ಗಣೇಶನ ಮೂರ್ತಿ ಮೆರವಣಿಗೆಗೆ ಪ್ರತ್ಯೇಕ ಪಥವನ್ನು ಏರ್ಪಡಿಸಲು ಸರ್ಕಾರ ಆದೇಶ
ಭಾರತದಲ್ಲಿ ಆಚರಿಸಲಾಗುವ ಬಹುದೊಡ್ಡ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಕೂಡ ಒಂದು. ಹಬ್ಬದ ತಿಂಗಳಿನಲ್ಲಿ ದೇಶಾದ್ಯಂತ ಗಣೇಶನ ಮೂರ್ತಿಗಳ ಅಬ್ಬರ ಜೋರಾಗಿರುತ್ತದೆ, ಇನ್ನು ಮಹಾರಾಷ್ಟ್ರ ರಾಜ್ಯದಲ್ಲಂತೂ ಸಂಭ್ರಮ ಮುಗಿಲುಮುಟ್ಟುತ್ತದೆ.
Recommended Video
ಮುಂಬೈನ ಪ್ರತಿಯೊಂದು ಬೀದಿಗಳಲ್ಲಿಯೂ ಗಣೇಶನ ಮೂರ್ತಿಗಳು ರಾರಾಜಿಸುತ್ತಿರುತ್ತವೆ. ರಸ್ತೆಗಳೆಲ್ಲವೂ ಜನಜಂಗುಳಿಯಿಂದ ತುಂಬಿಕೊಂಡು ವಾಹನಗಳಿಗಂತೂ ಸಂಚರಿಸಲು ಅಸಾಧ್ಯವೆಂದೇ ಹೇಳಬಹುದು. ಕಳೆದ ಮೂರು ವರ್ಷಗಳಿಂದಲೂ ಕೊರೊನಾದಿಂದಾಗಿ ಗಣೇಶ ಹಬ್ಬ ಸೇರಿದಂತೆ ಬಹುತೇಕ ಹಬ್ಬಗಳಿಗೆ ಬ್ರೇಕ್ ಬಿದ್ದಿತ್ತು.

ಕಳೆದ ವರ್ಷ ಹಬ್ಬ ಆಚರಿಸಲು ಅನುಮತಿ ನೀಡಲಾಗಿತ್ತಾದರೂ ಕೆಲವು ಕಠಿಣ ನಿಯಮಗಳನ್ನು ಅನುಸರಿಸಲು ಸೂಚಿಸಲಾಗಿತ್ತು. ಇದೀಗ ಸಾಂಕ್ರಾಮಿಕ ರೋಗದಿಂದ ಯಾವುದೇ ಅಡೆತಡೆಗಳು ಇಲ್ಲದ ಕಾರಣ ಹಬ್ಬದ ಸಂಭ್ರಮ ಮುಗಿಲು ಮುಟ್ಟಲಿದೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ.

ಆದರೆ ಮುಂಬೈ ಮಾತ್ರ ಇಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ. ಏಕೆಂದರೆ ಮುಂಬೈನಲ್ಲಿ ಗಣೇಶನ ಹಬ್ಬವನ್ನು ಭಾರತದ ಬೇರೆಲ್ಲಿಯೂ ಆಚರಿಸದ ರೀತಿಯಲ್ಲಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಗಣೇಶ ಚತುರ್ಥಿ ಹಬ್ಬಗಳ ಸಂದರ್ಭದಲ್ಲಿ ಜನರು ಗುಂಪು ಗುಂಪಾಗಿ ಸೇರಿ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪೂಜಿಸುತ್ತಾರೆ.

ಭಾರತದಲ್ಲಿ ಗಣೇಶ ಚತುರ್ಥಿ ಹಬ್ಬದ ನಂತರ, ವಿಸರ್ಜನಾ ಮೆರವಣಿಗೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮೆರವಣಿಗೆ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿ ಇತರ ವಾಹನ ಸವಾರರಿಗೆ ಕಿರಿಕಿರಿಯಾಗುತ್ತದೆ. ಕೆಲವೊಮ್ಮೆ ತುರ್ತು ವಾಹನಗಳು ಟ್ರಾಫಿಕ್ನಲ್ಲಿ ಸಿಲುಕಿ ತೊಂದರೆ ಅನುಭವಿಸಿದ ಉದಾಹರಣೆಗಳೂ ಇವೆ.

ಹಾಗಾಗಿ ಮುಂಬೈನಲ್ಲಿ ಈ ಮೆರವಣಿಗೆಯಿಂದ ರಸ್ತೆಗಳಲ್ಲಿ ಇತರ ವಾಹನಗಳಿಗೆ ಸಂಚರಿಸಲು ಆಗದ ಕಾರಣ ಮಹಾರಾಷ್ಟ್ರ ಸರ್ಕಾರ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಮುಂಬೈನಲ್ಲಿ ವಿನಾಯಕ ಚತುರ್ಥಿ ಹಬ್ಬದ ನಿಮಿತ್ತ ಎಕ್ಸ್ ಪ್ರೆಸ್ವೇನಲ್ಲಿ ಗಣೇಶನ ಮೂರ್ತಿಗಳ ಮೆರವಣಿಗೆಗೆ ಪ್ರತ್ಯೇಕ ಪಥವನ್ನು ಕಾಯ್ದಿರಿಸಲಾಗಿದೆ.

ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಒಂದು ಪಥವನ್ನು ಕಾಯ್ದಿರಿಸಲು ಖುದ್ದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೇ ಆದೇಶಿಸಿದ್ದಾರೆ. ಹೆದ್ದಾರಿಯು ಒಟ್ಟು 94.5 ಕಿಮೀ ಉದ್ದವನ್ನು ಹೊಂದಿದೆ. ಇದು ಭಾರತದ ಅತ್ಯಂತ ಜನನಿಬಿಡ ಎಕ್ಸ್ಪ್ರೆಸ್ ಹೆದ್ದಾರಿಯಾಗಿದೆ.

ನಿತ್ಯ ಕನಿಷ್ಠ 60,000 ವಾಹನಗಳು ಸಂಚರಿಸುತ್ತವೆ. ಇನ್ನು ಸಾಮಾನ್ಯ ದಿನಗಳಿಗಿಂತ ಹಬ್ಬ ಹರಿದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಬಾರಿಯ ವಿನಾಯಕ ಚತುರ್ಥಿ ಮೆರವಣಿಗೆಗೆ ಪ್ರತ್ಯೇಕ ಪಥವನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

ಮೊದಲೇ ಹೇಳಿದಂತೆ, ಈ ಎಕ್ಸ್ಪ್ರೆಸ್ ಹೆದ್ದಾರಿಯು ಸಾಮಾನ್ಯವಾಗಿ ಅತ್ಯಂತ ಜನನಿಬಿಡ ಹೆದ್ದಾರಿಯಾಗಿದ್ದು, ಪ್ರಸ್ತುತ ಇದು 6 ಲೇನ್ಗಳನ್ನು ಹೊಂದಿದೆ. ಇದನ್ನು 8 ಲೇನ್ಗಳಾಗಿ ಪರಿವರ್ತಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. 2018 ರಲ್ಲಿ ಪ್ರಾರಂಭವಾದ ಈ ರಸ್ತೆಯಲ್ಲಿ 337 ಅಪಘಾತಗಳು ಸಂಭವಿಸಿವೆ. 400 ಜನರು ಸಾವನ್ನಪ್ಪಿದ್ದಾರೆ.

ಇಂತಹ ಜನನಿಬಿಡ ಹೆದ್ದಾರಿಯಲ್ಲಿ ಟ್ರಾಫಿಕ್ ಬಿಕ್ಕಟ್ಟು ನಿಭಾಯಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಗಣೇಶ ಚತುರ್ಥಿ ಮೆರವಣಿಗೆ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಆ ಪ್ರದೇಶದಲ್ಲಿ ಸಾಕಷ್ಟು ಪೊಲೀಸರನ್ನು ನೇಮಿಸಲು ಆದೇಶಿಸಲಾಗಿದೆ. ಅಲ್ಲದೇ ನಗರದ ಪ್ರತಿಯೊಂದು ಏರಿಯಾಗಳಲ್ಲೂ ಕಟ್ಟುನಿಟ್ಟಿನ ಭದ್ರತೆ ಒದಗಿಸಲು ಆದೇಶಿಸಲಾಗಿದೆ.

ಇದಕ್ಕಾಗಿ ಮುಂಬೈ-ಬೆಂಗಳೂರು ಮತ್ತು ಮುಂಬೈ-ಗೋವಾ ಹೆದ್ದಾರಿಗಳಲ್ಲಿನ ಟೋಲ್ ಬೂತ್ಗಳನ್ನು ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ವಾಹನ ದಟ್ಟಣೆ ತಪ್ಪಿಸಲು ಮುಚ್ಚಲಾಗಿದೆ. ಹೀಗಾಗಿ ವಾಹನಗಳು ಯಾವುದೇ ಅಡಚಣೆ ಇಲ್ಲದೇ ರಸ್ತೆಯನ್ನು ಬಳಸಬಹುದು ಎಂದು ರಾಜ್ಯ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಈ ಬಾರಿ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ ದೇಶದ ಇತರ ರಾಜ್ಯಗಳಲ್ಲೂ ಗಣೇಶ ಹಬ್ಬ ಭಾರೀ ಸದ್ದು ಮಾಡಲಿದೆ. ಬೆಂಗಳೂರಿನಲ್ಲಿಯೂ ಈ ಬಾರಿ ಗಣೇಶನ ಮೂರ್ತಿಗಳ ಬುಕ್ಕಿಂಗ್ಗಳು ದಾಖಲೆ ಮಟ್ಟದಲ್ಲಿ ಆಗಿವೆ. ಗಣೇಶ ಮೂರ್ತಿ ತಯಾರಕರಿಗೆ ನಮ್ಮ ರಾಜ್ಯವೊಂದೇ ಅಲ್ಲದೇ ನೆರೆಯ ಆಂಧ್ರ ಪ್ರದೇಶದಿಂದಲೂ ಮೂರ್ತಿಗಳನ್ನು ಕೊಂಡೊಯ್ಯಲು ಬರುತ್ತಿದ್ದಾರೆ.

ಈ ಬಾರಿ ಹೇಗೂ ಕೊರೊನಾ ಕಠಿಣ ನಿಯಮಗಳು ಇಲ್ಲದಿರುವುದರಿಂದ ಕಳೆದ ಬಾರಿಗಿಂತ ಈ ಬಾರಿ ಹಬ್ಬದ ಸಂಭ್ರಮವು ಮುಗಿಲು ಮುಟ್ಟಲಿದೆ. ಇನ್ನು ಗಣೇಶ ಮೂರ್ತಿಯನ್ನು ಕೂರಿಸಲು ಆಯಾ ಏರಿಯಾಗಳ ಪೊಲೀಸರ ಅನುಮತಿ ಪಡೆಯುವುದು ಪ್ರತಿವರ್ಷದಂತೆ ಈ ಬಾರಿಯೂ ಕಡ್ಡಾಯವಾಗಿರುತ್ತದೆ. ಅಲ್ಲದೇ ಪೊಲೀಸರ ಕೆಲವು ನಿಯಮಗಳನ್ನು ಪಾಲಿಸಬೇಕಿರುತ್ತದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ನಮ್ಮ ರಾಜ್ಯದಲ್ಲಿಯೂ ಮುಂಬೈನಷ್ಟು ಅದ್ದೂರಿಯಾಗಿ ಹಬ್ಬದ ಸಂಭ್ರಮ ಇಲ್ಲದಿದ್ದರೂ ಆಚರಣಯಲ್ಲಿ ಯಾವುದೇ ಭಿನ್ನತೆ ಇರುವುದಿಲ್ಲ. ಅಲ್ಲಿನಂತೆಯೇ ಮೆರಣಿಗೆ ಹಾಗೂ ಸಂಭ್ರಮಾಚರಣೆ ಇಲ್ಲಿಯೂ ಇರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ನೋಡಬೇಕಿದೆ.


Click it and Unblock the Notifications