KSRTC: ಗುಡ್ ನ್ಯೂಸ್.. ಕೆಎಸ್ಆರ್ಟಿಸಿಗೆ 2000 ಹೊಸ ಬಸ್ ಸೇರ್ಪಡೆ, ಶೀಘ್ರ ನಗದು ರಹಿತ ಪ್ರಯಾಣ!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ - KSRTC), ಶೀಘ್ರದಲ್ಲೇ ತನ್ನ ಪ್ರಯಾಣಿಕರಿಗೆ ದೊಡ್ಡ ಸಿಹಿಸುದ್ದಿ ನೀಡಲಿದೆ. ಈ ವರ್ಷ 2,000 ಹೊಸ ಬಸ್ಗಳನ್ನು ಪರಿಚಯಿಸಲು ಯೋಜಿಸಿದೆ. ವಿಟಿಎಂಎಸ್ (ವೆಹಿಕಲ್ ಟ್ರ್ಯಾಕಿಂಗ್ & ಮಾನಿಟರಿಂಗ್ ಸಿಸ್ಟಮ್), ಮೊಬೈಲ್ ಅಪ್ಲಿಕೇಶನ್, ನಗದು ರಹಿತ ಪ್ರಯಾಣದಂತಹ ಸೌಕರ್ಯಗಳನ್ನು ನೀಡಲು ಮುಂದಾಗಿದೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅನ್ಬುಕುಮಾರ್ (Anbu Kumar) ಅವರು ಈ ಬಗ್ಗೆ ಮಾತನಾಡಿದ್ದು, '20 ಅಂಬಾರಿ ಉತ್ಸವ, 20 ಐರಾವತ ಕ್ಲಬ್ ಕ್ಲಾಸ್, 100 ಪಲ್ಲಕಿ ನಾನ್ ಎಸಿ ಸ್ಲೀಪರ್, 500 ಎಲೆಕ್ಟ್ರಿಕ್ ಹಾಗೂ 1000 ಕರ್ನಾಟಕ ಸಾರಿಗೆ ಬಸ್ಗಳನ್ನು ಈ ವರ್ಷ ಸೇವೆಗೆ ನಿಯೋಜಿಸಲಾಗುವುದು. ಇದರೊಂದಿಗೆ 1000 ಬಸ್ಗಳನ್ನು ನವೀಕರಿಸಲಾಗುತ್ತದೆ' ಎಂದು ಹೇಳಿದ್ದಾರೆ.

ಸಾಮಾನ್ಯ ಬಸ್ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ನಂತರ, ವಿಶೇಷವಾಗಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. '1000 ಕರ್ನಾಟಕ ಸಾರಿಗೆ ಬಸ್ಗಳನ್ನು ಪರಿಚಯಿಸುವುದರಿಂದ ಹಳ್ಳಿಗಾಡಿನಲ್ಲಿ ಸಂಪರ್ಕ ಸಾಕಷ್ಟು ಸುಧಾರಿಸುತ್ತದೆ. ಶಕ್ತಿ ಯೋಜನೆ ಫಲಾನುಭವಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತ್ತಿರುವುದರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ ಹಾಗೂ ಎನ್ಡಬ್ಲ್ಯೂಕೆಆರ್ಟಿಸಿಗಳು 3,888 ಹೊಸ ಬಸ್ ಖರೀದಿಸಲು ಯೋಜಿಸಿವೆ. ಸದ್ಯ, ರಾಜ್ಯಾದ್ಯಂತ ನಾಲ್ಕು ನಿಗಮಗಳ 23,989 ಬಸ್ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಪ್ರತಿ ದಿನ ಸರಿ ಸುಮಾರು 65.02 ಕಿಲೋಮೀಟರ್ ಸಂಚರಿಸುತ್ತಿರುವುದು ಗಮನಾರ್ಹ ಅಂಶವಾಗಿದೆ.

ನಗದು ರಹಿತ ಪ್ರಯಾಣಕ್ಕಾಗಿ (Traveling Cashless) ಸಾರ್ವಜನಿಕರಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ, ಈ ವರ್ಷ (2024) ಕೆಎಸ್ಆರ್ಟಿಸಿ, ಇದನ್ನು ಸಹ ಪರಿಚಯಿಸಲು ಮುಂದಾಗಿದೆ. ಒಮ್ಮೆ ನಗದು ರಹಿತ ಪ್ರಯಾಣ ವ್ಯವಸ್ಥೆ ಜಾರಿಯಾದ ಮೇಲೆ ಪ್ರಯಾಣಿಕರು, ಟಿಕೆಟ್ ಗಾಗಿ ಹಣ ಪಾವತಿಯನ್ನು ಯುಪಿಐ ಅಥವಾ ಎಟಿಎಂ ಕಾರ್ಡ್ ಬಳಸಿ ಮಾಡಬಹುದು.
ಮಾಹಿತಿ ತಂತ್ರಜ್ಞಾನ (Information Technology) ವ್ಯವಸ್ಥೆ ಅಳವಡಿಕೆಗೂ ಕೆಎಸ್ಆರ್ಟಿಸಿ ಆದ್ಯತೆ ನೀಡಿದ್ದು, ಅದಕ್ಕಾಗಿಯೂ ಯೋಜನೆಯನ್ನು ರೂಪಿಸಿದೆ. ತನ್ನ ಬಸ್ಗಳಲ್ಲಿ ವಿಟಿಎಂಎಸ್ (ವೆಹಿಕಲ್ ಟ್ರ್ಯಾಕಿಂಗ್ & ಮಾನಿಟರಿಂಗ್ ಸಿಸ್ಟಮ್) ಅಳವಡಿಕೆಯ ಗುರಿಯನ್ನು ಹಾಕಿಕೊಂಡಿದೆ. ಈ ವರ್ಷ ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಅಪ್ಲಿಕೇಶನ್ (mobile app) ಅನ್ನು ಆರಂಭಿಸಲು ಕೂಡ ಸಜ್ಜಾಗಿದೆ.

ಕಳೆದ ತಿಂಗಳು ಶುರು ಮಾಡಿದ 'ನಮ್ಮ ಕಾರ್ಗೋ' ಸೇವೆಯನ್ನು ಪ್ರಸ್ತುತವಿರುವ 20 ಟ್ರಕ್ಗಳಿಂದ ವರ್ಷಾಂತ್ಯದೊಳಗೆ 500 ಟ್ರಕ್ಗಳಿಗೆ ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ. ಕೆಎಸ್ಆರ್ಟಿಸಿ ಸಿಬ್ಬಂದಿ ವಿರುದ್ಧದ 10,364 ಶಿಸ್ತಿನ ಪ್ರಕರಣಗಳನ್ನು ಕನಿಷ್ಠ ದಂಡದೊಂದಿಗೆ ಕೈಬಿಡಲಾಗಿದ್ದು, 425 ಚಾಲಕರು ಮತ್ತೆ ಕೆಸಲಕ್ಕೆ ಮರಳಲು ಅನುವು ಮಾಡಿಕೊಟ್ಟಿದೆ.
2023ರಲ್ಲಿ ಕೆಎಸ್ಆರ್ಟಿಸಿ 50 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ 2023ರಲ್ಲಿ ಮೃತಪಟ್ಟ ನಿಗಮದ ನೌಕರರ ಕುಟುಂಬಗಳಿಗೆ ರೂ.1 ಕೋಟಿ ಪರಿಹಾರ ನೀಡಲಾಗಿದೆ. ಇನ್ನು, ಪ್ರಯಾಣಿಕ ಅನುಕೂಲಕ್ಕಾಗಿ ಈ ವರ್ಷ ಕೆಎಸ್ಆರ್ಟಿಸಿ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹೊರಟಿರುವುದು ಅತ್ಯುತ್ತಮ ಬೆಳವಣಿಗೆಯಾಗಿದ್ದು, ಸಾರ್ವಜನಿಕರಿಂದಲ್ಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications