ್ ಗುರುವಾರ ಟ್ವೀಟ್ ಮಾಡಿದೆ.

ಮನಮೋಹನ್ ಸಿಂಗ್ ಅವರದ್ದು ತುಂಬಾ ಸರಳ ಜೀವನವಾಗಿತ್ತು. ಐಷಾರಾಮಿ, ಆಡಂಭರದಿಂದ ದೂರವಿದ್ದ ಅವರು, ಯಾವ ಕಾರಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಿದ್ದರು ಎಂದು ನಿಮಗೆ ಗೊತ್ತಾ? 1996 ರಲ್ಲಿ ಕಾರು ಖರೀದಿಸಲು ಜೇಬಿನಲ್ಲಿ ಹಣವಿಲ್ಲದಿದ್ದಾಗ ನಿರ್ದಿಷ್ಟ ವ್ಯಕ್ತಿಯೊಬ್ಬರಿಂದ ಹಣ ಪಡೆದು ಸಣ್ಣ ಕಾರೊಂದನ್ನು ಖರೀದಿಸಿದ್ದರು. ಈ ಕಾರು ಅವರ ಫೇವರೆಟ್ ಆಗಿತ್ತು.
ಅಷ್ಟಕ್ಕು ಆ ಕಾರು ಯಾವುದು ಗೊತ್ತಾ? ಅದೇ ಮಾರುತಿ 800, ಈ ಕಾರು ಖರೀದಿಸಲು ಅವರು ಹಣ ಪಡೆದಿದ್ದು ಯಾರಿಂದ ಗೊತ್ತಾ? ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್. ಅಂದಿನ ಕಾಲಕ್ಕೆ ಈ ಕಾರು ತುಂಬಾ ಫೇಮಸ್ ಆಗಿತ್ತು. ಅವರ ಕೊನೆಯ ದಿನಗಳಲ್ಲಿಯೂ ಕಾರು ಫೇವರೆಟ್ ಆಗಿತ್ತು ಎಂದು ಹಲವರು ಹೇಳುತ್ತಾರೆ.

ಕಾರಿನ ಬೆಲೆ ಎಷ್ಟು?: ಆ ಸಮಯದಲ್ಲಿ, ಮಾಜಿ ಪ್ರಧಾನಿ ಈ ಕಾರನ್ನು ಸುಮಾರು 21 ಸಾವಿರ ರೂಪಾಯಿಗಳಿಗೆ ಖರೀದಿಸಿದ್ದರು, ಅದರಲ್ಲಿ 20 ಸಾವಿರ ರೂಪಾಯಿಗಳನ್ನು ಅವರ ಪತ್ನಿ ಗುರುಶರಣ್ ಕೌರ್ ನೀಡಿದ್ದರು. ಕಾರು ಸಣ್ಣದಾದರೂ ಅವರ ಕುಟುಂಬದೊಂದಿಗೆ ಅಮೂಲ್ಯವಾದ ಭಾಂದವ್ಯವನ್ನು ಹೊಂದಿತ್ತು. ಇದೇ ಕಾರಿನ ಬಗ್ಗೆ ಸಿಂಗ್ ಅವರು 2013 ರಲ್ಲಿಯೂ ಉಲ್ಲೇಖಿಸಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2013 ರಲ್ಲಿ ಅಸ್ಸಾಂನಿಂದ ರಾಜ್ಯಸ್ಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದಾಗ ಅದರಲ್ಲಿ ತಮ್ಮ ಆಸ್ತಿಯನ್ನು ಉಲ್ಲೇಖಿಸಿದ್ದರು. ಇದರಲ್ಲಿ ತಮ್ಮ 17 ವರ್ಷ ಹಳೆಯದಾದ 1996 ರ ಮಾರುತಿ 800 ಕಾರು ಇರುವುದನ್ನು ಅಫಿಡವಿಟ್ನಲ್ಲಿ ಹೇಳಲಾಗಿತ್ತು. ತುಂಬಾ ಸಿಂಪಲ್ ಕಾರನ್ನು ಹೊಂದಿರುವುದಾಗಿ ಆಗ ತುಂಬಾ ಸುದ್ದಿಯಾಗಿದ್ದರು.

ದೇಶದ ಅತ್ಯುನ್ನತ ಪದವಿಯಲ್ಲಿದ್ದರೂ ಆಡಂಭರವಿಲ್ಲದ ಜೀವನ ನಡೆಸಿದ್ದ ಕೆಲವೇ ನಾಯಕರಲ್ಲಿ ಮನಮೋಹನ್ ಸಿಂಗ್ ಅವರು ಕೂಡ ಒಬ್ಬರು. ಹಾಗಾಗಿಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ದೇಶಾದ್ಯಂತ ಶೋಕಾಚರಣೆಯಲ್ಲಿದೆ. ಅದೇ ಸಮಯದಲ್ಲಿ, ವಿಶ್ವದಾದ್ಯಂತ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಲಾಗುತ್ತಿದೆ.
ಮನಮೋಹನ್ ಸಿಂಗ್ ಅವರ ನಿಧನದ ನಂತರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗಿದೆ. ಭಾರತ ಸರ್ಕಾರವು ಡಿಸೆಂಬರ್ 27 ರ ಶುಕ್ರವಾರದ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications