ಕರ್ನಾಟಕ: ಎಮ್ಮೆಗೆ ಗುದ್ದಿದ ಕಿಯಾ ಸೆಲ್ಟೋಸ್.. ಸಂಪೂರ್ಣ ಜಖಂ, ಪ್ರಯಾಣಿಕರಿಗೆ ಏನಾಯಿತು?
ದೇಶದ ರಸ್ತೆಗಳಲ್ಲಿ ಜಾನುವಾರುಗಳು ಅಥವಾ ಕಾಡುಪ್ರಾಣಿಗಳು ಏಕಾಏಕಿ ಪ್ರವೇಶಿಸಿ, ಒಂದಿಲ್ಲೊಂದು ಅಪಘಾತಕ್ಕೆ ಕಾರಣವಾಗುತ್ತವೆ. ಕರ್ನಾಟಕದ (Karnataka) ಹೆದ್ದಾರಿಯೊಂದರಲ್ಲಿ ಅಂತಹದ್ದೇ ಘಟನೆ ವರದಿಯಾಗಿದ್ದು, ಕಿಯಾ ಸೆಲ್ಟೋಸ್ (Kia Seltos), ಎಮ್ಮೆಗೆ (buffalo) ಗುದ್ದಿದೆ. ಪರಿಣಾಮ, ಕಾರು ಸಂಪೂರ್ಣ ಜಖಂಗೊಂಡಿದ್ದು, ಪ್ರಯಾಣಿಕರಿಗೆ ಏನಾಯಿತು? ಆ ಬಗ್ಗೆ ಇಲ್ಲಿದೆ ಮಾಹಿತಿ.
ಅಪಘಾತದ ದೃಶ್ಯಾವಳಿಗಳು ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ (dashboard camera) ಸೆರೆಯಾಗಿದೆ. ಇದೊಂದು ನಾಲ್ಕು ಪಥದ ಹೆದ್ದಾರಿಯಾಗಿದ್ದು, ಕಿಯಾ ಸೆಲ್ಟೋಸ್ ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿರುತ್ತದೆ. ಕಾರಿನ ಹೈ ಬೀಮ್ ಹೆಡ್ಲೈಟ್ಸ್ ಕೂಡ ಆನ್ ಆಗಿದ್ದವು. ಸ್ವಲ್ಪ ದೂರ ಚಲಿಸಿದ ನಂತರ, ಇತರೆ ಕಾರುಗಳನ್ನು ಹಿಂದಿಕ್ಕಿ, ಮುಂದೆ ಹೋದಾಗ ರಸ್ತೆಯಲ್ಲಿ ಎಮ್ಮೆ ಕಾಣಿಸುತ್ತದೆ.

ಚಾಲಕ ಬ್ರೇಕ್ ಹಾಕಿದ್ದರೂ ಕಾರು ನಿಯಂತ್ರಣ ಕಳೆದುಕೊಳ್ಳುವ ಸಂಭಸಿವಿತ್ತು. ಅಷ್ಟರಲ್ಲಿ ಕಿಯಾ ಸೆಲ್ಟೋಸ್ ಭಾರೀ ವೇಗದಲ್ಲಿ ಎಮ್ಮೆಗೆ ಡಿಕ್ಕಿಯಾಗಿದೆ. ಅಪಘಾತದ ಬಳಿಕ, ಅಲ್ಲಿ ಏನಾಯಿತು ಎಂಬುದನ್ನು ತಿಳಿಯಲು ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಯಾವುದೇ ವಿಡಿಯೋ ರೆಕಾರ್ಡ್ ಆಗಿಲ್ಲ. ಆದರೆ, ವಾಹನ ಮಾಲೀಕರೇ ಹೇಳುವುದಂತೆ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮೂರು ಬಾರಿ ಪಲ್ಟಿಯಾಗಿದೆ.
ಸದ್ಯ, ಕಿಯಾ ಸೆಲ್ಟೋಸ್ ಕಾರಿನ ಚಿತ್ರಗಳನ್ನು ಗಮನಿಸಿದರೆ, ಅಪಘಾತದ ರಭಸಕ್ಕೆ ಸಂಪೂರ್ಣ ಜಖಂಗೊಂಡಿದ್ದು, ರೂಫ್ ಹಾಗೂ ಪೀಲರ್ ಭಾಗಕ್ಕೆ ಹೆಚ್ಚಿನ ಹಾನಿಯಾಗಿದೆ. ಈ ಕಾರಿನ ಮಾಲೀಕ ತನ್ನ ಕುಟುಂಬದೊಂದಿಗೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಪ್ರಯಾಣಿಸುವಾಗ ಘಟನೆ ನಡೆದಿದ್ದು, ನಿಖರವಾದ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಅದೃಷ್ಟವಶಾತ್ ಅವರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದ ಕಾರಣ, ಅಪಾಯದಿಂದ ಪಾರಾಗಿದ್ದಾರೆ.

ಆದರೆ, ಆ ಮೂಕಜೀವಿಗೆ ಏನಾಯಿತು ಎಂಬುದರ ಕುರಿತು ವಿವರಗಳಿಲ್ಲ. ಕೆಲವೇ ದಿನಗಳ ಹಿಂದೆ, ಇದೇ ರೀತಿಯ ಘಟನೆ ನಡೆದಿತ್ತು. ಕಿಯಾ ಸೆಲ್ಟೋಸ್ ಕಾರೊಂದು ಹಸುವಿಗೆ ಡಿಕ್ಕಿಯೊಡೆದಿತ್ತು. ಆ ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದ್ದವು. ಕಿಯಾ ಸೆಲ್ಟೋಸ್ ಚಾಲಕ ಎಡದಿಂದ ಟ್ರಕ್ ಓವರ್ ಟೆಕ್ ಮಾಡಿ, ಬಲ ಪಥಕ್ಕೆ ಬರುತ್ತಿದ್ದಂತೆ ಏಕಾಏಕಿ ಹಸುವೊಂದು ಡಿವೈಡರ್ ಮೇಲಿಂದ ಹಾರಿ ಕಾರಿಗೆ ಗುದ್ದಿದೆ. ಅಲ್ಲಿ ಹೆಚ್ಚಿನ ಗಿಡಗಳು ಬೆಳೆದಿದ್ದರಿಂದ ಸೆಲ್ಟೋಸ್ ಚಾಲಕನಿಗೆ ಹಸು ಬರುತ್ತಿರುವುದು ಕಾಣಿಸಿಲ್ಲ.
ಕಾರಿಗೆ ಸ್ವಲ್ಪ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಅಲ್ಲಿ ಏನಾಯಿತು ಎಂದು ನೋಡಲು ಚಾಲಕ ಕೊಂಚ ಕಾರನ್ನು ನಿಧಾನ ಮಾಡಿ, ಹಿಂಭಾಗದ ಡ್ಯಾಶ್ಬೋರ್ಡ್ ಕ್ಯಾಮೆರಾದಿಂದ ಗಮನಿಸಿದಾಗ, ಡಿಕ್ಕಿಯಾದ ರಭಸಕ್ಕೆ ಹಸು ಹಾಗೂ ಕರು ರಸ್ತೆಯಲ್ಲಿ ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಗಾಬರಿಯಿಂದ ಎದ್ದು ಓಡಿವೆ. ಹೆದ್ದಾರಿಯಲ್ಲಿ ಜಾನುವಾರುಗಳು, ಕಾಡು ಪ್ರಾಣಿಗಳು ಬಂದು ಇಂತಹ ಘಟನೆಗಳು ಜರುಗುತ್ತಲೇ ಇರುತ್ತದೆ.

ಹೆದ್ದಾರಿಗಳಲ್ಲಿ ಸಂಭವಿಸುವ ಜಾನುವಾರು ಕಾಡು ಪ್ರಾಣಿಗಳ ಸಾವನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಬಿದಿರಿನಿಂದ ಮಾಡಲಾಗಿರುವ ಬಾಹುಬಲಿ ಬೇಲಿ ನಿರ್ಮಿಸಲು ನಿರ್ಧರಿಸಿದೆ. ಇದು ಉಕ್ಕಿನ ಪರ್ಯಾಯವಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ. ಇದಕ್ಕೆ ಕೆಲವು ರಾಸಾಯನಿಕಗಳನ್ನು ಲೇಪಿಸಲಾಗುತ್ತದೆ. ಇದನ್ನು ಜಾನುವಾರುಗಳು ದಾಟುವುದು ಕಷ್ಟ. ಜೊತೆಗೆ ಅವುಗಳಿಗೆ ಗಾಯಗಳು ಆಗುವುದಿಲ್ಲ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications