ಇನ್ನು ಮುಂದೆ ಈ ನಗರದಲ್ಲಿ ವಾಹನಗಳು 30 ಕಿ.ಮೀಗಳಿಗಿಂತ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ
ಫ್ರಾನ್ಸ್ ರಾಜಧಾನಿ ಪ್ಯಾರಿಸ್, ಪ್ರೀತಿ ಹಾಗೂ ಪ್ರಣಯಕ್ಕೆ ಹೆಸರುವಾಸಿಯಾಗಿದೆ. ಈಗ ಪ್ಯಾರಿಸ್'ನ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಒಂದು ನಿರ್ಧಾರ ಎಲ್ಲರ ಗಮನ ಸೆಳೆದಿದೆ. ಪ್ಯಾರಿಸ್ ಅಧಿಕಾರಿಗಳು ವಾಹನಗಳು ಚಲಿಸುವ ಗರಿಷ್ಠ ವೇಗದ ಮಿತಿಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಅಧಿಕಾರಿಗಳ ಈ ನಿರ್ಧಾರದ ಹಿಂದೆ ವಿವಿಧ ಕಾರಣಗಳಿವೆ.

ಅಧಿಕಾರಿಗಳು ತೆಗೆದುಕೊಂಡಿರುವ ಈ ನಿರ್ಧಾರದಿಂದ ಪ್ಯಾರಿಸ್ನ ಹಲವು ಭಾಗಗಳಲ್ಲಿ ಇನ್ನು ಮುಂದೆ ವಾಹನಗಳು ಪ್ರತಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸಲಿವೆ. ಈ ನಿರ್ಧಾರದಿಂದ ಪ್ಯಾರಿಸ್ ಅಧಿಕಾರಿಗಳು ಎರಡು ಪ್ರಮುಖ ಪ್ರಯೋಜನಗಳನ್ನು ಪಡೆಯಲು ಮುಂದಾಗಿದ್ದಾರೆ. ಮೊದಲಯನೇದಾಗಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಯಸಿದ್ದಾರೆ.

ಪ್ರಪಂಚದಲ್ಲಿ ನಡೆಯುವ ಹೆಚ್ಚಿನ ರಸ್ತೆ ಅಪಘಾತಗಳಿಗೆ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದೇ ಪ್ರಮುಖ ಕಾರಣವಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿ ನಿನ್ನೆ ರಾತ್ರಿ ನಡೆದ ರಸ್ತೆ ಅಪಘಾತ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಈ ಅಪಘಾತದಲ್ಲಿ ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕರ ಪುತ್ರ ಸೇರಿದಂತೆ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ.

ಈ ಅಪಘಾತವು ಕಾರಿನಲ್ಲಿ ಪ್ರಯಾಣಿಸುತ್ತಿದ್ದ 7 ಜನರ ಸಾವಿಗೆ ಕಾರಣವಾಗಿದೆ. ಈ ಅಪಘಾತಕ್ಕೆ ವಿವಿಧ ಕಾರಣಗಳನ್ನು ಉಲ್ಲೇಖಿಸಲಾಗಿದೆ. ಆದರೆ ಕಾರ್ ಅನ್ನು ಅತಿ ವೇಗವಾಗಿ ಚಾಲನೆ ಮಾಡಿದ್ದು ಈ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ವಾಹನಗಳು ಅತಿ ವೇಗದಲ್ಲಿ ಚಲಿಸಿದರೆ ಅವುಗಳನ್ನು ತಕ್ಷಣವೇ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಪಘಾತಗಳಾಗುತ್ತವೆ.

ಈ ಕಾರಣಕ್ಕಾಗಿಯೇ ಪ್ಯಾರಿಸ್ನ ಹಲವು ಭಾಗಗಳಲ್ಲಿ ಇನ್ನು ಮುಂದೆ ಪ್ರತಿ ಗಂಟೆಗೆ ಗರಿಷ್ಠ 30 ಕಿ.ಮೀ ವೇಗದಲ್ಲಿ ಮಾತ್ರ ವಾಹನಗಳನ್ನು ಚಾಲನೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಈ ಆದೇಶದ ಹಿಂದಿನ ಎರಡನೇ ಕಾರಣವೆಂದರೆ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು. ಆದರೆ ಈ ಆದೇಶವನ್ನು ಹಲವಾರು ಜನರು ಟೀಕಿಸಿದ್ದಾರೆ.

ಈ ಆದೇಶವು ವಿಶೇಷವಾಗಿ ಆಹಾರ - ಸರಕುಗಳ ವಿತರಣೆ ಹಾಗೂ ಟ್ಯಾಕ್ಸಿ ಚಾಲಕರ ಅತೃಪ್ತಿಗೆ ಕಾರಣವಾಗಿದೆ. ಈ ನಿರ್ಧಾರದಿಂದ ವಸ್ತುಗಳನ್ನು ಆರ್ಡರ್ ಮಾಡುವ ಗ್ರಾಹಕರು ಅವುಗಳ ವಿತರಣೆ ಪಡೆಯಲು ಇನ್ನು ಮುಂದೆ ಹೆಚ್ಚು ಸಮಯ ಕಾಯಬೇಕಾಗುತ್ತದೆ ಎಂಬುದು ವಿತರಣಾ ಕಾರ್ಯದಲ್ಲಿರುವವರ ಅಭಿಪ್ರಾಯವಾಗಿದೆ. ಇದೇ ವೇಳೆ ಟ್ಯಾಕ್ಸಿ ಚಾಲಕರು ಈ ಆದೇಶವು ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಈ ಆದೇಶದಿಂದಾಗಿ ಟ್ಯಾಕ್ಸಿ ದರಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಟ್ಯಾಕ್ಸಿ ಚಾಲಕರು ಹೇಳಿದ್ದಾರೆ. ಆದರೆ ಸಾರ್ವಜನಿಕರು ಈ ಆದೇಶವನ್ನು ವ್ಯಾಪಕವಾಗಿ ಸ್ವಾಗತಿಸಿದ್ದಾರೆ. ಈ ಆದೇಶದಿಂದ ಪ್ಯಾರಿಸ್'ನಲ್ಲಿರುವ ರಸ್ತೆಗಳು ನಿಶ್ಯಬ್ದವಾಗಿರುವುದರ ಜೊತೆಗೆ ಸುರಕ್ಷಿತವಾಗಿರುತ್ತವೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ಆದೇಶವು ಆಗಸ್ಟ್ 30 ರಿಂದ ಜಾರಿಗೆ ಬಂದಿದೆ. ಈ ಆದೇಶ ಅಥವಾ ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ಯಾರಿಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಆದೇಶದಿಂದಾಗಿ ಪಾದಚಾರಿಗಳು ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಗಾಯಗೊಳ್ಳುತ್ತಿದ್ದಾರೆ. ಇಲ್ಲವೇ ಸಾವನ್ನಪ್ಪುತ್ತಿದ್ದಾರೆ. ಹಲವು ಸಾವು ನೋವುಗಳು ಸಹ ಸಂಭವಿಸುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ರಸ್ತೆಗಳನ್ನು ಪಾದಚಾರಿ ಸ್ನೇಹಿಯಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗ ಪ್ಯಾರಿಸ್ ನಲ್ಲಿ ನೀಡಲಾಗುತ್ತಿರುವ ಆದೇಶವು ಪಾದಚಾರಿ ಸ್ನೇಹಿಯಾಗಿರುತ್ತದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವೂ ಸೇರಿದಂತೆ ವಿಶ್ವದ ವಿವಿಧ ದೇಶಗಳು ಈಗ ಪಾದಚಾರಿಗಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ವಾಹನಗಳ ವಿನ್ಯಾಸದಲ್ಲಿಯೂ ಕೆಲವು ಬದಲಾವಣೆಗಳನ್ನು ನಿಧಾನವಾಗಿ ಕಡ್ಡಾಯಗೊಳಿಸಲಾಗುತ್ತಿದೆ. ಪ್ಯಾರಿಸ್ ನಲ್ಲಿ ಮಾತ್ರವಲ್ಲದೆ ಫಾನ್ಸ್'ನ ಹಲವು ನಗರಗಳಲ್ಲೂ ಗರಿಷ್ಠ ವೇಗದ ಮಿತಿಯನ್ನು ಪ್ರತಿ ಗಂಟೆಗೆ 30 ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ.

ಯುರೋಪ್'ನ ಹಲವು ದೇಶಗಳಲ್ಲಿ ಈ ರೀತಿ ವೇಗ ಮಿತಿಗಳನ್ನು ಜಾರಿಗೊಳಿಸಲಾಗಿದೆ. ಆ ದೇಶಗಳಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ ಎಂಬುದು ಗಮನಾರ್ಹ. ಈ ಮೂಲಕ ಪರಿಸರವನ್ನು ರಕ್ಷಿಸಲು ನಿರ್ಧರಿಸಲಾಗಿದೆ. ಇದೇ ಉದ್ದೇಶಕ್ಕಾಗಿ ಈಗಾಗಲೇ ಹಲವು ಯುರೋಪಿಯನ್ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ.

ಭಾರತವೂ ಇದರಿಂದ ಹೊರತಾಗಿಲ್ಲ. ಸದ್ಯಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ನಿನ್ನೆಯಷ್ಟೇ Tata Motors ಕಂಪನಿಯು ತನ್ನ 2021 ರ Tigor ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು ಮಾತ್ರವಲ್ಲದೇ ಕೆಲವು ದಿನಗಳ ಹಿಂದಷ್ಟೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಈ ಕಂಪನಿಗಳು ಮಾತ್ರವಲ್ಲದೇ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರು ಈಗ ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಗಳಿವೆ.


Click it and Unblock the Notifications