ಬೇಜವಾಬ್ದಾರಿಯುತ ಪೋಷಕರು: ಮಕ್ಕಳ ಜೀವವನ್ನು ಅಪಾಯಕ್ಕೆ ದೂಡಿದವರಿಗೆ ಬಿತ್ತು ಭಾರೀ ದಂಡ
ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ರಸ್ತೆಗಿಳಿದು ಸವಾರರಿಗೆ ದಂಡ ವಿಧಿಸುವುದು ಅಥವಾ ನಿಯಮಗಳನ್ನು ಪಾಲನೆ ಮಾಡಿ ಎಂದು ಎಚ್ಚರಿಕೆ ನೀಡುವ ಅಗತ್ಯವೇ ಇಲ್ಲ. ಆಧುನಿಕ ತಂತ್ರಜ್ಞಾನವು ಪೊಲೀಸರನ್ನು ರಸ್ತೆಗಿಳಿಯದೇ ನಿಯಮ ಉಲ್ಲಂಘಿಸಿದವರನ್ನು ಪತ್ತೆಹಚ್ಚಲು ಸಹಕರಿಸುತ್ತದೆ.

ನಗರ ಪ್ರದೇಶಗಳಲ್ಲಿ ನೀವು ಸಂಚರಿಸುವ ಪ್ರತಿಯೊಂದು ರಸ್ತೆಯು ಸಿಸಿಟಿವಿಯನ್ನು ಒಳಗೊಂಡಿರುವುದರಿಂದ ನಾವು ನಿಯಮ ಉಲ್ಲಂಘಿಸಿದರೆ ಕೂಡಲೇ ಪತ್ತೆಹಚ್ಚಬಹುದು. ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಇತರ ಅಪರಾಧಗಳ ಮೇಲೆ ನಿಗಾ ಇಡಲು ಪೊಲೀಸರು ಈಗ ಆಧುನಿಕ ಈ ತಂತ್ರಜ್ಞಾನವನ್ನು ಅವಲಂಬಿಸಿದ್ದಾರೆ.

ಇದೊಂದೇ ಅಲ್ಲದೇ ಅನೇಕ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಿಂದ ಸೋಷಿಯಲ್ ಮಿಡಿಯಾ ಕೂಡ ಇಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂತೆಯೇ ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಘಟನೆಯೊಂದರ ಕುರಿತ ವಿಡಿಯೋ ವೈರಲ್ ಆಗಿ ಪೊಲೀಸರಿಗೆ ತಲುಪಿದೆ.

ತೆಲಂಗಾಣ ರಾಜ್ಯ ರಾಜಧಾನಿಯಾದ ಹೈದರಾಬಾದ್ನ ಮುಖ್ಯ ರಸ್ತೆಯೊಂದರಲ್ಲಿ ಮಕ್ಕಳು ತೆರೆದಿರುವ ಕಾರಿನ ಡಿಕ್ಕಿ ಜಾಗದಲ್ಲಿ ಕುಳಿತಿರುವಾಗ ಕಾರು ಚಾಲನೆ ಮಾಡಿದ್ದಕ್ಕಾಗಿ ಕಾರ್ ಡ್ರೈವರ್ಗೆ ದಂಡ ವಿಧಿಸಲಾಗಿದೆ. ವಿಡಿಯೋವನ್ನು ಸೋಂಚೋ ಜರಾ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕಿರು ವೀಡಿಯೊದಲ್ಲಿ, ಹ್ಯುಂಡೈ ಗ್ರಾಂಡ್ i10 ಅದರ ಟೈಲ್ಗೇಟ್ ಅನ್ನು ಸಂಪೂರ್ಣವಾಗಿ ತೆರೆದಿದ್ದಾಗ ಮೂವರು ಮಕ್ಕಳು ಒಳಗೆ ಕುಳಿತಿರುವುದನ್ನು ಕಾಣಬಹುದು.

"ಅವರು ಎಷ್ಟು ಬೇಜವಾಬ್ದಾರಿಯುತ ಪೋಷಕರು?" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ದಯವಿಟ್ಟು ಪರಿಶೀಲಿಸಿ ಕ್ರಮ ಕೈಗೊಳ್ಳಿ. KTRTRS TelanganaCOPs HiHyderabad tsrtcmdoffice" ಎಂದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.

ಡಿಕ್ಕಿ ಬಾಗಿಲು ಸಂಪೂರ್ಣವಾಗಿ ತೆರೆದಿರುವುದರಿಂದ, ಕಾರಿನಲ್ಲಿರುವ ಇತರ ಪ್ರಯಾಣಿಕರ ಸ್ಪಷ್ಟ ನೋಟವನ್ನು ನಾವು ನೋಡಬಹುದು. ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರೆ ಮುಂಭಾಗದಲ್ಲಿ ಇಬ್ಬರು ಕುಳಿತಿದ್ದಾರೆ. ಚಾಲಕ ಮಕ್ಕಳನ್ನು ಡಿಕ್ಕಿ ಜಾಗದಲ್ಲಿ ಕೂರಿಸುವ ಮೂಲಕ ಅವರ ಜೀವವನ್ನೇ ಅಪಾಯಕ್ಕೆ ಸಿಲುಕಿಸಿರುವುದು ಗಂಭೀರ ಅಪರಾಧವಾಗಿದೆ.

ಸೈಬರಾಬಾದ್ ಟ್ರಾಫಿಕ್ ಪೊಲೀಸರು ಟ್ವೀಟ್ಗೆ ಪ್ರತಿಕ್ರಿಯಿಸಿ ವೀಡಿಯೊಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡ ವ್ಯಕ್ತಿ ಮಾಹಿತಿಯನ್ನು ಪಡೆದು, ವಾಹನದ ವಿರುದ್ಧ ಇ-ಚಲನ್ ಹೊರಡಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಹ್ಯುಂಡೈ ಗ್ರಾಂಡ್ ಐ10 ನ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ನಂತರ ಅನೇಕ ಬಳಕೆದಾರರು ಚಾಲಕನ ಬೇಜವಾಬ್ದಾರಿ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೇಕ ಟ್ವಿಟ್ಟರ್ ಬಳಕೆದಾರರು ಆ ಪೋಷಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿದರೆ, ಇನ್ನು ಕೆಲವರು ಈ ಕೃತ್ಯಕ್ಕಾಗಿ ಚಾಲಕನ ಪರವಾನಗಿಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ. ಭಾರತದಲ್ಲಿ ಸಾಮರ್ಥಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಓಡಾಡುವ ಕಾರುಗಳನ್ನು ನಾವು ನೋಡಿದ್ದೇವೆ.

ಕಾರು ತಯಾರಕರು ಸೂಚಿಸಿದ್ದಕ್ಕಿಂತ ಹೆಚ್ಚಿನ ಜನರೊಂದಿಗೆ ನೀವು ಕಾರನ್ನು ಲೋಡ್ ಮಾಡಿದಾಗ, ಅದು ಸಸ್ಪೆನ್ಷನ್ ಮತ್ತು ಎಂಜಿನ್ನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ. ಕಾರಿನ ಒಟ್ಟಾರೆ ತೂಕವು ಹೆಚ್ಚಾಗುವುದರಿಂದ ಕಾರಿನ್ನು ನಿರ್ವಹಿಸುವಲ್ಲಿ ಬದಲಾವಣೆ ಇರುತ್ತದೆ. ಇದರಿಂದ ಕಾರಿನ ಎಂಜಿನ್ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಹಾಗಾಗಿ ವಾಹನದ ಇಂಧನ ದಕ್ಷತೆಯು ಕಡಿಮೆಯಾಗುವುದು, ವೇಗ ಕಡಿಮೆಯಾಗುವುದು, ಕಾರಿನಲ್ಲಿ ಹೆಚ್ಚಿನ ತೂಕವಿದ್ದರೆ ಕಾರಿನ ಬ್ರೇಕಿಂಗ್ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಕಾರಿಗೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ವಿಶೇಷವಾಗಿ ಟೈಲ್ ಗೇಟ್ ತೆರೆದಿರುವಾಗ ಬೂಟ್ನಲ್ಲಿ ಕುಳಿತುಕೊಳ್ಳುವುದು ತುಂಬಾ ಅಪಾಯಕಾರಿ.

ಕಾರಿನಲ್ಲಿ ಬೂಟ್ ಸ್ಪೇಸ್ ಇರುವುದು ಲಗೇಜ್ ಇಡಲು ಮಾತ್ರ, ಆದರೆ ಈ ವಿಡಿಯೋವನ್ನು ನೋಡಿದರೆ ಮಕ್ಕಳನ್ನು ಸಾಗಿಸಲು ಇರುವಂತಿದೆ. ಇದು ಸುರಕ್ಷಿತವಲ್ಲ. ಆದ್ದರಿಂದ ಪೊಲೀಸರು ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆಯೂ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಭಾರತದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದರ ಅಂಗವಾಗಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂಬಿತ್ಯಾದಿ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೆ ಇತ್ತೀಚೆಗಷ್ಟೇ ಎರಡನೇ ಸಾಲಿನಲ್ಲಿರುವ ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಧರಿಸಬೇಕು ಎಂಬ ಹೊಸ ನಿಯಮವನ್ನು ಕೇಂದ್ರ ಸರ್ಕಾರ ತಂದಿದೆ. ಇದು ಶೀಘ್ರದಲ್ಲೇ ಜಾರಿಗೆ ಬರಲಿದೆ.

ಡ್ರೈವ್ ಸ್ಪಾರ್ಕ್ ನ ಅಭಿಪ್ರಾಯ
ರಸ್ತೆಯಲ್ಲಿ ನಾವು ಎಷ್ಟೇ ಜಾಗರೂಕತೆ ವಹಿಸಿದರೂ ಒಮ್ಮೊಮ್ಮೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಇನ್ನು ಅಜಾಗರೂಕತೆಯಿಂದ ಸಾಗಿದರೆ ಅದರ ಪರಿಣಾಮ ಹೇಳಬೇಕಾಗಿಲ್ಲ. ಸುತ್ತಮುತ್ತಲಿನ ವಾಹನ ಸವಾರರಿಗೂ ಅಪಾಯ ತಂದೊಡ್ಡುತ್ತದೆ. ಹಾಗಾಗಿ ಪೊಲೀಸರು ಇಂತಹ ಕೃತ್ಯಗಳನ್ನು ಖಂಡಿಸಿ, ಮತ್ತೊಮ್ಮೆ ಇಂತಹ ಕೃತ್ಯಗಳನ್ನು ಎಸಗುವವರು ಭಯಭೀಳುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.


Click it and Unblock the Notifications