Vande Bharat: ಪತ್ನಿಯನ್ನು ಬಿಡಲು ಹೋಗಿ ಪತಿ ಲಾಕ್! ವಂದೇ ಭಾರತ್ ಬಗ್ಗೆ ಇದು ತಿಳಿದಿರಲಿ!
ರೈಲ್ವೆ ನಿಲ್ದಾಣಗಳಿಗೆ ಸಂಬಂಧಿಕರನ್ನು ಕರೆದೊಯ್ಯುವುದು ನಮ್ಮಲ್ಲಿ ಅನೇಕರಿಗೆ ಪರಿಚಿತ ಅನುಭವವಾಗಿದೆ. ತಿಂಡಿ, ತಿಸುಗಳನ್ನು ಕೊಡಿಸಿ ರೈಲು ಹೊರಟ ನಂತರ ನಾವು ಮನೆಗೆ ಹಿಂದಿರುಗುತ್ತೇವೆ. ಇದೆಲ್ಲಾ ಹಳೆಯ ರೈಲುಗಳಿಗೆ ಮಾತ್ರ ಸೀಮಿತ, ಹೊಸ Vande Bharat ರೈಲುಗಳಲ್ಲಿ ಹೀಗೆ ಮಾಡಿದ್ರೆ, ಸಂಬಂಧಿಕರ ಜೊತೆಗೆ ನೀವು ಪ್ರಯಾಣ ಮಾಡಬೇಕಾಗುತ್ತದೆ.
ಹೌದು.. ಇತ್ತೀಚೆಗೆ ವ್ಯಕ್ತಿಯೊಬ್ಬರು ರೈಲು ಹತ್ತುವ ತನ್ನ ಪತ್ನಿಗೆ ಸಹಾಯ ಮಾಡಲು ಹೋಗಿ, ಚಲಿಸುವ ರೈಲಿನೊಳಗೆ ಲಾಕ್ ಆಗಿದ್ದಾರೆ. ಈ ತಮಾಷೆಯ ಘಟನೆ ಇತ್ತೀಚೆಗೆ ಗುಜರಾತ್ನಲ್ಲಿ ಸಂಭವಿಸಿದೆ. ತಮ್ಮ ಪತ್ನಿಗೆ ಲಗ್ಗೇಜ್ ಸಹಾಯ ಮಾಡಲು ವಂದೇ ಭಾರತ್ (Vande Bharat) ಎಕ್ಸ್ಪ್ರೆಸ್ಗೆ ಹತ್ತಿದ್ದರು. ಆದರೆ ಅವರು ಇಳಿಯುವ ಮೊದಲೇ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿದ್ದು, ಹೊರಬರಲಾಗದೇ ಒಳಗೆ ಸಿಲುಕಿದ್ದಾರೆ.

ಈ ಕುರಿತ ಘಟನೆಯನ್ನು ಚಿತ್ರಗಳ ಮೂಲಕ X (ಟ್ವಿಟರ್)ನಲ್ಲಿ ಹಂಚಿಕೊಂಡಿರುವ @imkosha ಎಂಬ ಯುವತಿ, ರೈಲಿನಲ್ಲಿ ಸಿಲುಕಿದ್ದವರ ಮಗಳಾಗಿದ್ದಾರೆ. ವಡೋದರಾದಿಂದ ಮುಂಬೈಗೆ ಮುಂಜಾನೆ ರೈಲಿನಲ್ಲಿ ಹೊರಟ ತನ್ನ ಹೆತ್ತವರ ಅನುಭವವನ್ನು ಯುವತಿ ವಿವರಿಸಿದ್ದಾರೆ. ಎರಡು ಭಾರವಾದ ಲಗ್ಗೇಜ್ ಇದ್ದರಿಂದ ನನ್ನ ತಂದೆ ಎಚ್ಚರಗೊಂಡು ತಾಯಿಯನ್ನು ನಿಲ್ದಾಣದಲ್ಲಿ ಬಿಡಲು ಹೊರಟಿದ್ದರು.
ರೈಲು ಬಂದಾಗ ಅವರು ಲಗ್ಗೇಜ್ ಅನ್ನು ಆಸನಗಳ ಬಳಿ ಇಟ್ಟು, ತಮ್ಮ ಪತ್ನಿ ಆರಾಮವಾಗಿ ಕುಳಿತುಕೊಳ್ಳಬಹುದು ಎಂದು ಖುಷಿಪಟ್ಟರು. ಆದರೆ ಅಷ್ಟರಲ್ಲೇ ಅನಿರೀಕ್ಷಿತವಾಗಿ ಸ್ವಯಂಚಾಲಿತ ಬಾಗಿಲು ನಿರಂತರವಾಗಿ ಬೀಪ್ ಮಾಡಲು ಪ್ರಾರಂಭಿಸಿವೆ. ತಂದೆ ಪ್ರತಿಕ್ರಿಯಿಸುವ ಮೊದಲೇ, ಚಲಿಸುವ ರೈಲಿನೊಳಗೆ ಸಿಕ್ಕಿಬಿದ್ದರು. ಟಿಕೆಟ್ ಕಲೆಕ್ಟರ್ ಅನ್ನು ಎಚ್ಚರಿಸಲು ಮತ್ತು ತುರ್ತು ನಿಲುಗಡೆಗಾಗಿ ಮನವಿ ಮಾಡಲು ಪ್ರಯತ್ನಿಸಿದರಾದರೂ, ಆಗಲೇ ರೈಲು ವೇಗವನ್ನು ಪಡೆದುಕೊಂಡಿತ್ತು.

