Flood: ಭೀಕರ ಪ್ರವಾಹಕ್ಕೂ ಮುನ್ನ ಹರಿದ್ವಾರಕ್ಕೆ ಹೊರಟಿದ್ದ 53 ಭಕ್ತಾಧಿಗಳ ರಕ್ಷಣೆ!
ಕಳೆದ ಶುಕ್ರವಾರ (ನಿನ್ನೆ) ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ನದಿಯ ಪ್ರವಾಹದಲ್ಲಿ (Flood) 53 ಪ್ರಯಾಣಿಕರನ್ನು ಒಳಗೊಂಡಿದ್ದ ಬಸ್ ಸಿಲುಕಿದ್ದು, ಅಷ್ಟೂ ಪ್ರಯಾಣಿಕರನ್ನು ಯಶಸ್ವಿಯಾಗಿ ರಕ್ಷಸಲಾಗಿದೆ ಎಂದು ವರದಿಯಾಗಿದೆ. ಇವರೆಲ್ಲರು ನೇಪಾಳದಿಂದ ಹರಿದ್ವಾರಕ್ಕೆ ಹೊರಟಿದ್ದ ಯಾತ್ರಾರ್ಥಿಗಳು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಶುಕ್ರವಾರ ಬೆಳಗ್ಗೆ ನೇಪಾಳದಿಂದ ಹರಿದ್ವಾರಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ಬಸ್, ಬಿಜ್ನೋರ್-ಹರಿದ್ವಾರ ಎನ್ಎಚ್ 74 ರಲ್ಲಿ ಕೊಟವಾಲಿ ನದಿಯ ಬಲವಾದ ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ ಅನ್ನು ಜೆಸಿಬಿ ಮತ್ತು ಪ್ರೊಕ್ಲೈನ್ ಯಂತ್ರದ ಸಹಾಯದಿಂದ ಎಲ್ಲಾ 53 ಯಾತ್ರಾರ್ಥಿಗಳನ್ನು ನದಿಯಿಂದ ಸುರಕ್ಷಿತವಾಗಿ ಹೊರತರಲಾಗಿದೆ.

ವರದಿಗಳ ಪ್ರಕಾರ, ಗುಡ್ಡಗಾಡು ಪ್ರದೇಶಗಳಲ್ಲಿ ಆಗುತ್ತಿರುವ ಭಾರಿ ಮಳೆಯಿಂದಾಗಿ ಹರಿದ್ವಾರ ಮತ್ತು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಗಡಿಯಲ್ಲಿ ಹರಿಯುವ ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗಿ ಬಸ್ ಪ್ರವಾಹಕ್ಕೆ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ. ಪ್ರವಾಹ ಇನ್ನೂ ಹೆಚ್ಚಾಗುವ ಭೀತಿಯಿದ್ದು, ಸ್ಥಳಿಯರನ್ನು ಹೊರಬರದಂತೆ ಸೂಚಿನೆ ನೀಡಲಾಗಿದೆ.
ಇನ್ನು ನದಿಯಲ್ಲಿ ಸಿಲುಕಿದ್ದ ಬಸ್ ಪ್ರಯಾಣಿಕರು ಸುರಕ್ಷಿತವಾಗಿ ತೆರಳುವ ಪ್ರಯತ್ನದಲ್ಲಿ ಮೊಣಕಾಲು ಆಳದ ನೀರಿನಲ್ಲಿ ಸಾಗುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು. ನದಿ ನೀರಿನಲ್ಲಿ ಬಸ್ ಭಾಗಶಃ ಮುಳುಗಿದ್ದು, ನಂತರ ಜೆಸಿಬಿ (ಅರ್ಥ್ ಮೂವರ್) ಯಂತ್ರದ ಸಹಾಯದಿಂದ ಉಕ್ಕಿ ಹರಿಯುತ್ತಿದ್ದ ನದಿಯಿಂದ ಬಸ್ ಅನ್ನು ಹೊರತೆಗೆಯಲಾಯಿತು.

ಬಸ್ ಚಾಲಕ ಸೇರಿದಂತೆ ಎಲ್ಲಾ 53 ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗುರುವಾರ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹರಿದ್ವಾರ ಜಿಲ್ಲೆಯು ರಾಣಿಪುರ, ಜ್ವಾಲಾಪುರ ಮಾರುಕಟ್ಟೆ ಮತ್ತು ಮೋತಿ ಬಜಾರ್ ಸೇರಿದಂತೆ ನಗರದ ಹಲವಾರು ಪ್ರದೇಶಗಳು ತೀವ್ರ ಜಲಾವೃತಗೊಂಡಿವೆ.
ಭಾರತೀಯ ಹವಾಮಾನ ಇಲಾಖೆ (IMD) ಉತ್ತರ ಪ್ರದೇಶದ ಹಲವೆಡೆ ಸೆಪ್ಟೆಂಬರ್ 15 ರಿಂದ 17 ರವರೆಗೆ 64.5 mm ನಿಂದ 115.6 mm ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಹಾಗೆಯೇ ಸಂಭಾವ್ಯ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ "ಆರೆಂಜ್" ಅಲರ್ಟ್ ನೀಡಿದೆ. ಹಾಗೆಯೇ ಸೆಪ್ಟೆಂಬರ್ 18 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಅನ್ನು ಸಹ ಹೊರಡಿಸಿದೆ.

ಯುಪಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಉತ್ತರಾಖಂಡದ ಡೆಹ್ರಾಡೂನ್, ನೈನಿತಾಲ್, ಚಂಪಾವತ್, ಚಮೋಲಿ ಮತ್ತು ಬಾಗೇಶ್ವರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಡೆಹ್ರಾಡೂನ್ ಹವಾಮಾನ ಕೇಂದ್ರದ ನಿರ್ದೇಶಕ ಡಾ.ವಿಕ್ರಮ್ ಸಿಂಗ್ ಹೇಳಿದ್ದಾರೆ. ಹೆಚ್ಚುವರಿಯಾಗಿ, ಆಯಾ ಪ್ರದೇಶಗಳ ಜಿಲ್ಲಾಧಿಕಾರಿಗಳು ವಿಪತ್ತು ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಿದ್ದಾರೆ. ಅಲರ್ಟ್ ಮೋಡ್ನಲ್ಲಿರಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದಲ್ಲದೆ, ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ, ಉತ್ತರಾಖಂಡದ ಹಲವಾರು ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದ್ದು, ಭೂಕುಸಿತದ ಘಟನೆಗಳು ಆಗಾಗ್ಗೆ ವರದಿಯಾಗುತ್ತಿವೆ. ಭಾರೀ ಮಳೆಯಿಂದಾಗಿ ಪ್ರತ್ಯೇಕ ಸ್ಥಳಗಳಲ್ಲಿ ಸಿಲುಕಿರುವ ಪ್ರವಾಸಿಗರಿಗೆ ತೀವ್ರ ತೊಂದರೆಯಾಗಿದೆ. ಇನ್ನೂ ಕೆಲ ದಿನಗಳು ಹೀಗೆ ಮುಂದುವರಿಯಲಿದ್ದು, ಮುಂದಿನ ಆದೇಶದವರೆಗೆ ಕಾಯಬೇಕಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications