ದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಕಳೆದ ವರ್ಷ ಭಾರತೀಯರು ಪಾವತಿಸಿದ ದಂಡದ ಮೊತ್ತವಿದು
ಭಾರತದ ವಿವಿಧ ರಾಜ್ಯಗಳ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಇನ್ನೂ ಹಲವು ನಗರಗಳಲ್ಲಿ ನಿತ್ಯ ವಾಹನ ದಟ್ಟಣೆಯಿಂದಾಗಿ ಟ್ರಾಫಿಕ್ ಸಮಸ್ಯೆಗೆ ಜನರು ನಲುಗುತ್ತಿದ್ದಾರೆ. ಈ ನಡುವೆ ತರಾತುರಿಯಲ್ಲಿ ಅದೆಷ್ಟೋ ಮಂದಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ, ಇನ್ನು ಕೆಲವರು ಮನಸ್ಸೋ ಇಚ್ಛೆ ವಾಹನ ಚಲಾಯಿಸಿ ನಿಯಮ ಉಲ್ಲಂಘಿಸುತ್ತಿದ್ದಾರೆ.

ಇಂತಹ ಪ್ರಕರಣಗಳು ಪ್ರತಿ ವರ್ಷ ಹಚ್ಚಾಗುತ್ತಲೇ ಇವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇನ್ನು 2021 ರಲ್ಲಿ ಭಾರತಿಯರು ಟ್ರಾಫಿಕ್ ನಿಯಮ ಉಲ್ಲಂಘಿಸಿ ಸರ್ಕಾರಕ್ಕೆ ದಂಡ ಪಾವತಿಸಿದ ಮೊತ್ತವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯರು 2021 ರಲ್ಲಿ 1,899 ಕೋಟಿ ರೂ. ಮೊತ್ತದ ಟ್ರಾಫಿಕ್ ಚಲನ್ಗಳನ್ನು ಪಾವತಿಸಿದ್ದಾರೆ. ಕಳೆದ ವರ್ಷ ಭಾರತದಾದ್ಯಂತ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 1.98 ಕೋಟಿ ವಾಹನಗಳಿಗೆ ಚಲನ್ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಈ ಚಲನ್ಗಳಲ್ಲಿ ಶೇಕಡಾ 35 ಕ್ಕಿಂತ ಹೆಚ್ಚು ದೆಹಲಿಯಲ್ಲಿ ನೀಡಲಾಗಿದೆ.

ಗಡ್ಕರಿ ಅವರು ಗುರುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ದೆಹಲಿಯಲ್ಲಿ 71,89,824 ಚಲನ್ಗಳನ್ನು ನೀಡಲಾಗಿದೆ. ರಾಷ್ಟ್ರ ರಾಜಧಾನಿಯ ನಂತರ ತಮಿಳುನಾಡು 36,26,037 ಚಲನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಕೇರಳ ಇದೆ. ಕೇರಳ ರಾಜ್ಯದ 17,41,932 ವಾಹನ ಮಾಲೀಕರಿಗೆ ಚಲನ್ಗಳನ್ನು ನೀಡಲಾಗಿದೆ.

ಸರ್ಕಾರದ ಕೇಂದ್ರೀಕೃತ ಡೇಟಾಬೇಸ್ ಪ್ರಕಾರ, 1.98 ಕೋಟಿ ಚಲನ್ಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ರೋಡ್ ರೇಜ್ ಮತ್ತು ರಾಶ್ ಡ್ರೈವಿಂಗ್ ಪ್ರಕರಣಗಳೇ ದಾಖಲಾಗಿವೆ. ಜನವರಿ 1 ರಿಂದ ಮಾರ್ಚ್ 15, 2022ರ ನಡುವೆ ದೇಶಾದ್ಯಂತ ಸಂಚಾರಿ ನಿಯಮ ಉಲ್ಲಂಘನೆಗಾಗಿ ಈಗಾಗಲೇ 417 ಕೋಟಿ ರೂ. ಮೊತ್ತದ 40 ಲಕ್ಷ ಚಲನ್ಗಳನ್ನು ಹೊರಡಿಸಿದ್ದಾರೆ. ಈ ವರ್ಷ ಮುಗಿಯಲು ಇನ್ನು 9 ತಿಂಗಳು ಬಾಕಿ ಇದ್ದು, ವರ್ಷಾಂತ್ಯಕ್ಕೆ ದಂಡದ ಮೊತ್ತ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

2017 ಮತ್ತು 2019ರ ನಡುವೆ, ಹೊಸ ಮೋಟಾರು ವಾಹನ ಕಾಯ್ದೆಯ ಮೊದಲು ಸಂಚಾರ ಉಲ್ಲಂಘನೆಗಳ ಸಂಖ್ಯೆ 1,38,72,098 ಇತ್ತು ಎಂದು ಗಡ್ಕರಿ ತಿಳಿಸಿದರು. ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ 2019ರ ಅನುಷ್ಠಾನದ ನಂತರ, ಪ್ರಕರಣಗಳ ಸಂಖ್ಯೆ 4,85,18,314ಕ್ಕೆ ಏರಿದೆ. ಹೊಸ ಮಸೂದೆಯನ್ನು ಆಗಸ್ಟ್ 5 2019 ರಂದು ಸಂಸತ್ತು ಅಂಗೀಕರಿಸಿತ್ತು.

ಇದು ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಮತ್ತು ಡ್ರೈವಿಂಗ್ ಲೈಸೆನ್ಸ್ಗಳನ್ನು ನೀಡುವಂತಹ ಸಂಚಾರ ನಿಯಮಗಳನ್ನು ಬಿಗಿಗೊಳಿಸುವುದು ಮತ್ತು ಉಲ್ಲಂಘನೆಗಳಿಗೆ ಕಠಿಣ ದಂಡವನ್ನು ವಿಧಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 9 ಆಗಸ್ಟ್ 2019 ರಂದು ಈ ಮಸೂದೆಗೆ ಒಪ್ಪಿಗೆಯನ್ನು ನೀಡಿದ್ದರು.

ಭಾರತದಲ್ಲಿ ಸಂಚಾರ ಉಲ್ಲಂಘನೆಯನ್ನು ಕಡಿಮೆ ಮಾಡಲು ಆಯಾ ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಹೆಚ್ಚಿನ ರಸ್ತೆ ಅಪಘಾತಗಳಿಗೆ ಟ್ರಾಫಿಕ್ ಉಲ್ಲಂಘನೆಯೇ ಪ್ರಮುಖ ಕಾರಣವಾಗಿದೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಪ್ರತಿ ವರ್ಷ ಉಲ್ಲಂಘನೆಯ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇನ್ನು ಕೇಂದ್ರ, ರಾಜ್ಯ ಸರ್ಕಾರಗಳು ವಾಹನಗಳಲ್ಲಿ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸುವುದನ್ನು ಈಗಾಗಲೇ ಕಡ್ಡಾಯಗೊಳಿವೆ. ಭಾರತದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಈ ಎಲ್ಲಾ ಕ್ರಮಗಳ ಗುರಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ಇದಲ್ಲದೇ ಸಚಿವ ನಿತಿನ್ ಗಡ್ಕರಿ ಅವರು, ಈ ಹಿಂದೆ ಸಂಸತ್ತಿನಲ್ಲಿ ಹಲವು ಘೋಷಣೆಗಳನ್ನು ಮಾಡಿದ್ದಾರೆ. 60 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ಕಾರ್ಯನಿರ್ವಹಿಸುವ ಟೋಲ್ಗೇಟ್ಗಳನ್ನು ತೆಗೆದುಹಾಕಲು ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ಭಾರತದಲ್ಲಿ ಎಷ್ಟು ಎಲೆಕ್ಟ್ರಿಕ್ ವಾಹನಗಳಿವೆ ಹಾಗೂ ವಾಯು ಮಾಲಿನ್ಯ ತಡೆಗಟ್ಟಲು ಇವಿ ವಾಹನಗಳಿಗೆ ಉತ್ತೇಜನ ಕುರಿತು ಮಾತನಾಡಿದ್ದರು.

ಅವರ ಈ ಮ್ಯಾನಿಫೆಸ್ಟೋವನ್ನು ಗಮನಿಸಿದರೆ ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರಗಳೂ ತಮ್ಮ ಪಾಲಿನ ಸಬ್ಸಿಡಿ, ರಸ್ತೆ ತೆರಿಗೆಯಿಂದ ವಿನಾಯಿತಿ, ನೋಂದಣಿ ಶುಲ್ಕದಂತಹ ಕ್ರಮಗಳ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುತ್ತಿವೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳ ಪ್ರಚಾರದಲ್ಲಿ ದೆಹಲಿಯು ಭಾರತಕ್ಕೆ ಪೂರ್ವನಿದರ್ಶನವನ್ನು ನೀಡಿದೆ.

ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಕಡಿಮೆ ದರದಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ, ಇದರಿಂದಾಗಿ ಜನರು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು. ದೆಹಲಿಯನ್ನು ಭಾರತದ ಎಲೆಕ್ಟ್ರಿಕ್ ವಾಹನಗಳ ರಾಜಧಾನಿಯನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ.


Click it and Unblock the Notifications