ಲಾಕ್ಡೌನ್ ಎಫೆಕ್ಟ್: ಮನೆ ತಲುಪಲು ಈರುಳ್ಳಿ ವ್ಯಾಪಾರಿಯಾದ ಭೂಪ..!
ಲಾಕ್ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ರೀತಿಯ ಸಾರಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಲಾಕ್ಡೌನ್ ಕಾರಣಕ್ಕೆ ಎಲ್ಲಾ ರಾಜ್ಯಗಳು ತಮ್ಮ ಗಡಿಗಳನ್ನು ಬಂದ್ ಮಾಡಿವೆ. ಲಾಕ್ಡೌನ್ ಅವಧಿಯಲ್ಲಿ ಟ್ಯಾಕ್ಸಿ, ಕಾರು, ಬಸ್, ರೈಲು ಹಾಗೂ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಲಾಕ್ಡೌನ್ ಅವಧಿಯಲ್ಲೂ ಜನರು ತಮ್ಮ ಮನೆಗಳನ್ನು ತಲುಪಲು ವಿವಿಧ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ರೀತಿಯ ಹಲವು ಘಟನೆಗಳು ವರದಿಯಾಗಿವೆ. ಈ ಘಟನೆಗಳಲ್ಲಿ ಜನರು ತಮ್ಮ ಮನೆಗಳನ್ನು ತಲುಪಲು ನೂರಾರು ಕಿ.ಮೀ ಪ್ರಯಾಣಿಸಿದ್ದಾರೆ. ಜನರು ತಮ್ಮ ಊರು ತಲುಪಲು ಹಲವು ವಿಧಾನಗಳನ್ನು ಬಳಸಿದ್ದಾರೆ.

ಮುಂಬೈನ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ತಮ್ಮ ಮನೆ ತಲುಪಲು 1400 ಕಿ.ಮೀ ಪ್ರಯಾಣಿಸಿದ್ದಾರೆ. ಆದರೆ ಹೀಗೆ ಪ್ರಯಾಣಿಸುವಾಗ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿಲ್ಲ ಎನ್ನುವುದೇ ವಿಶೇಷ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಪ್ರೇಮ್ ಮೂರ್ತಿ ಪಾಂಡೆಯವರಿಗೆ ಸಾರಿಗೆ ಸೇವೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಅರಿವಿದೆ. ಜನರು ಸಂಚರಿಸದಂತೆ ನಿಷೇಧ ಹೇರಲಾಗಿದ್ದರೂ, ಅಗತ್ಯ ವಸ್ತುಗಳನ್ನು ಸಾಗಿಸಲು ಯಾವುದೇ ನಿರ್ಬಂಧವಿಧಿಸುವುದಿಲ್ಲ ಎಂಬುದನ್ನು ಅವರು ತಿಳಿದಿದ್ದಾರೆ.

ಈ ಕಾರಣಕ್ಕೆ ಪ್ರೇಮ್ ಮೂರ್ತಿ ಪಾಂಡೆರವರು ತಮ್ಮ ಮನೆ ತಲುಪಲು ಈರುಳ್ಳಿ ವ್ಯಾಪಾರಿಯಾಗಲು ನಿರ್ಧರಿಸಿದರು. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅವರು ನಾಸಿಕ್ನ ಪಿಂಪಾಲ್ಗಾಂವ್ನಲ್ಲಿದ್ದ ಕಲ್ಲಂಗಡಿ ಸಾಗಿಸುವ ಮಿನಿ ಟ್ರಕ್ಗೆ ಕರೆ ಮಾಡಿದ್ದಾರೆ. ಅವರ ಈ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆ.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಯೋಜನೆ ಯಶಸ್ವಿಯಾದ ನಂತರ, ಪಾಂಡೆ ತಮ್ಮ ಮನೆ ತಲುಪಲು ಎರಡನೇ ಯೋಜನೆಯನ್ನು ರೂಪಿಸಿದರು. ಈ ಯೋಜನೆಯಂತೆ ಅವರು ಪಿಂಪಲ್ಗಾಂವ್ ಮಾರುಕಟ್ಟೆಯಿಂದ ರೂ.2.32 ಲಕ್ಷ ನೀಡಿ, 25.5 ಟನ್ ಈರುಳ್ಳಿಯನ್ನು ಖರೀದಿಸಿದರು. ನಂತರ ಈರುಳ್ಳಿ ಸಾಗಿಸಲು ಟ್ರಕ್ ಅನ್ನು ಬಾಡಿಗೆಗೆ ಪಡೆದರು.

ಪಾಂಡೆರವರು ಪಿಂಪಲ್ಗಾಂವ್ನಿಂದ ಉತ್ತರಪ್ರದೇಶಕ್ಕೆ ತೆರಳಲು ಟ್ರಕ್ ಅನ್ನು ಬಾಡಿಗೆಗೆ ಪಡೆದರು. ಇದಕ್ಕಾಗಿ ಟ್ರಕ್ ಮಾಲೀಕನಿಗೆ ರೂ.77,500 ನೀಡಿದರು. ಪಾಂಡೆರವರ ಈ ಯೋಜನೆ ಸಂಪೂರ್ಣ ಯಶಸ್ವಿಯಾಯಿತು. ಇಡೀ ಪ್ರಯಾಣದ ವೇಳೆಯಲ್ಲಿ ಎಲ್ಲಿಯೂ ಅವರನ್ನು ತಡೆದು ನಿಲ್ಲಿಸಿಲ್ಲ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅವರು ಈರುಳ್ಳಿ ಮಾರಾಟ ಮಾಡಲು ಉತ್ತರ ಪ್ರದೇಶದ ಮುಂಡೇರಾ ಮಾರುಕಟ್ಟೆಗೆ ಹೋದಾಗ, ಇಷ್ಟು ದೊಡ್ಡ ಪ್ರಮಾಣದ ಈರುಳ್ಳಿ ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ನಂತರ, ಬೇರೆ ದಾರಿ ಕಾಣದೇ ಅವರು ಈರುಳ್ಳಿಯೊಂದಿಗೆ ಕೊಟ್ವಾ ಮುಬಾರಕ್ ಗ್ರಾಮದಲ್ಲಿರುವ ತಮ್ಮ ಮನೆ ತಲುಪಿದರು. ಮನೆ ತಲುಪಿದ ನಂತರ ಇಡೀ ವಿಷಯ ಬೆಳಕಿಗೆ ಬಂದಿದೆ.

ಮಹಾಮಾರಿ ಕರೋನಾ ವೈರಸ್ ಹರಡುವಿಕೆ ತಡೆಯಲು ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಜಾರಿ ತರಲಾಗಿದ್ದು, ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಮೇ 3ರಿಂದ ಮತ್ತೆ 3ನೇ ಹಂತದ ಲಾಕ್ಡೌನ್ಗೆ ಸಿದ್ದತೆ ನಡೆಸಲಾಗುತ್ತಿದೆ.

ಸೋಂಕು ಪಿಡಿತ ಪ್ರದೇಶಗಳ ಆಧಾರದ ಮೇಲೆ ಈಗಾಗಲೇ 2ನೇ ಹಂತದ ಲಾಕ್ಡೌನ್ನಲ್ಲಿ ಗ್ರಿನ್ ಝೋನ್ಗಳಿಗೆ ಕೆಲವು ವಿನಾಯ್ತಿ ನೀಡಿರುವ ಕೇಂದ್ರ ಸರ್ಕಾರವು ವೈರಸ್ ಅನ್ನು ಪರಿಣಾಮಕಾರಿಯಾಗಿ ತಗ್ಗಿಸಲು ರೆಡ್ ಝೋನ್ನಲ್ಲಿರುವ ಕೆಲ ರಾಜ್ಯಗಳಲ್ಲಿ ಮೂರನೇ ಹಂತದ ಲಾಕ್ಡೌನ್ ವಿಧಿಸಲು ಸಿದ್ದತೆ ನಡೆಸಿದೆ.

ಆಯಾ ರಾಜ್ಯಗಳ ಬೇಡಿಕೆ ಮತ್ತು ಮನವಿ ಆಧಾರದ ಮೇಲೆ 3ನೇ ಹಂತದ ಲಾಕ್ಡೌನ್ ಅನ್ನು ವಿಸ್ತರಣೆ ಮಾಡಲಾಗುತ್ತಿದ್ದು, ತಮಿಳುನಾಡು ಸರ್ಕಾರವು 3ನೇ ಹಂತದ ಲಾಕ್ಡೌನ್ನಲ್ಲಿ ಕೆಲವು ಕಠಿಣ ಕ್ರಮಗಳಿಗೆ ಮುಂದಾಗಿದೆ.

ಕರೋನಾ ವೈರಸ್ ಹೆಚ್ಚಿರುವ ರಾಜ್ಯಗಳ ಪೈಕಿ ಟಾಪ್ 5 ಸ್ಥಾನದಲ್ಲಿರುವ ತಮಿಳುನಾಡು ಸರ್ಕಾರವು ಸಂಕಷ್ಟದ ಸಮಯದಲ್ಲೂ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಅಂತರಾಜ್ಯ ಸಂಪರ್ಕ ಕಡಿತಗೊಳಿಸಲು ತಡೆಗೊಡೆ ನಿರ್ಮಾಣ ಮಾಡುತ್ತಿದೆ.

ಕಠಿಣ ಕಾನೂನು ಕ್ರಮಗಳ ನಡುವೆಯೂ ಲಾಕ್ಡೌನ್ ಉಲ್ಲಂಘನೆ ಪ್ರಕರಣ ಹೆಚ್ಚುತ್ತಿರುವುದರಿಂದ ವೈರಸ್ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ತಡೆಗೊಡೆಯಿಂದ ಬಂದ್ ಮಾಡಲಾಗಿದೆ.

ತಮಿಳುನಾಡಿನಲ್ಲಿ 1800 ಕ್ಕೂ ಹೆಚ್ಚು ಕರೋನಾ ವೈರಸ್ ಕೇಸ್ಗಳಿದ್ದು, ಆಂಧ್ರಪ್ರದೇಶದಲ್ಲೂ 1 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ಗಳಿವೆ. ಹೀಗಾಗಿ ಎರಡು ರಾಜ್ಯಗಳ ನಡುವಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದ್ದು, ವೈರಸ್ ಹರಡುವಿಕೆಯನ್ನು ತಗ್ಗಿಸಲು ಈ ಕ್ರಮಕೈಗೊಳ್ಳಲಾಗಿದೆ.

ಲಾಕ್ಡೌನ್ ನಡುವೆಯೂ ಸಾವಿರಾರು ವಾಹನಗಳು ದಿನಂಪ್ರತಿ ಆಂಧ್ರ ಮತ್ತು ತಮಿಳುನಾಡು ನಡುವೆ ಸಂಚರಿಸುತ್ತಿದ್ದು, ವಾಹನಗಳನ್ನು ಸೀಜ್ ಮಾಡಲಾಗುತ್ತಿದ್ದರೂ ಸಹ ವಾಹನಗಳ ಓಡಾಟ ಮಾತ್ರ ನಿಲ್ಲುತ್ತಿಲ್ಲ. ಇದರಿಂದ ವೈರಸ್ ಪ್ರಮಾಣವು ಎರಡು ರಾಜ್ಯಗಳಿಗೂ ತಲೆ ನೋವಾಗಿ ಪರಿಣಮಿಸಿದ್ದು, ತಮಿಳುನಾಡು ಸರ್ಕಾರವು ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ 2 ರಾಜ್ಯ ಹೆದ್ದಾರಿಗಳನ್ನು ತಡೆಗೊಡೆಯಿಂದ ಬಂದ್ ಮಾಡಿದೆ.

ಚೆನ್ನೈ-ಪೊನ್ನಿ-ಚಿತ್ತೂರು ಮತ್ತು ಚಿತ್ತೂರು-ಗುಡಿಯತ್ತಂ ಸಂಪರ್ಕಗಳನ್ನು ಕಡಿತ ಮಾಡಿರುವ ಸ್ಥಳೀಯ ಆಡಳಿತ ಸಂಸ್ಥೆಗಳು 7 ಅಡಿ ಎತ್ತರದ ತಡೆಗೊಡೆ ನಿರ್ಮಿಸಿದ್ದು, ಸೋಂಕು ಹೆಚ್ಚಾಗದಂತೆ ತಡೆಯಲು ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

ತಮಿಳುನಾಡಿನಲ್ಲಿ ಮಾತ್ರವಲ್ಲದೇ ಇತರೆ ರಾಜ್ಯಗಳು ಸಹ ಇದೇ ಕ್ರಮಕೈಗೊಳ್ಳುವ ಸಾಧ್ಯತೆಗಳಿದ್ದು, ತಾತ್ಕಾಲಿಕವಾಗಿ ಅಂತರ್ರಾಜ್ಯಗಳಿಂದ ಬರುವ ವಾಹನಗಳನ್ನು ತಡೆಹಿಡಿದು ವೈರಸ್ ತಗ್ಗಿಸಲು ಇಂತಹ ಕಠಿಣ ಕ್ರಮಗಳು ಅನಿವಾರ್ಯವಾಗಿವೆ.

ಇನ್ನು ತಮಿಳುನಾಡಿನಲ್ಲಿ ಕರೋನಾ ವೈರಸ್ ಹರಡದಂತೆ ಹಾಕಲಾಗಿರುವ 2ನೇ ಹಂತದ ಲಾಕ್ಡೌನ್ ಅನ್ನು ಅಚ್ಚುಕಟ್ಟಾಗಿ ಜಾರಿಗೆ ತರಲಾಗಿದ್ದು, ಲಾಕ್ಡೌನ್ ಉಲ್ಲಂಘನೆ ಮಾಡಿದ ಸುಮಾರು 2.50 ಲಕ್ಷ ವಾಹನಗಳಿಗೆ ದಂಡ ಜಡಿದಿರುವುದಲ್ಲದೆ ತಪ್ಪು ಮಾಡಿದ್ದಕ್ಕಾಗಿ ವಾಹನಗಳ ಮುಂಭಾಗಕ್ಕೆ ಬಿಳಿ ಬಣ್ಣವನ್ನು ಬಳಿಯಲಾಗುತ್ತಿದೆ.

ಜೊತೆಗೆ ಲಾಕ್ಡೌನ್ ಉಲ್ಲಂಘನೆ ಮಾಡಿ ಮಾಸ್ಕ್ ಇಲ್ಲದೆ ಹೊರಗೆ ತಿರುಗುವವರಿಗೂ ದಂಡವಿಧಿಸಲಾಗುತ್ತಿದ್ದು, ಇದೀಗ ಅಂತರಾಜ್ಯ ಸಂಪರ್ಕ ಕಡಿತಕ್ಕೆ ನಿರ್ಮಾಣ ಮಾಡಿರುವ ತಡೆಗೊಡೆಯಿಂದ ವೈರಸ್ ಹರಡುವಿಕೆಯನ್ನು ತಗ್ಗಿಸುವ ಎಷ್ಟು ಸಹಕಾರಿಯಾಗಲಿದೆ ಎನ್ನುವುದನ್ನು ಕಾಯ್ದನೋಡಬೇಕಿದೆ.


Click it and Unblock the Notifications