ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ ಕೆಟಿಡಿಸಿಯ ಇನ್ ಕಾರ್ ಡೈನಿಂಗ್ ಯೋಜನೆ
ಸುಮಾರು ಒಂದೂವರೆ ವರ್ಷದ ಹಿಂದೆ ಕಾಣಿಸಿಕೊಂಡ ಕರೋನಾ ವೈರಸ್ ಮಹಾಮಾರಿ ಜನರ ಜೀವನಶೈಲಿಯಲ್ಲೂ ದೊಡ್ಡ ಬದಲಾವಣೆಯನ್ನು ತಂದಿದೆ. ಹಲವು ವಿಷಯಗಳು ಮೊದಲಿನಂತೆ ಇರಲು ಸಾಧ್ಯವಿಲ್ಲ.

ಜನರು ಮೊದಲಿನಂತೆ ಪ್ರವಾಸ ಕೈಗೊಳ್ಳಲು ಸಹ ಹಿಂದೆ ಮುಂದೆ ನೋಡ ಬೇಕಾಗುತ್ತದೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರವಾಸ ಕೈಗೊಂಡಾಗ ಊಟ ಮಾಡುವುದು ಸವಾಲಾಗಿ ಪರಿಣಮಿಸಿದೆ.

ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಟಿಡಿಸಿ) ತಮ್ಮ ವಾಹನಗಳೊಳಗೆ ಪ್ರಯಾಣಿಕರಿಗೆ ಊಟ ನೀಡುವ ಹೊಸ ಯೋಜನೆಯನ್ನು ಆರಂಭಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಊಟ ಮಾಡುವಾಗ ಸೋಂಕು ಹರಡುವುದನ್ನು ತಡೆಯಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಗೆ ಇನ್ ಕಾರ್ ಡೈನಿಂಗ್ ಎಂಬ ಹೆಸರನ್ನಿಡಲಾಗಿದೆ.

ಈ ಯೋಜನೆಯಡಿಯಲ್ಲಿ ಗ್ರಾಹಕರು ಕೆಟಿಡಿಸಿಯ ಆಹಾರ್ ರೆಸ್ಟೋರೆಂಟ್ಗಳಲ್ಲಿ ಆಹಾರವನ್ನು ಆರ್ಡರ್ ಮಾಡಿ ಪಾರ್ಕಿಂಗ್ ಪ್ರದೇಶಗಳಲ್ಲಿಯೇ ಊಟ ಪಡೆಯಲುಸಾಧ್ಯವಾಗಲಿದೆ.

ಈ ಯೋಜನೆಯಡಿಯಲ್ಲಿ ಕೋವಿಡ್ 19 ಸುರಕ್ಷತಾ ನಿಯಮಗಳನ್ನು ಅನುಸರಿಸುವುದರ ಜೊತೆಗೆ ಬೆಳಗಿನ ಉಪಾಹಾರ, ಊಟ ಹಾಗೂ ಭೋಜನವನ್ನು ಒದಗಿಸಲಾಗುವುದು. ಈ ಯೋಜನೆಯ ಬಗ್ಗೆ ಕೇರಳದ ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಜ್ ಮಾಹಿತಿ ನೀಡಿದ್ದಾರೆ.

ಈ ಯೋಜನೆಯನ್ನು ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಅವಧಿಯಲ್ಲಿ ಜಾರಿಗೆ ತರಲಾಗುತ್ತಿದ್ದು, ಪ್ರವಾಸೋದ್ಯಮಕ್ಕೆ ನೆರವಾಗಲಿದೆ. ಜೊತೆಗೆ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಈ ಯೋಜನೆ ಆಯ್ದ ಕೆಟಿಡಿಸಿ ರೆಸ್ಟೋರೆಂಟ್ಗಳಲ್ಲಿ ಆರಂಭವಾಗಲಿದೆ. ನಮ್ಮ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲು ಇನ್ ಕಾರ್ ಡೈನಿಂಗ್ ಯೋಜನೆ ಶ್ರಮಿಸುತ್ತದೆ ಎಂದು ರಿಯಾಜ್ ತಿಳಿಸಿದರು.

ಇದೇ ವೇಳೆ ಅಸ್ತಿತ್ವದಲ್ಲಿರುವ ಪ್ರವಾಸೋದ್ಯಮ ಯೋಜನೆ ಹಾಗೂ ಕೆಟಿಡಿಸಿಯ ಚಟುವಟಿಕೆಗಳನ್ನು ಸಚಿವರು ಪರಿಶೀಲಿಸಿದರು. ತಿರುವನಂತಪುರಂನ ವೇಲಿ ಸೇರಿದಂತೆ ರಾಜ್ಯದಾದ್ಯಂತ ಆಯ್ದ ಸ್ಥಳಗಳಲ್ಲಿ ಫ್ಲೋಟಿಂಗ್ ರೆಸ್ಟೋರೆಂಟ್ಗಳನ್ನು ಸ್ಥಾಪಿಸಲಾಗುವುದು.
ಅವುಗಳಲ್ಲಿ ಮೊದಲನೆಯದು ಕಡಲುಂಡಿಯಲ್ಲಿದೆ. ಪ್ರವಾಸೋದ್ಯಮ ನಿಗಮದಡಿಯಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸುವುದರ ಜೊತೆಗೆ, ರುಚಿಕರವಾದ ಹಾಗೂ ಸುರಕ್ಷಿತವಾದ ಆಹಾರವನ್ನು ಜನರಿಗೆ ನೀಡಲು ನಮ್ಮ ಇಲಾಖೆ ಬಯಸಿದೆ ಎಂದು ಮೊಹಮ್ಮದ್ ರಿಯಾಜ್ ಹೇಳಿದರು.

ಮಿಷನ್ ಫೇಸ್ಲಿಫ್ಟ್ ಯೋಜನೆಯಡಿ ಕೆಟಿಡಿಸಿ ಹೋಟೆಲ್ ಸರಪಳಿಗಳನ್ನು ಆದ್ಯತೆಯ ಆಧಾರದ ಮೇಲೆ ನವೀಕರಿಸಲಾಗುತ್ತದೆ ಎಂದು ಇದೇ ವೇಳೆ ಮೊಹಮ್ಮದ್ ರಿಯಾಜ್ ಮಾಹಿತಿ ನೀಡಿದರು.


Click it and Unblock the Notifications