ಆದ್ದರಿಂದ ಈಗ ನನ್ನ ತಾಯಿ ಮತ್ತು ತಂದೆ ಇಬ್ಬರೂ ಮೊದಲ ಬಾರಿಗೆ ವಂದೇ ಭಾರತ್ನಲ್ಲಿ ಪ್ರಯಾಣಿಸುತ್ತಿದ್ದಾರೆ. ನನ್ನ ತಾಯಿ ಮುಂಬೈವರೆಗೆ ಮತ್ತು ನನ್ನ ತಂದೆ ರಾತ್ರಿ ಉಡುಪಿನಲ್ಲಿ ಮುಂದಿನ ನಿಲ್ದಾಣವಾದ ಸೂರತ್ವರೆಗೆ ಪ್ರಯಾಣಿಸಿ, ವಡೋದರಾಕ್ಕೆ ಹಿಂದಿರುಗುವ ಟಿಕೆಟ್ ಹುಡುಕುತ್ತಿದ್ದಾರೆ. ನಮ್ಮ ಕಾರನ್ನು ವಡೋದರಾ ರೈಲ್ವೆ ನಿಲ್ದಾಣದ ಬಳಿ ಎಲ್ಲೋ ನಿಲ್ಲಿಸಿದ್ದಾರೆ ಎಂದು ತಮ್ಮ ಕಥೆಯನ್ನು ಯುವತಿ ಹಂಚಿಕೊಂಡಿದ್ದಾರೆ.
ಇದು ತಿಳಿದಿರಲಿ: ವಂದೇ ಭಾರತ್ ರೈಲುಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ. ಅಂದರೆ ಮೆಟ್ರೋ ರೈಲುಗಳಂತೆಯೇ ರೈಲು ಹೊರಡುವ ಮುನ್ನವೇ ಬಾಗಿಲುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬುದನ್ನು ಎಲ್ಲರೂ ತಿಳಿದಿರಬೇಕು. ಒಮ್ಮೆ ಬಾಗಿಲುಗಳು ಮುಂಚಿಕೊಂಡರೆ ಯಾರೂ ಕೂಡ ಹತ್ತುವುದು-ಇಳಿಯುವುದನ್ನು ಮಾಡಬಾರದು.
ಒಮ್ಮೆ ಬಾಗಿಲು ಮುಚ್ಚಿಕೊಂಡ ನಂತರ ರೈಲು ಪ್ಲಾಟ್ಫಾರ್ಮ್ನಿಂದ ಚಲಿಸಲು ಪ್ರಾರಂಭಿಸುತ್ತದೆ. ಆದರೆ ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಈ ಹಿಂದೆಯೂ ವ್ಯಕ್ತಿಯೊಬ್ಬರು ರೈಲನ್ನು ಹಿಡಿಯಲು ಯತ್ನಿಸಿ ಚಲಿಸುತ್ತಿದ್ದ ವಂದೇ ಭಾರತ್ ರೈಲಿನ ಹಿಂದೆ ಓಡಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಇಂತಹ ಘಟನೆಗಳು ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲ ಟಿಕೆಟ್ ಕಲೆಕ್ಟರ್ಗೂ ಆಗಿದೆ.
ರೈಲ್ವೆ ಟಿಟಿ ಕೂಡ ರೈಲನ್ನು ಹಿಡಿಯಲು ಓಡುತ್ತಾ ಹೋಗಿ ಕೆಳಗೆ ಬಿದ್ದಿರುವ ಉದಾಹರಣೆಗಳಿವೆ. ಹಲವರು ರೈಲ್ವೆ ಸಿಬ್ಬಂದಿಗಳಿಗೇ ಈ ಬಗ್ಗೆ ಇನ್ನೂ ತಿಳಿದಿಲ್ಲವಾದ್ದರಿಂದ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೈಲ್ವೇ ಆಡಳಿತವು ಕಾಲಕಾಲಕ್ಕೆ ಸ್ವಯಂಚಾಲಿತ ಬಾಗಿಲುಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications