ಲಾಕ್ ಡೌನ್ ಹಿನ್ನೆಲೆ: ಬಡವರ ಹಸಿವು ನೀಗಿಸಿದ ಖ್ಯಾತ ಟಯರ್ ಕಂಪನಿ
ಮೊದಲಿಗೆ ಚೀನಾದ ವುಹಾನ್ನಲ್ಲಿ ಕಂಡು ಬಂದ ಕರೋನಾ ವೈರಸ್ ಈಗ ಪ್ರಪಂಚದಾದ್ಯಂತ ಹರಡುತ್ತಿದೆ. ಈ ವೈರಸ್ ನ ಹಾವಳಿಯಿಂದಾಗಿ ಪ್ರಪಂಚದ ಎಲ್ಲಾ ದೇಶಗಳು ತತ್ತರಿಸಿವೆ. ಇದರಿಂದ ಭಾರತವೂ ಹೊರತಾಗಿಲ್ಲ.

ಕೇಂದ್ರ ಸರ್ಕಾರವು ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಏಪ್ರಿಲ್ 14ರವರೆಗೆ ಲಾಕ್ ಡೌನ್ ಜಾರಿಗೊಳಿಸಿದೆ. ಈ ಲಾಕ್ ಡೌನ್ ಬಡವರ ಹಾಗೂ ಕೂಲಿ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಿದೆ. ತಮ್ಮ ಊರು ಬಿಟ್ಟು ಬೇರೆ ಊರುಗಳಿಗೆ ಬಂದಿದ್ದ ಕಾರ್ಮಿಕರು ಹೆಚ್ಚು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಇವರು ತಮ್ಮ ಸ್ವಂತ ಊರುಗಳಿಗೆ ತೆರಳಲು ಯಾವುದೇ ಸಾರಿಗೆ ಸೌಲಭ್ಯವಿಲ್ಲದ ಕಾರಣಕ್ಕೆ ಈಗ ಇರುವ ಜಾಗದಲ್ಲೇ ಇರುವಂತೆ ತಿಳಿಸಲಾಗಿದೆ. ಆದರೆ ಯಾವುದೇ ಕೆಲಸವಿಲ್ಲದೇ, ಹಣವಿಲ್ಲದೇ, ನೆಲೆಸಲು ಜಾಗವಿಲ್ಲದೇ ಪರದಾಡುತ್ತಿದ್ದಾರೆ.

ಇವರಿಗೆ ನೆಲೆ ನೀಡಿ, ಊಟದ ವ್ಯವಸ್ಥೆ ಮಾಡಬೇಕಿದ್ದ ಮಾಲೀಕರು ಕೈಚೆಲ್ಲಿದ್ದಾರೆ. ಈ ಕಾರಣ ಇಂತಹವರಿಗಾಗಿ ನೆರವಾಗಲು ಹಲವಾರು ಜನರು ಮುಂದೆ ಬಂದಿದ್ದಾರೆ. ಅವುಗಳಲ್ಲಿ ಖ್ಯಾತ ಟಯರ್ ಕಂಪನಿಯಾದ ಜೆಕೆ ಟಯರ್ ಸಹ ಒಂದು.

ಕಂಪನಿಯು ಕೆಲವು ಖಾಸಗಿ ಚಾರಿಟಿಗಳೊಂದಿಗೆ ಸೇರಿ ತನ್ನ ಉತ್ಪಾದನಾ ಘಟಕಗಳ ಮೂಲಕ ಅಗತ್ಯವಿರುವವರಿಗೆ ಹಾಗೂ ನಿರ್ಗತಿಕರಿಗೆ ಆಹಾರವನ್ನು ಒದಗಿಸುವುದಾಗಿ ತಿಳಿಸಿದೆ. ಕಂಪನಿಯು ದಿನಕ್ಕೆ 10 ಸಾವಿರ ಜನರಿಗೆ ಆಹಾರವನ್ನು ನೀಡಲು ಯೋಜಿಸಿದೆ.

ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಆಹಾರ, ನೀರು ನೀಡಲಾಗುವುದೆಂದು ಎಂದು ಜೆಕೆ ಟಯರ್ಸ್ ತಿಳಿಸಿದೆ. ಈಗಾಗಲೇ, ಕಂಪನಿಯು ಗ್ರಾಮೀಣ ಪ್ರದೇಶದಲ್ಲಿರುವ 50ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದೆ.

ಇದರ ಜೊತೆಗೆ ಅಲ್ಲಿ ಕೋವಿಡ್ 19 ವೈರಸ್ ಹಾಗೂ ಅದರ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ದೇಶಾದ್ಯಂತ ಸುಮಾರು 5 ಸಾವಿರ ಜೆಕೆ ಟಯರ್ ಉದ್ಯೋಗಿಗಳನ್ನು ನಿಯೋಜಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಗ್ರಾಮೀಣ ಪ್ರದೇಶದಲ್ಲಿರುವ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ನೀಡುವ ಯೋಜನೆಯನ್ನು ಸಹ ಆರಂಭಿಸಲಾಗಿದೆ. ಅನೇಕ ರಾಜ್ಯಗಳಲ್ಲಿ ಸರ್ಕಾರಗಳು ನೀಡುವ ಆಹಾರವು ಕಳಪೆಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಜೆಕೆ ಟಯರ್ ಗುಣಮಟ್ಟದ ಆಹಾರವನ್ನು ನೀಡುವ ನಿರೀಕ್ಷೆಗಳಿವೆ.

ಜೆಕೆ ಟಯರ್ ಈ ಸೇವೆಯನ್ನು ದೇಶದ ಒಂದು ಭಾಗದಲ್ಲಿ ಮಾತ್ರವಲ್ಲದೆ, ಎಲ್ಲಾ ಭಾಗಗಳಲ್ಲಿಯೂ ನೀಡಲಿದೆ. ಊಟದ ಜೊತೆಗೆ 150ಕ್ಕೂ ಹೆಚ್ಚು ಹಳ್ಳಿಗಳಿಗೆ ಕರೋನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಆಂಟಿಸೆಪ್ಟಿಕ್ ಹಾಗೂ ಮಾಸ್ಕ್ ಗಳನ್ನು ನೀಡಲಾಗಿದೆ ಎಂದು ಜೆಕೆ ಟಯರ್ಸ್ ಹೇಳಿದೆ.

ಕರೋನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಈ ಲಾಕ್ ಡೌನ್ ಜಾರಿಯಲ್ಲಿದೆ ಎಂದು ಸರ್ಕಾರ ಹೇಳಿದೆ. ಕರೋನಾ ವೈರಸ್ ಹರಡುತ್ತಿರುವ ತೀವ್ರತೆಯನ್ನು ಗಮನಿಸಿದರೆ, ಲಾಕ್ ಡೌನ್ ಅನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಿಸುವ ಸಾಧ್ಯತೆಗಳಿವೆ.


Click it and Unblock the Notifications