ರಸ್ತೆ ಅಪಘಾತಗಳನ್ನು ತಡೆಯಲು ನೆರವಾಗಲಿದೆ ಈ ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಂ
ಹಿಮಾಚಲ ಪ್ರದೇಶದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಂಡಿಯ ಸಂಶೋಧಕರು ಸಂಚಾರ ನಿರ್ವಹಣೆಯಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಹಾಗೂ ಹೈ-ಟರ್ನ್ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಯಲು ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಸಂಶೋಧಕರು ಈ ವ್ಯವಸ್ಥೆಗೆ ಪೇಟೆಂಟ್ ಕೂಡ ಪಡೆದಿದ್ದಾರೆ. ಈ ಸಿಸ್ಟಂನಿಂದಾಗಿ ಅಪಾಯಕಾರಿ ತಿರುವುಗಳಲ್ಲಿ, ಮುಂಭಾಗದಿಂದ ಬರುವ ವಾಹನಗಳ ಸಂಖ್ಯೆ, ವೇಗ ಹಾಗೂ ದಿಕ್ಕಿನ ಬಗ್ಗೆ ವಾಹನ ಸವಾರರು ಮಂಜು, ಹಿಮ ಹಾಗೂ ಕೆಟ್ಟ ವಾತಾವರಣದಲ್ಲಿಯೂ ಮುನ್ಸೂಚನೆ ಪಡೆಯಬಹುದು. ಇದರಿಂದ ಅಪಘಾತಗಳಾಗುವುದು ತಪ್ಪುತ್ತದೆ. ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಂನಿಂದ ಇದು ಸಾಧ್ಯವಾಗಲಿದೆ.

ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ಅಪಘಾತಗಳು ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಮ್ಯಾನುಯಲ್ ವ್ಯವಸ್ಥೆಗೆ ನಿಜಕ್ಕೂ ಸವಾಲಾಗಿದೆ. ಈ ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರ ಹಸ್ತಕ್ಷೇಪ ಹಾಗೂ ಕಾನ್ವೆಕ್ಸ್ ಮಿರರ್ ಗಳಂತಹ ತಂತ್ರಗಳು ಸಾಮಾನ್ಯವಾಗಿ ನೆರವಿಗೆ ಬರುತ್ತವೆ. ಆದರೆ ಮಳೆ, ಹಿಮ ಹಾಗೂ ಪ್ರತಿಕೂಲ ಹವಾಮಾನದಂತಹ ತೀವ್ರ ಪರಿಸ್ಥಿತಿಗಳಲ್ಲಿ ಅವುಗಳ ನಿರ್ವಹಣೆ ಕಷ್ಟವಾಗುತ್ತದೆ.

ವಾಹನಗಳಲ್ಲಿ ವಿಶೇಷ ರೀತಿಯ ಉಪಕರಣಗಳನ್ನು ಅಳವಡಿಸುವ ಮೂಲಕ ಈ ಸಿಸ್ಟಂನ ಪ್ರಯೋಜನವನ್ನು ಪಡೆಯಬಹುದು. ಈ ಸಿಸ್ಟಂ ಜಿಪಿಎಸ್ ನಂತೆ ಕಾರ್ಯ ನಿರ್ವಹಿಸುತ್ತದೆ. ಈ ಸಿಸ್ಟಂನ ಮೂಲ ಮಾದರಿಯ ಬೆಲೆ 20 ಸಾವಿರ ರೂಪಾಯಿಗಳಿಗಿಂತ ಕಡಿಮೆಯಾಗಿದೆ. ಈ ಸಿಸ್ಟಂನ ವಾಣಿಜ್ಯ ಅಂಶಗಳ ಮೇಲೆ ಕೆಲಸ ಮಾಡಲಾಗುತ್ತಿದೆ.

ಈ ತಂತ್ರಜ್ಞಾನವು ತೀಕ್ಷ್ಣವಾದ ತಿರುವುಗಳಲ್ಲಿ ಅಪಘಾತಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಸಿಸ್ಟಂನಿಂದಾಗಿ ಸಂಚಾರ ನಿರ್ವಹಣೆಯಲ್ಲಿ ಸಿಬ್ಬಂದಿಗಳ ನಿಯೋಜನೆಯೂ ಕಡಿಮೆ ಆಗಲಿದೆ. ಈ ಸಿಸ್ಟಂ ತಿರುವಿನಲ್ಲಿ ಎಚ್ಚರಿಕೆ ನೀಡುವ ಜೊತೆಗೆ ವಾಹನಗಳನ್ನು ಎಣಿಸುವ ಕೆಲಸವನ್ನೂ ಸಹ ಮಾಡುತ್ತದೆ.

ಈ ಸಿಸ್ಟಂನ ಸುಧಾರಿತ ಆವೃತ್ತಿಯು ವಾಹನದ ತೂಕವನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಈ ಡೇಟಾವನ್ನು ಬಳಸಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಮಿಷಿನ್ ಲರ್ನಿಂಗ್, ಟ್ರಾಫಿಕ್ ಮ್ಯಾನೇಜ್ ಮೆಂಟ್, ರೋಡ್ ಆಕ್ಸೆಸ್, ಹಾಗೂ ನಿರ್ಬಂಧಿತ ಪ್ರದೇಶಗಳಲ್ಲಿ ಸಂಚಾರ ನಿಯಂತ್ರಣವನ್ನು ಸಹ ಮಾಡಬಹುದು.

ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ ನಂತರ, ಟ್ರಾಫಿಕ್ ಜಾಮ್, ಟ್ರಾಫಿಕ್ ಉಲ್ಬಣ ಹಾಗೂ ತಿರುವುಗಳ ಬಗ್ಗೆ ಎಚ್ಚರಿಕೆಗಳನ್ನು ಸಹ ನೀಡಬಹುದು. ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಂ ಅನ್ನು ಐಐಟಿ ಮಂಡಿಯ ತಂಡವೊಂದು ಅಭಿವೃದ್ಧಿಪಡಿಸಿದೆ. ಈ ಸಿಸ್ಟಂ ಮೈಕ್ರೋ ಎಲೆಕ್ಟ್ರೋ ಮೆಕ್ಯಾನಿಕಲ್ ಸಿಸ್ಟಂ (ಎಂಇಎಂಎಸ್) ಹಾಗೂ ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ) ತಂತ್ರಜ್ಞಾನಗಳನ್ನು ಬಳಸಿಕೊಂಡು ವಾಹನಗಳ ವೇಗದ ಪತ್ತೆ, ವಾಹನಗಳ ಸಂಖ್ಯೆ, ಉತ್ತಮ ನಿಯಂತ್ರಣ ಹಾಗೂ ರಸ್ತೆ ಬಳಕೆಗೆ ಸಹಾಯ ಮಾಡುತ್ತದೆ.

ವಿಶ್ವದಾದ್ಯಂತ ಪ್ರತಿ ದಿನ ಸಹಸ್ರಾರು ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ವಿಶ್ವದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ.

ಸಂಚಾರ ನಿಯಮಗಳ ಉಲ್ಲಂಘನೆಯೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದು ದೃಢ ಪಟ್ಟಿದೆ. ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ತಡೆಯಲು ಕೇಂದ್ರ ಸರ್ಕಾರವು 2019 ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು.

ಈ ಹೊಸ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಈ ಕಾಯ್ದೆ ಜಾರಿಗೆ ಬಂದ ಕೆಲವು ದಿನಗಳವರೆಗೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು. ನಂತರದ ದಿನಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಯಥಾ ಪ್ರಕಾರವಾಗಿ ಸಾಗುತ್ತಿದೆ.

ಇದರ ಜೊತೆಗೆ ಕೇಂದ್ರ ಸರ್ಕಾರವು ಹೊಸದಾಗಿ ಬಿಡುಗಡೆಯಾಗುವ ಎಲ್ಲಾ ವಾಹನಗಳಲ್ಲಿ ಸುರಕ್ಷತಾ ಫೀಚರ್ ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ವಾಹನ ತಯಾರಕ ಕಂಪನಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದೆ. ಎಲ್ಲಾ ಕಾರುಗಳಲ್ಲಿ ಕಡ್ಡಾಯವಾಗಿ ಏರ್ ಬ್ಯಾಗ್ ಅಳವಡಿಸುವಂತೆ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ.

ಇದರ ಜೊತೆಗೆ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ಡಿಆರ್ಎಲ್ ಗಳನ್ನು ಕಡ್ಡಾಯಗೊಳಿಸಲಾಗಿದೆ. ಹೊಸದಾಗಿ ಬಿಡುಗಡೆಯಾಗುವ ದ್ವಿಚಕ್ರ ವಾಹನಗಳು ಸಿಬಿಎಸ್ ಹೊಂದಿರುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ. ವಾಹನಗಳಲ್ಲಿ ಸುರಕ್ಷತಾ ಫೀಚರ್ ಗಳನ್ನು ಅಳವಡಿಸುವ ಮೂಲಕ ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications